ಭಾರತದಲ್ಲಿ ವಿಶೀಷ್ಟ ರೀತಿಯ ಸಂಪ್ರದಾಯ-ಸಂಸ್ಕೃತಿ, ಅಚಾರ-ವಿಚಾರಗಳನ್ನು ಹೊತ್ತುನಿಂತಿರುವ ಅದ್ಭುತವಾದ ರಾಜ್ಯ ದಕ್ಷಿಣದ ತುದಿಯಾದ ತಮಿಳುನಾಡು. ಎಲ್ಲಾ ಬಗೆಯ ಅಭಿರುಚಿಯುಳ್ಳ ಒಬ್ಬ ಪ್ರಬುದ್ಧ ಪ್ರವಾಸಿಗನಿಗೆ, ವೈವಿಧ್ಯಮಯ ಸ್ಥಳ ಸಂಸ್ಕೃತಿಯ ಮೂಲಕ ಸಂತೃಪ್ತಗೊಳಿಸಬಲ್ಲ ರಾಜ್ಯ ಇದಾಗಿದೆ. ಇಲ್ಲಿನ ಸಂಸ್ಕೃತಿ ಎಷ್ಟೊಂದು ವಿಶೀಷ್ಟತೆಯಿಂದ ಕೂಡಿದೆ ಎಂದರೆ ಇದೊಂದು ಆದರ್ಶಪ್ರಾಯವಾದ ಪ್ರವಾಸಿ ತಾಣವಾಗಿದೆ.
ತಮಿಳುನಾಡು ಗಿರಿಧಾಮಗಳು - ಆಕರ್ಷಕ ಪ್ರವಾಸಿ ತಾಣಗಳು
ಸಾಕಷ್ಟು ಜನ ಪ್ರವಾಸಿಗರು ತಮಿಳುನಾಡಿನ ಗಿರಿಧಾಮಗಳಿಗೆ ಭೇಟಿ ನೀಡುತ್ತಲೆ ಇರುತ್ತಾರೆ, ಅದರಲ್ಲೂ ವಿಶೇಷವಾಗಿ ಊಟಿ ಹಾಗು ಕೊಡೈಕೆನಲ್ ಅತಿ ಮುಖ್ಯವಾದವುಗಳು. ನಿಲ್ಗಿರೀಸ್ ನಲ್ಲಿ ಕಂಡುಬರುವ ಊಟಿ, ಕುಣ್ಣೂರ್, ಕೋತಗಿರಿ ಮುಂತಾದವುಗಳಂತೂ ತಮ್ಮಲ್ಲಿರುವ ಪ್ರಾಕೃತಿಕ ಸೌಂದರ್ಯ ಹಾಗು ಹಿತಕರವಾದ ಹವಾಮಾನಗಳಿಗೆ ಅತ್ಯಂತ ಹೆಸರುವಾಸಿಯಾಗಿವೆ. ಸೇಲಂ ಜಿಲ್ಲೆಯಲ್ಲಿರುವ ಯರಾಕುಡ್ ಮತ್ತೊಂದು ಜನಪ್ರಿಯವಾದ ಗಿರಿಧಾಮವಾಗಿದ್ದರೆ, ಯಳಗಿರಿ, ಕೊಲ್ಲಿ ಬೆಟ್ಟಗಳು ಮತ್ತು ವಲ್ಪರೈನಂತಹ ತಾಣಗಳು ನಿಧಾನವಾಗಿ ಪ್ರವರ್ಧಮಾನಕ್ಕೆ ಬರುತ್ತಿವೆ.
