ಪರಮ ಪೂಜ್ಯ ಹಿಂದೂ ಸಂತ ಶ್ರೀ ಶಂಕರಾಚಾರ್ಯರು ಮೊದಲ ಮಠವನ್ನು ತುಂಗಾ ನದಿಯ ದಡದಲ್ಲಿರುವ ಈ ಪ್ರಶಾಂತ ಪಟ್ಟಣದಲ್ಲಿ ಸ್ಥಾಪಿಸಿದರು. ಅಂದಿನಿಂದಲೂ, ವರ್ಷ ಪೂರ್ತಿ ಭೇಟಿ ಕೊಡುವ ಸಾವಿರಾರು ಪುಣ್ಯ ಕ್ಷೇತ್ರ ಯಾತ್ರಿಗಳಿಗೆ ಶೃಂಗೇರಿಯು ಒಂದು ಮುಖ್ಯವಾದ ಸ್ಥಳವಾಗಿದೆ.
ಐತಿಹ್ಯ ಮತ್ತು ಸ್ಥಳ ಪುರಾಣ
ಶೃಂಗೇರಿ, ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯಲ್ಲಿರುವ, ಒಂದು ಶ್ರೀಮಂತ ಹಸಿರು ಭೂಮಿ. ಪುರಾಣದ ಪ್ರಕಾರ, ಆದಿ ಶಂಕರಾಚಾರ್ಯರು ಶೃಂಗೇರಿ ಗೆ ಕಾಲಿಟ್ಟ ಗಳಿಗೆಯೇ ಕಂಡ ಒಂದು ಅವಿಸ್ಮರಣೀಯ ದೃಶ್ಯದಿಂದ ಪ್ರೇರಿತರಾಗಿ ಈ ಸ್ಥಳದಲ್ಲಿ ತಮ್ಮ ಮಠ ಸ್ಥಾಪಿಸಲು ನಿರ್ಧರಿಸಿದರು.
ಒಮ್ಮೆ ಶಂಕರಾಚಾರ್ಯರು ತುಂಗಾ ನದಿ ತೀರದಲ್ಲಿ ಸಂಚರಿಸುತ್ತಿರುವಾಗ, ಒಂದು ಘಟ ಸರ್ಪ ತನ್ನ ಹೆಡೆಯನ್ನು ಬಿಚ್ಚಿ ಒಂದು ಗರ್ಭಿಣಿ ಕಪ್ಪೆಯನ್ನು ಸೂರ್ಯನ ಬಿಸಿಲಿನಿಂದ ಕಾಪಾಡುವುದನ್ನು ಕಂಡರು. ತನ್ನ ನೈಸರ್ಗಿಕ ವೈರಿ ಆದ ಕಪ್ಪೆಗೆ ಅದು ತೋರುತ್ತಿರುವ ಔದಾರ್ಯವನ್ನು ಕಂಡು ಮೂಕವಿಸ್ಮಿತರಾದ ಅವರಿಗೆ ಶೃಂಗೇರಿ ನಿಜವಾಗಿಯೂ ಒಂದು ವಿಶಿಷ್ಟ ಸ್ಥಳ ಎನಿಸಿತು. ಇಂದು ಅವರ ಶಾರದಾ ಪೀಠಕ್ಕೆ ದಿನಂಪ್ರತಿ ಸಾವಿರಾರು ಯಾತ್ರಿಗಳು ಭೇಟಿ ಕೊಡುತ್ತಾರೆ.
ವಿದ್ಯಾಶಂಕರ ಮತ್ತು ಶಾರದಾಂಬ ದೇವಸ್ಥಾನಗಳು ಶೃಂಗೇರಿಯಲ್ಲಿ ಭೇಟಿ ಕೊಡಬೇಕಾದ ಮತ್ತೆರಡು ಪ್ರಸಿದ್ದ ಸ್ಥಳಗಳು. ಅದರಲ್ಲೂ ವಿದ್ಯಾಶಂಕರ ದೇವಸ್ಥಾನವು ಅಲ್ಲಿರುವ 12 ರಾಶಿಗಳನ್ನು ಪ್ರತಿನಿಧಿಸುವ 12 ಕಂಬಗಳಿಂದ ವಿಖ್ಯಾತವಾಗಿದೆ. ಜೊತೆಗೆ, ದೇವಸ್ಥಾನವನ್ನು ಖಗೋಳ ಶಾಸ್ತ್ರದ ಕಲ್ಪನೆಗನುಸಾರವಾಗಿ ಕಟ್ಟಲಾಗಿದೆ.
ಶೃಂಗೇರಿಯ ಆಹ್ಲಾದಕರ ವಾತಾವರಣ ವರ್ಷಪೂರ್ತಿ ಒಂದೇ ತೆರನಾಗಿರುವುದು ಇನ್ನೊಂದು ಗಮನಿಸಬೇಕಾದ ವಿಷಯ. ಇಲ್ಲಿಗೆ ಸಮೀಪದ ವಿಮಾನ ನಿಲ್ದಾಣ ಮಂಗಳೂರಿನಲ್ಲಿದೆ. ಇದು ಬೆಂಗಳೂರಿನಿಂದ ಸುಮಾರು 340 ಕಿಲೋಮೀಟರು ದೂರದಲ್ಲಿದೆ ಮತ್ತು ಉತ್ತಮ ಸಾರಿಗೆ ಸಂಪರ್ಕವಿದೆ. ಶಿವಮೊಗ್ಗ ಮತ್ತು ಕಡೂರು ಹತ್ತಿರದ ರೈಲ್ವೆ ನಿಲ್ದಾಣಗಳು.