ಪ್ರವಾಸಿಗರು ಶ್ರೀರಂಗಪಟ್ಟಣಕ್ಕೆ ಭೇಟಿಕೊಟ್ಟಾಗ 9 ನೇ ಶತಮಾನದಲ್ಲಿ ಗಂಗರು ಕಟ್ಟಿಸಿದ ಶ್ರೀರಂಗನಾಥಸ್ವಾಮಿ ದೇವಾಲಯವನ್ನು ತಪ್ಪದೆ ನೋಡಬೇಕು. ಈ ದೇವಾಲಯವನ್ನು ದೊಡ್ಡ ದೇವಾಲಯಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಗಂಗರ ನಂತರ ವಿಜಯನಗರ ಅರಸರು ಮತ್ತು ಹೊಯ್ಸಳರ ದೊರೆಗಳು ಈ ದೇವಾಲಯವನ್ನು ಅಭಿವೃದ್ಧಿಪಡಿಸಿದರು. ಇದು ವಿಷ್ಣುವಿನ ರೂಪವಾದ ರಂಗನಾಥಸ್ವಾಮಿಯ ದೇವಾಲಯವಾಗಿದ್ದು, ಪಂಚರಂಗ ಕ್ಷೇತ್ರಗಳಲ್ಲಿ ಒಂದೆಂದು ಹೆಸರಾಗಿದೆ.ಈ ದೇವಾಲಯದ ಗರ್ಭಗುಡಿಯಲ್ಲಿ ಕಪ್ಪುಕಲ್ಲಿನಿಂದ ಕಡೆಯಲಾಗಿರುವ ಸ್ವಾಮಿಯ ಮೂರ್ತಿಯಿದ್ದು, ಇದು ನಗುಮೊಗವನ್ನು ಹೊಂದಿದೆ. ಈ ವಿಗ್ರಹವು ಆದಿಶೇಷನ ಮೇಲೆ ಮಲಗಿರುವ ಅನಂತನಾಥನನ್ನು ತೋರಿಸುತ್ತದೆ. ದೇವಾಲಯದಲ್ಲಿ 24 ಸುಂದರ ಕಂಬಗಳಿದ್ದು ಅವು ವಿಷ್ಣುವಿನ 24 ರೂಪಗಳನ್ನು ತೋರಿಸುತ್ತದೆ. ಇವುಗಳು ಈ ಸ್ಮಾರಕದ ಸೌಂದರ್ಯವನ್ನು ದ್ವಿಗುಣಗೊಳಿಸಿದೆ. ಈ ದೇವಾಲಯದ ಒಳಗೋಡೆಗಳು ಶ್ರೀನಿವಾಸ ಸ್ವಾಮಿಯ ವಿವಿಧ ಚಿತ್ರಗಳಿಂದ ಹಾಗು ಪಂಚಮುಖ ಆಂಜನೇಯನ ಚಿತ್ರಗಳಿಂದ ಅಲಂಕೃತವಾಗಿವೆ.ಕರ್ನಾಟಕದ ದೊಡ್ಡ ದೇವಾಲಯಗಳಲ್ಲಿ ಒಂದೆಂದು ಹೆಸರಾಗಿರುವ ಈ ದೇವಾಲಯವು ಒಂದು ಮಹಾದ್ವಾರವನ್ನು ,ಸದೃಡವಾದ ಗೋಪುರವನ್ನು ಹಾಗು ಕಂಬಗಳಿರುವ ಮೊಗಸಾಲೆಯನ್ನು ಹೊಂದಿದೆ. ಇವುಗಳನ್ನು ಮೂರು ಅಥವಾ ನಾಲ್ಕು ಹಂತಗಳಲ್ಲಿ ನಿರ್ಮಾಣ ಮಾಡಲಾಗಿದೆ. ಪ್ರವಾಸಿಗರು ಇಲ್ಲಿಗೆ ಸಂಕ್ರಾಂತಿಯ ಶುಭದಿನದಂದು ನಡೆಯುವ ಲಕ್ಷದೀಪೋತ್ಸವಕ್ಕೆ ಆಗಮಿಸಬಹುದು. ಈ ದೇವಾಲಯವು ವರ್ಷಪೂರ್ತಿ ಬೆಳಗ್ಗೆ 8ರಿಂದ 9;30ರವರೆಗೆ ಮತ್ತು ಸಂಜೆ 7ರಿಂದ 8ರವರೆಗೆ ತೆರೆದಿರುತ್ತದೆ.