ತಮಿಳುನಾಡು ಕಡಲ ತೀರಗಳು
ತಮಿಳುನಾಡಿನ ಪ್ರವಾಸಿ ಕಡಲ ತೀರಗಳು ರಜೆಯ ಮಜೆಯನ್ನು ಅನುಭವಿಸಲು ಹೇಳಿ ಮಾಡಿಸಿದಂತಿವೆ. ಮಹಾಬಲಿಪುರಂ ಅಂತೂ 'ಬೀಚ್ ಹಾಲಿಡೆ'ಗೆ ಆದರ್ಶಪ್ರಾಯವಾದ ಸ್ಥಳವಾಗಿದೆ. ಇನ್ನು ರಾಜಧಾನಿಯಾದ ಚೆನ್ನೈಗೆ ಭೇಟಿ ನೀಡುವವರು ಇಲ್ಲಿರುವ ಮರೀನಾ ಹಾಗು ಬೆಸಂಟ್ ನಗರ್ ಬೀಚ್ ಗಳಿಗೆ ಭೇಟಿ ನೀಡದೆ ಮರಳಲಾರರು. ಚೆನ್ನೈ ಮತ್ತು ಮಹಾಬಲಿಪುರಂ ಬೀಚುಗಳ ಹೆಚ್ಚುವರಿ ಸಂಗ್ರಹವಾದ ಕೊವ್ಲಾಂಗ್ ಬೀಚ್ ತನ್ನದೆ ಆದ ಅನನ್ಯ ಸೌಂದರ್ಯಕ್ಕಾಗಿ ಹೆಸರುವಾಸಿಯಾಗಿದೆ.
ತಮಿಳುನಾಡು ರಾಜ್ಯದ ನಾಗಾಪಟ್ಟಿನಾಂ ಜಿಲ್ಲೆಯಲ್ಲಿ ಹಲವಾರು ಕರಾವಳಿ ತೀರಗಳನ್ನು ಕಾಣಬಹುದಾಗಿದ್ದು, ಅವುಗಳೆಂದರೆ ನಾಗೂರ್, ವೆಲಾಂಕನಿ, ಸಿಕ್ಕಲ್, ಕೊಡಿಯಾಕ್ಕಾರೈ, ವೇದಾರಣ್ಯಂ, ಮನ್ನರ್ಗುಡಿ ಮತ್ತು ಟ್ರಾಂಕ್ವೆಬಾರ್. ಇವುಗಳಲ್ಲಿ ನಾಗೂರ್ ಬಂಗಾಳ ಕೊಲ್ಲಿಯ ಕರಾವಳಿ ತೀರದಲ್ಲಿರುವ ಒಂದು ಚಿಕ್ಕ ಪ್ರಶಾಂತ ಪಟ್ಟಣವಾಗಿದ್ದು ತಮಿಳುನಾಡು ಮತ್ತು ಪಾಂಡಿಚೆರಿಯ ಗಡಿಗಳಲ್ಲಿ ನೆಲೆಸಿದೆ.
ಪೂಂಪುಹಾರ್, ತಮಿಳುನಾಡಿನ ಕರಾವಳಿ ತೀರ ಪ್ರದೇಶವಾಗಿರುವುದೂ ಮಾತ್ರವಲ್ಲದೆ ಐತಿಹಾಸಿಕ ಪ್ರಾಮುಖ್ಯತೆಯನ್ನೂ ಪಡೆದ ಸ್ಥಳವಾಗಿದೆ. ಜನಪ್ರಿಯ ತಮಿಳು ಮಹಾಕಾವ್ಯವಾದ 'ಸಿಲಪತಿಕಾರಂ' ನಲ್ಲೂ ಇದರ ಉಲ್ಲೇಖವಿದೆ. ಬೇ ಆಫ್ ಬೆಂಗಾಲ್, ಅರೇಬಿಯನ್ ಸಮುದ್ರ ಹಾಗು ಹಿಂದು ಮಹಾಸಾಗರ ಸಮಾಗಮವಾಗುವ ಸ್ಥಳದಲ್ಲಿ ಕನ್ಯಾಕುಮಾರಿಯು ನೆಲೆಸಿದ್ದು, ಇದು ಭಾರತ ದೇಶದ ದಕ್ಷಿಣದ ತುತ್ತ ತುದಿಯಾಗಿದೆ.
