ಶ್ರೀರಂಗಪಟ್ಟಣಕ್ಕೆ ಆಗಮಿಸುವ ಪ್ರವಾಸಿಗರು ಪಾಂಡವಪುರಕ್ಕೆ ಹೋಗಬಹುದು. ಇದು ಕಲ್ಲು ಬಂಡೆಗಳಿಂದ ಕೂಡಿದ ಎರಡು ಬೆಟ್ಟಗಳ ನಡುವೆ ನೆಲೆಗೊಂಡಿದೆ. ಈ ಊರು ಮಹಾಭಾರತದಲ್ಲಿ ಬರುವ ನಾಯಕರಾದ ಪಾಂಡವರಿಂದಾಗಿ ಪಾಂಡವಪುರ ಎಂಬ ಹೆಸರು ಪಡೆಯಿತಂತೆ. ದಂತಕತೆಗಳ ಪ್ರಕಾರ ಪಾಂಡವರು ವನವಾಸದ ಅವಧಿಯಲ್ಲಿ ಈ ಊರಿನಲ್ಲಿ ನೆಲೆಸಿದ್ದರೆಂದು ಹಾಗು ಪಾಂಡವರ ತಾಯಿ ಕುಂತಿಗೆ ಈ ಊರು ತುಂಬಾ ಪ್ರಿಯವಾಗಿತ್ತೆಂದು ಹೇಳಲಾಗುತ್ತದೆ.ಈ ಊರು “ಫ್ರೆಂಚ್ ರಾಕ್ಸ್” ಅಥವಾ “ಫ್ರೆಂಚ್ ಬೆಟ್ಟಗಳು” ಎಂಬ ಹೆಸರನ್ನು ಸಹಾ ಪಡೆದಿದೆ. ಸ್ವಾತಂತ್ರ್ಯ ಪೂರ್ವ ಕಾಲದಲ್ಲಿ ಬ್ರಿಟೀಷರ ವಿರುದ್ಧ ಹೋರಾಡುತ್ತಿದ್ದ ಟಿಪ್ಪು ಸುಲ್ತಾನನ ಸಹಾಯಕ್ಕೆಂದು ಧಾವಿಸಿದ್ದ ಫ್ರೆಂಚರ ಸೇನೆಯು ಈ ಊರಿನಲ್ಲಿ ಶಿಬಿರವನ್ನು ಹಾಕಿಕೊಂಡು ಉಳಿದುಕೊಂಡಿದ್ದರಂತೆ. ಅಲ್ಲದೆ ಪಾಂಡವಪುರವು ಭತ್ತದ ಗದ್ದೆ ಮತ್ತು ಕಬ್ಬಿನ ಗದ್ದೆಗಳಿಂದ ಸುತ್ತುವರೆದಿದ್ದು ಇಡೀ ಊರಿಗೆ ಒಂದು ರೀತಿಯ ಕಳೆಯನ್ನು ಒದಗಿಸಿವೆ. ಈ ಊರಿನಲ್ಲಿ ಕೃಷಿಯೆ ಪ್ರಧಾನ ಉದ್ಯೋಗವಾಗಿದ್ದು, ಪ್ರವಾಸಿಗರು ಈ ಊರಿನಲ್ಲಿ ಹಲವಾರು ಕೃಷಿ ಉತ್ಪನ್ನಗಳನ್ನು, ಅಯುರ್ವೇದದ ಉತ್ಪನ್ನಗಳನ್ನು ಬೆಳೆದಿರುವುದನ್ನು ಕಾಣಬಹುದು. ಇದರೊಂದಿಗೆ ಪಾಂಡವಪುರದ ಮೂಲಕ ಹಾದುಹೋಗುವಾಗ ಕರಕುಶಲ ಉತ್ಪನ್ನಗಳನ್ನು ಸಹಾ ನೋಡಬಹುದು.