ಹಿಂದೆ ನಿಜಾಮರ ಆಡಳಿತವಿದ್ದಾಗ ಹೈದರಾಬಾದ್ ರಾಜ್ಯದ ವಾರಂಗಲ್ ಹಾಗೂ ಮೇಡಕ್ ಪ್ರಾಂತ್ಯಗಳು ತೆಲಾಂಗಣದ ಭಾಗವಾಗಿದ್ದವು. ನಂತರ ಪ್ರವರ್ಧಮಾನಕ್ಕೆ ಬಂದ ಆಂಧ್ರಪ್ರದೇಶ ರಾಜ್ಯದಲ್ಲಿ ಇವು ವಿಲೀನಗೊಂಡವು. ಜೂನ್ 2, 2014 ರಲ್ಲಿ ಲೋಕಸಭೆಯಲ್ಲಿ ಅನುಮೋದನೆಗೊಂಡ ಮಸೂದೆಯ ಪ್ರಕಾರ, ಆಂಧ್ರಪ್ರದೇಶದಿಂದ ವಿಭಜನೆಗೊಂಡು ಭಾರತದ 29 ನೇಯ ರಾಜ್ಯವಾಗಿ ತೆಲಂಗಾಣ ರಾಜ್ಯವು ಅಸ್ತಿತ್ವಕ್ಕೆ ಬಂದಿತು.
ಪ್ರಸ್ತುತ, ಹೈದರಾಬಾದ್ ಪಟ್ಟಣವು ಆಂಧ್ರಪ್ರದೇಶ ಹಾಗೂ ತೆಲಂಗಾಣ ಇವೆರಡೂ ರಾಜ್ಯಗಳ ರಾಜಧಾನಿಯಾಗಿ ಕಾರ್ಯನಿರ್ವಹಿಸುತ್ತಿದೆ. ತೆಲಂಗಾಣ ರಾಜ್ಯವು ಉತ್ತರ ಹಾಗೂ ವಾಯವ್ಯಕ್ಕೆ ಮಹಾರಾಷ್ಟ್ರದಿಂದಲೂ, ಈಶಾನ್ಯಕ್ಕೆ ಛತ್ತೀಸಗಡ್ ರಾಜ್ಯದಿಂದಲೂ, ಪಶ್ಚಿಮಕ್ಕೆ ಕರ್ನಾಟಕ ರಾಜ್ಯದಿಂದಲೂ ಹಾಗೂ ಪೂರ್ವಕ್ಕೆ ಒಡಿಶಾ ರಾಜ್ಯದಿಂದಲೂ ಸುತ್ತುವರೆದಿದೆ.
ಹೆಸರಿನ ಹಿನ್ನಿಲೆ
ತೆಲುಗು ಭಾಷೆಯ ಪ್ರಭಾವದಿಂದ ಈ ಭಾಗಕ್ಕೆ ತೆಲಂಗಾಣ ಎಂಬ ಹೆಸರು ಬಂದಿದೆ ಎನ್ನಲಾಗಿದೆ. ತ್ರಿಲಿಂಗ ದೇಶದ ಪ್ರಕಾರ, ಹಿಂದೆ ಶಿವನು ಲಿಂಗರೂಪಿಯಾಗಿ ಕಾಲೇಶ್ವರಂ, ಶ್ರೀಶೈಲಂ ಹಾಗೂ ದ್ರಕ್ಷರಾಮಗಳಲ್ಲಿ ಬಂದಿಳಿದನು. ಇದರಿಂದ ಈ ಮೂರು ಭಾಗಗಳು ತ್ರಿಲಿಂಗ ದೇಶದ ಮೂರು ಗುರುತುಗಳಾದವು. ಕ್ರಮೇಣವಾಗಿ ಇದು ತಿಲಿಂಗಾ, ತೆಲುಂಗಾ ಹಾಗೂ ಕೊನೆಯದಾಗಿ ತೆಲುಗು ಎಂಬ ಪದವನ್ನು ಪಡೆಯಿತು. ತೆಲುಗುವಿನ ದಟ್ಟ ಪ್ರಭಾವವಿರುವುದರಿಂದ ಇದು ಮುಂದೆ ತೆಲಂಗಾಣ ಎಂದಾಯಿತು ಎನ್ನಲಾಗಿದೆ.
ಸಂಸ್ಕೃತಿ - ಕಲೆ
ಹಲವು ವೈವಿಧ್ಯಮಯ ಸಂಸ್ಕೃತಿ - ಸಂಪ್ರದಾಯಗಳನ್ನು ತೆಲಂಗಾಣದಲ್ಲಿ ಕಾಣಬಹುದಾಗಿದೆ. ಹಲವು ಆಚಾರ ವಿಚಾರಗಳಲ್ಲಿ ಭಾರತೀಯತೆ ಇದ್ದರೂ ಪರ್ಷಿಯನ್ ದೇಶದ ಪ್ರಭಾವವಿರುವುದು ನೋಡಬಹುದು. ಹೀಗಾಗಿ ಈ ರಾಜ್ಯವು ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಪ್ರದರ್ಶಿಸುತ್ತದೆ. ಉತ್ತರ ಭಾರತದಲ್ಲಿ ಆಚರಿಸಲಾಗುವ ಕೆಲವು ಪ್ರಖ್ಯಾತ ಹಬ್ಬ ಹರಿದಿನಗಳನ್ನು ಈ ರಾಜ್ಯದಲ್ಲಿಯೂ ಅತಿ ಸಡಗರದಿಂದ ಆಚರಿಸಲಾಗುವುದನ್ನು ನಾವು ನೋಡಬಹುದು. ಪೋತನ (ಭಾಗವತವನ್ನು ತೆಲುಗು ಭಾಷೆಗೆ ಭಾಷಾಂತರಿಸಿದವರು) ರಂತಹ ಕಲಾವಿದರು ಈ ರಾಜ್ಯವನ್ನು ಮತ್ತಷ್ಟು ಪ್ರಸಿದ್ಧಗೊಳಿಸಿದ್ದಾರೆ.