ಇದರ ಭೌಗೋಳಿಕ ರಚನೆಯು ವೈವಿಧ್ಯಮಯ ಆಕರ್ಷಣೆಗಳನ್ನು ಒಳಗೊಂಡಿದ್ದು, ಇದನ್ನು ತಮಿಳುನಾಡಿನ ಒಂದು ಬಹು ಬೇಡಿಕೆಯ ಪ್ರವಾಸಿ ತಾಣವನ್ನಾಗಿಸಿದೆ. ಸಮುದ್ರ ತೀರದಲ್ಲಿ ನೆಲೆಸಿರುವ ಪ್ರಮುಖ ಧಾರ್ಮಿಕ ಕೇಂದ್ರಗಳೆಂದರೆ ತಿರುಚೆಂಡೂರ್ ಮತ್ತು ರಾಮೇಶ್ವರಂ.
ತಮಿಳುನಾಡು ಸಂಸ್ಕೃತಿ ಮತ್ತು ಸಂಪ್ರದಾಯ ಕೇಂದ್ರಗಳು
ತಮಿಳುನಾಡಿನಲ್ಲಿ ಸ್ಥಳೀಯ ಸಂಸ್ಕೃತಿ ಹಾಗು ಸಂಪ್ರದಾಯವನ್ನು ಪ್ರತಿನಿಧಿಸುವ ಹಲವು ಪ್ರಬಲ ಪ್ರವಾಸಿ ಸ್ಥಳಗಳನ್ನು ಕಾಣಬಹುದಾಗಿದ್ದು, ದೇಶೀಯ ಮತ್ತು ವಿದೇಶಿಯ ಪ್ರವಾಸಿಗರಿಬ್ಬರಿಂದಲೂ ಭೇಟಿ ನೀಡಲ್ಪಡುತ್ತವೆ.ಚೆಟ್ಟಿನಾಡ್ ಇಂತಹ ಒಂದು ಪ್ರಮುಖ ಪ್ರದೇಶವಾಗಿದ್ದು, ಕಾರೈಕುಡಿ ಸ್ಥಳವು ಈ ಸಂಸ್ಕೃತಿಯ ಪ್ರಮುಖ ಭಾಗವಾಗಿದೆ.
ಇಲ್ಲಿ ಕಾಣಬಹುದಾದ ಶಾಸ್ತ್ರೀಯ ಖಾದ್ಯ, ಉಡುಗೆಗಳು, ದೇವಾಲಯಗಳು ಮತ್ತು ರಿಸಾರ್ಟುಗಳಾಗಿ ಪರಿವರ್ತಿತವಾದ ಅರಮನೆಗಳು ತಮಿಳು ಸಂಸ್ಕೃತಿಯನ್ನು ಪ್ರತಿನಿಧಿಸುವ ಮಹತ್ವದ ಮೂಲಗಳಾಗಿವೆ. ಕೊಂಗು ಸಂಸ್ಕೃತಿಯನ್ನು ಹೊತ್ತ ಕೊಯಮತ್ತೂರು, ದೇವಾಲಯಗಳ ನಗರಿ ಮದುರೈ ಮತ್ತು ತಂಜಾವೂರುಗಳು ಆಧುನಿಕತೆಯಲ್ಲೂ ಸಂಸ್ಕೃತಿಯನ್ನು ಪ್ರದರ್ಶಿಸುತ್ತಿರುವ ತಾಣಗಳಾಗಿವೆ.
