ಪ್ರವಾಸಿಗರಿಗೆ ಸಮಯಾವಕಾಶ ದೊರೆತರೆ ಒಮ್ಮೆ ವೈದ್ಯನಾಥೇಶ್ವರ ದೇವಾಲಯಕ್ಕೆ ಭೇಟಿ ಕೊಡಬಹುದು. ಇಲ್ಲಿ ಮನೋನ್ಮನಿ ದೇವಿಯ, ಸುಬ್ರಹ್ಮಣ್ಯ ಸ್ವಾಮಿಯ ಮತ್ತು ಗಣಪತಿಯ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಈ ದೇವಾಲಯಕ್ಕೆ ಹೋಗುವಾಗ ಯಾತ್ರಾರ್ಥಿಗಳು ಇಲ್ಲಿನ ಮಂಟಪದಲ್ಲಿ ಸ್ಥಾಪಿಸಲಾಗಿರುವ ದುರ್ಗ, ಶಾರದಾಂಬೆ, ನಟರಾಜ, ಭದ್ರಕಾಳಿ ಮತ್ತು ಕಾಳಿಕಾಂಬ ಮೂರ್ತಿಗಳನ್ನು ವೀಕ್ಷಿಸಬಹುದು. ಈ ದೇವಾಲಯವೂ ಈಗ ಮರಳಿನಲ್ಲಿ ಸೇರಿಹೋಗಿದೆ. ಈ ದೇವಾಲಯವನ್ನು 14ನೇ ಶತಮಾನದಲ್ಲಿ ಚೋಳರ ಆಳ್ವಿಕೆ ಇದ್ದಾಗ ನಿರ್ಮಿಸಲಾಗಿದ್ದು, ಇದು ದ್ರಾವಿಡ ಶೈಲಿಯ ವಾಸ್ತುಶಿಲ್ಪವನ್ನು ಹೊಂದಿದೆ.ದೇವಾಲಯಕ್ಕೆ ಪ್ರವೇಶಿಸಿದೊಡನೆ ನಾವು ನವರಂಗವನ್ನು ನೋಡಬಹುದು. ಇಲ್ಲಿನ ಬಾಗಿಲ ಬಳಿ ಬೃಹತ್ ಗಾತ್ರದ ದ್ವಾರಪಾಲಕರ ವಿಗ್ರಹಗಳನ್ನು ನೋಡಬಹುದು. ಮುಖ್ಯ ದೇವಾಲಯದ ದ್ವಾರವು ಪೂರ್ವಕ್ಕೆ ಇದ್ದು ಸುಂದರವಾಗಿ ಅಲಂಕೃತಗೊಂಡಿದೆ. ಮುಖ್ಯ ದೇವಾಲಯವು ಬೃಹತ್ ಶಿವಲಿಂಗವನ್ನು ಹೊಂದಿದ್ದು, ತನ್ನ ಹಿಂಭಾಗದಲ್ಲಿ ಶಿವನ ಮುಖದ ಕೆತ್ತನೆಯನ್ನು ಹೊಂದಿದೆ. ಈ ಶಿವಲಿಂಗದ ಬಳಿಯಲ್ಲಿ ಪಾರ್ವತಿ, ವಿಷ್ಣು, ಅಲಮೇಲುಮಂಗ, ವಿವಿಧ ರುದ್ರಾಕ್ಷದೊಂದಿಗೆ ಇರುವ ಶಿವಲಿಂಗ, ಕಾಳಿಕಾಂಬ ಮತ್ತು ಗಣೇಶ ಮೂರ್ತಿಗಳನ್ನು ಪ್ರತಿಷ್ಟಾಪಿಸಲಾಗಿದೆ.ದೇವಾಲಯದ ಪ್ರಾಂಗಣ ಅಥವ ಪ್ರಾಕಾರವು ಹಲವು ಬಗೆಯ ಶಿವಲಿಂಗಗಳನ್ನು ಹೊಂದಿದೆ. ಇಲ್ಲಿ ಷಣ್ಮುಖ, ವಿನಾಯಕಾ, ಚಾಮುಂಡೇಶ್ವರಿ, ಚಂಡಿಕೇಶ್ವರ ಮತ್ತು ಮನೋನ್ಮನಿ ದೇವರುಗಳ ಮೂರ್ತಿಗಳು ಇವೆ. ಪ್ರಾಂಗಣದ ತುದಿಯಲ್ಲಿ ಒಂದು ಸಣ್ಣ ನಂದಿರೂಢ ಶಿವನ ವಿಗ್ರಹವಿದೆ. ಪಂಚಲಿಂಗ ದರ್ಶನದ ವೇಳೆ ಭಕ್ತಾಧಿಗಳು ಭೇಟಿಕೊಡುವ ಪ್ರಾಚೀನ ದೇವಾಲಯಗಳಲ್ಲಿ ಇದು ಒಂದು.