ಅತಿ ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಗುವ ಕೆಲವು ಉತ್ಸವಗಳೆಂದರೆ ಬೋನಾಲು, ಬತುಕಮ್ಮಾಮತ್ತು ಸಮ್ಮಕ್ಕಾ ಸರಳಮ್ಮಾ ಜಾತ್ರೆ. ಅಲ್ಲದೆ ದಸರಾ, ಗಣೇಶ ಚತುರ್ಥಿ ಹಾಗೂ ಉಗಾದಿ ಹಬ್ಬಗಳನ್ನೂ ಸಹ ಇಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.
ರಾಜ್ಯದ ರುಚಿ ರುಚಿ ಖಾದ್ಯ
ತೆಲುಗು ಹಾಗೂ ಹೈದರಾಬಾದಿ ಎಂಬ ಎರಡು ಖಾದ್ಯಗಳು ಈ ರಾಜ್ಯದಲ್ಲಿ ಪ್ರಸಿದ್ಧವಾಗಿವೆ. ತೆಲುಗು ಪಾಕ ಪದ್ಧತಿಯು ಖಾರಮಯವಾಗಿದ್ದು ಭಾರತೀಯ ಮೂಲದ್ದಾಗಿದ್ದರೆ, ಹೈದರಾಬಾದಿ ಪಾಕ ಪದ್ಧತಿಯು ಮುಘಲ್, ಟರ್ಕಿ ಹಾಗೂ ಪರ್ಶಿಯಾ ದೇಶಗಳ ಪ್ರಭಾವ ಹೊಂದಿರುವುದನ್ನು ಕಾಣಬಹುದು.
ತೆಲಂಗಾಣ ಪ್ರವಾಸೋದ್ಯಮ
ಪ್ರವಾಸಿ ದೃಷ್ಟಿಯಿಂದ ತೆಲಂಗಾಣ ರಾಜ್ಯವು ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರನ್ನು ಸೆಳೆಯುತ್ತದೆ. ಹೈದರಾಬಾದಿನ ಪ್ರಖ್ಯಾತ ಚಾರ್ ಮಿನಾರ್, ಪಾಪಿ ಬೆಟ್ಟಗಳು, ಕುಂಟಲಾ ಜಲಪಾತ ಮುಂತಾದ ಹಲವು ಆಕರ್ಷಣೆಗಳು ಈ ರಾಜ್ಯದಲ್ಲಿರುವುದನ್ನು ನೋಡಬಹುದು. ಮಾಹಿತಿ ತಂತ್ರಜ್ಞಾನದಲ್ಲಿ ಗಣನೀಯ ಹೆಸರು ಮಾಡಿರುವ ಹೈದರಾಬಾದ್ ನಗರದಲ್ಲೆ ವೈವಿಧ್ಯಮಯ ಪ್ರವಾಸಿ ಆಕರ್ಷಣೆಗಳನ್ನು ಕಾಣಬಹುದು. ಭದ್ರಾಚಲಂ, ಸಾವಿರ ಖಂಬಗಳ ದೇವಾಲಯ, ಶ್ರೀ ರಾಜ ರಾಜೇಶ್ವರ ಸ್ವಾಮಿ ದೇವಾಲಯದಂತಹ ಪ್ರಮುಖ ಧಾರ್ಮಿಕ ಸ್ಥಳಗಳನ್ನು ಈ ರಾಜ್ಯದಲ್ಲಿ ಕಾಣಬಹುದಾಗಿದೆ.
ಸಾರಿಗೆ ಸಂಚಾರ
ರಾಜ್ಯದ ರಾಜಧಾನಿ ಹೈದರಾಬಾದ್ ಅಂತಾರಾಷ್ಟ್ರೀಯ ಮಟ್ಟದ ತಾಣವಾಗಿದ್ದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಸುಸಜ್ಜಿತ ರೈಲು ನಿಲ್ದಾಣ ಹಾಗೂ ಬಸ್ಸು ನಿಲ್ದಾಣಗಳನ್ನು ಹೊಂದಿದೆ. ಅಲ್ಲದೆ ಭಾರತದ ಪ್ರಮುಖ ನಗರಗಳೊಂದಿಗೆ ರೈಲು ಹಾಗೂ ವಿಮಾನಗಳ ಮೂಲಕ ಉತ್ತಮ ಸಂಪರ್ಕ ಹೊಂದಿದೆ. ರಾಜ್ಯದ ಇತರೆ ಪ್ರಮುಖ ಪಟ್ಟಣಗಳೂ ಸಹ ಉತ್ತಮ ರೈಲು ಹಾಗೂ ರಸ್ತೆ ಜಾಲವನ್ನು ಹೊಂದಿದ್ದು ದೇಶದ ಹಲವು ಇತರೆ ನಗರಗಳೊಂದಿಗೆ ಉತ್ತಮ ಸಮ್ಪರ್ಕವನ್ನು ಹೊಂದಿವೆ.