ಗಣಪತಿವಟೊಂ ಎಂತಲೂ ಕರೆಯಿಸಿಕೊಳ್ಳುವ ಸುಲ್ತಾನ ಬಥೆರಿಯು ಕೇರಳದ ವಯನಾಡ್ ಜಿಲ್ಲೆಯಲ್ಲಿ ಕೇರಳ ಮತ್ತು ಕರ್ನಾಟಕರಾಜ್ಯಗಳ ಗಡಿಯಲ್ಲಿದೆ. ಈ ಪ್ರದೇಶವು ಒಂದು ದಿನದ ಪ್ರವಾಸಕ್ಕೇ ತುಂಬಾ ಸೂಕ್ತವಾಗಿದೆ. ಈ ಪ್ರಶಾಂತ ಸ್ಥಳವು ಮೈಸೂರಿನ ಟಿಪ್ಪು ಸುಲ್ತಾನನಿಂದ ಆಕ್ರಮಣಕ್ಕೊಳಪಟ್ಟಿತ್ತು. ಇಲ್ಲಿನ ಜೈನ ದೇವಾಲಯವನ್ನು ಟಿಪ್ಪು ಸುಲ್ತಾನನು ತನ್ನ ಫಿರಂಗಿಗಳ ತಂಡಗಳನ್ನು ಇರಿಸಲು ಬಳಸಿದ್ದನೆಂಬ ಕಾರಣಕ್ಕೆ ಈ ಸ್ಥಳವು ಸುಲ್ತಾನ್ ಬಥೆರಿ ಎಂಬ ಹೆಸರನ್ನು ಪಡೆಯಿತು ಎನ್ನಲಾಗುತ್ತದೆ. ಸುಲ್ತಾನ್ ಬಥೆರಿಯು ಐತಿಹಾಸಿಕವಾಗಿ ಮಾತ್ರವಲ್ಲದೇ ಭವ್ಯವಾದ ಬೆಟ್ಟಗಳಿಂದ ಸುತ್ತುವರಿಯಲ್ಪಟ್ಟಿದ್ದು ಹುಲ್ಲುಗಾವಲುಗಳ ತೇಪೆಯಿಂದ ಹೆಣೆದುಕೊಂಡು ಚಿತ್ರಸದೃಶವಾಗಿ ಕಣ್ತಣಿಸುತ್ತದೆ.
ಸುಲ್ತಾನ್ ಬಥೆರಿಯು ವಯನಾಡ್ ಜಿಲ್ಲೆಯ ಪ್ರಮುಖ ಪಟ್ಟಣವಾಗಿದ್ದು ವಾಣಿಜ್ಯ ಚಟುವಟಿಕೆಗಳ ಕೇಂದ್ರವೂ ಆಗಿದೆ. ಪ್ರವಾಸೋದ್ಯಮ ಮತ್ತು ವ್ಯವಸಾಯಗಳು ಇಲ್ಲಿನ ಮುಖ್ಯ ಆದಾಯದ ಮೂಲಗಳಾಗಿವೆ. ಟಿಪ್ಪುವಿನ ಆಕ್ರಮಣವು ಇಲ್ಲಿನ ಸಂಸ್ಕೃತಿ ಮತ್ತು ಜನ ಜೀವನದ ಮೇಲೆ ವಿಶಿಷ್ಟ ಪ್ರಭಾವ ಬೀರಿದ್ದು ಇದು ಸುಲ್ತಾನ್ ಬಥೆರಿಗೆ ವಿಬಿನ್ನ ರೂಪು ತಂದುಕೊಟ್ಟಿದೆ. ಸುಲ್ತಾನನು ಇಲ್ಲಿ ಒಂದು ಭವ್ಯ ಕೋಟೆಯನ್ನು ನಿರ್ಮಿಸಿದ್ದ ಎಂದು ಹೇಳಲಾಗುತ್ತಿದ್ದು, ಈಗ ಅದರ ಅವಶೇಷಗಳು ಸಹ ಅಲ್ಲಿಲ್ಲ ಎಂಬುವುದೇ ವಿಷಾದಕರ ಸಂಗತಿ.
ಚಿತ್ರಸದೃಶ ಪ್ರಕೃತಿ ಮತ್ತು ಸುವಾಸನೆಭರಿತ ಬೆಟ್ಟಗಳ ಒಂದು ನೋಟ
ಸುಲ್ತಾನ ಬಥೆರಿಯು, ಗ್ರಾಮೀಣ ಸೊಗಡನ್ನು ಹೊಂದಿರುವ ಒಂದು ಪ್ರಶಾಂತವಾದ ಹಳ್ಳಿ. ಇದು ತನ್ನ ಮಸಾಲೆ ಪದಾರ್ಥಗಳ ತೋಟಗಳಿಂದಾಗಿ ಪ್ರಸಿದ್ಧವಾಗಿದೆ. ಹಾಗೂ ಈ ಪ್ರದೇಶದ ಮೂಲಕ ಹಾದುಹೋಗುವವರನ್ನೆಲ್ಲ ಈ ಮಸಾಲೆ ಪದಾರ್ಥಗಳ ಘಮ ಮೋಡಿಮಾಡದೇ ಇರಲಾರದು. ಈ ಪ್ರದೇಶದ ಸುತ್ತಣ ಪರಿಸರ ಎತ್ತರವಾದ ಬೆಟ್ಟಗಳಿಂದ ಕೂಡಿರುವದರಿಂದ ಇಲ್ಲಿಯ ಹವಾಮಾನ ವರ್ಷದ ಎಲ್ಲಾ ಋತುಗಳಲ್ಲಿಯೂ ಅನುಕೂಲಕರವಾಗಿರುತ್ತದೆ.
ಇಂತಹ ಆಕರ್ಷಕ ಗ್ರಾಮವು ಕೇರಳ ಮತ್ತು ಕರ್ನಾಟಕಗಳ ಗಡಿಯಲ್ಲಿರುವದರಿಂದ ಎರಡೂ ರಾಜ್ಯಗಳ ಮಾರ್ಗದಿಂದ ಈ ಊರನ್ನು ತಲುಪಬಹುದು. ಸುಲ್ತಾನ್ ಬಥೆರಿಯು ಬೆಂಗಳೂರು, ಮೈಸೂರು, ಕ್ಯಾಲಿಕಟ್ ಮತ್ತು ಕಣ್ಣೂರುಗಳಂತಹ ಅನೇಕ ದಕ್ಷಿಣ ಭಾರತದ ನಗರಗಳೊಂದಿಗೆ ಉತ್ತಮ ರಸ್ತೆಯ ಸಂಪರ್ಕ ಹೊಂದಿದೆ. ಚಿತ್ರಸದೃಶ ಪ್ರಕೃತಿ ಮತ್ತು ಪ್ರಶಾಂತ ಪರಿಸರದಿಂದಾಗಿ ಸುಲ್ತಾನ್ಬಥೆರಿಯು ಒಂದು ಆದರ್ಶ ರಜಾ ತಾಣವಾಗಿದೆ.