ತಮಿಳುನಾಡು ದೇವಾಲಯಗಳು
ತಮಿಳುನಾಡು ರಾಜ್ಯವು ಮುಖ್ಯವಾಗಿ ತನ್ನಲ್ಲಿರುವ ದೇವಾಲಯಗಳಿಂದಾಗಿಯೆ ಪ್ರಸಿದ್ಧಿಯನ್ನು ಪಡೆದಿದೆ. ಇಲ್ಲಿ ಕಾಣಬಹುದಾದ ಅಸಂಖ್ಯಾತ ದೇವಾಲಯಗಳ ಗೋಪುರಗಳು ತಮ್ಮ ಸೂಕ್ಷ್ಮ ಹಾಗು ಅದ್ಭುತ ಕೆತ್ತನೆಯ ಕೆಲಸಗಳಿಗಾಗಿ ಹೆಸರುವಾಸಿಯಾಗಿವೆ. ಇಂತಹ ಕಲೆಗಳಿಗೆ ಎರಡು ಪ್ರಖ್ಯಾತ ಉದಾಹರಣೆಗಳೆಂದರೆ ಇಲ್ಲಿನ ತಂಜಾವೂರು ಮತ್ತು ಕುಂಭಕೋಣಂ. ಶತಮಾನಗಳ ಹಿಂದೆ ಈ ಪ್ರದೇಶಗಳನ್ನು ಆಳಿದ ಆಡಳಿತಗಾರರು ಈ ಅದ್ಭುತ ಕಲೆಗಳಿಗೆ ಸೂತ್ರಗಾರರಾಗಿದ್ದಾರೆ.
ಇನ್ನುಳಿದಂತೆ ದಾರಾಸುರಂ, ಮಯಿಲಾಡುತುರೈ, ತಿರುವರೂರ್, ತಿರುಮನಂಚೇರಿ, ತಿರುಕಾರುಕಾವೂರ್ ಮುಂತಾದ ಪ್ರದೇಶಗಳೂ ಕೂಡ ತಮ್ಮಲ್ಲಿನ ಅದ್ಭುತ ಕಲೆಯ ದೇವಾಲಯಗಳಿಗಾಗಿ ಜನಪ್ರಿಯವಾಗಿವೆ. ಪಾಂಡ್ಯ ರಾಜರಿಂದ ನಿರ್ಮಿಸಲ್ಪಟ್ಟ ಮದುರೈ ಮೀನಾಕ್ಷಿ ದೇವಸ್ಥಾನವು ತಮಿಳುನಾಡಿನ ದೇವಾಲಯಗಳ ಕಲೆಯ ದೃಷ್ಟಿಯಿಂದ ನೋಡಿದಾಗ ಉತ್ತುಂಗ ಸ್ಥಾನದಲ್ಲಿ ನಿಲ್ಲುತ್ತದೆ. ಮತ್ತೊಂದೆಡೆ ಶಾಂತ ಸಮುದ್ರದ ಅಲೆಗಳ ದಡದಲ್ಲಿ ಪ್ರಶಾಂತವಾಗಿ ನಿಂತಿರುವ ರಾಮೇಶ್ವರಂ ದೇವಸ್ಥಾನವು ಭಾರತದಲ್ಲಿ ಕಂಡುಬರುವ ಪವಿತ್ರ 12 ಜ್ಯೋತಿರ್ಲಿಂಗಗಳ ಪೈಕಿ ಒಂದಾಗಿದೆ.
ಇಷ್ಟೆ ಅಲ್ಲದೆ ತಮಿಳುನಾಡಿನಲ್ಲಿ ಆಧ್ಯಾತ್ಮಿಕ ವಿಷಯ ಸಂಬಂಧಿತ ಹಲವಾರು ದೇವಸ್ಥಾನಗಳೂ ಇದ್ದು, ಧಾರ್ಮಿಕ ಯಾತ್ರೆಯ ಪ್ರಾಮುಖ್ಯತೆಯನ್ನು ಪಡೆದಿವೆ.ಇಲ್ಲಿನ ತಂಜಾವೂರಿನ ಸುತ್ತಮುತ್ತಲಿನಲ್ಲಿ ನವಗ್ರಹಗಳ ದೇವಾಲಯಗಳನ್ನು ಕಾಣಬಹುದಾಗಿದ್ದು, ದೇಶಾದ್ಯಂತ ಬಹುಸಂಖ್ಯೆಯಲ್ಲಿ ಧಾರ್ಮಿಕ ನಂಬುಗೆಯ ಪ್ರವಾಸಿಗರನ್ನು ಆಕರ್ಷಿಸುತ್ತವೆ. ಆ ನವಗ್ರಹ ದೇವಸ್ಥಾನಗಳೆಂದರೆ ಆಲಂಗುಡಿ(ಗುರು), ತಿರುನಲ್ಲಾರ್(ಶನಿ), ಕಂಜನೂರ್(ಶುಕ್ರ), ತಿರುವೆಂಕಾಡು(ಬುಧ), ತಿರುನಾಗೇಸ್ವರಂ(ರಾಹು), ಕೀಳಾಪೆರುಂಪಲ್ಲಂ(ಕೇತು), ಸೂರಿಯಾನರ್ ಕೋಯಿಲ್(ಸೂರ್ಯ), ತಿಂಗಳೂರು(ಚಂದ್ರ) ಮತ್ತು ವೈದೀಸ್ವರನ್ ಕೋಯಿಲ್(ಮಂಗಳ).
ಪಂಚಭೂತ ದೇವಾಲಯಗಳು: ಪಂಚಭೂತಗಳ ಮೂಲ ಹಾಗು ಸೃಷ್ಟಿಕರ್ತನೆಂದೆ ನಂಬಲಾಗಿರುವ ಪರಮ ಶಿವನಿಗೆ ಸಮರ್ಪಿತವಾದ ದೇವಾಲಯಗಳಿವು. ಇವುಗಳಲ್ಲಿ ನಾಲ್ಕು ದೇವಸ್ಥಾನಗಳನ್ನು ತಮಿಳುನಾಡಿನ ತಿರುವನೈಕಾವಲ್, ತಿರುವಣ್ಣಾಮಲೈ, ಕಾಂಚೀಪುರಂ ಮತ್ತು ಚಿದಂಬರಂಗಳಲ್ಲಿ ಕಾಣಬಹುದಾಗಿದ್ದು, ಉಳಿದ ಒಂದು ದೇವಸ್ಥಾನವನ್ನು ಆಂಧ್ರದ ಕಾಳಹಸ್ತಿಯಲ್ಲಿ ನೋಡಬಹುದು.ಶೌರ್ಯ ಮತ್ತು ಬುದ್ಧಿಮತ್ತೆಗೆ ಹೆಸರುವಾಸಿಯಾದ ತಮಿಳುನಾಡಿನ ಮುಖ್ಯ ದೇವತೆ ಸುಬ್ರಮಣ್ಯ ಅಥವಾ 'ಮುರುಗ' ನಿಗೆ ಸಮರ್ಪಿತವಾದ 6 ಯುದ್ಧ ಶಿಬಿರಗಳು ಎಂದೆ ಪ್ರಖ್ಯಾತವಾದ ದೇವಾಲಯಗಳನ್ನು ಪಳನಿ, ತಿರುಪರಂಕುಂದ್ರಂ, ತಿರುಚೆಂಡೂರ್, ಪಲಮುದಿರ್ಚೊಲೈ, ತಿರುತಾನಿ ಮತ್ತು ಸ್ವಾಮಿಮಲೈಗಳಲ್ಲಿ ಕಾಣಬಹುದಾಗಿದೆ. ಈ ದೇವಾಲಯಗಳು ತಮ್ಮದೆ ಆದ ದೈವಿಕ ಪ್ರಾಮುಖ್ಯತೆಯನ್ನು ಹೊಂದಿವೆ.
ತಮಿಳುನಾಡು ನಗರಗಳು
ತಮಿಳುನಾಡಿನ ರಾಜ್ಯಾದಂತ ಸುತ್ತಾಡಲು ಹಲವಾರು ಪ್ರಮುಖ ನಗರಗಳನ್ನು ಹೀಗೆ ಹೆಸರಿಸಬಹುದು. ಚೆನ್ನೈ, ಕೊಯಮತ್ತೂರು, ಮದುರೈ, ತ್ರಿಚಿ, ಸೇಲಂ, ಈರೋಡ್, ವೆಲ್ಲೋರ್, ತಿರುಪೂರ್, ತಿರುನೇಲ್ವೆಲಿ ಮತ್ತು ತೂತುಕುಡಿ.