ಸಿಂಹಾಚಲದಲ್ಲಿರುವ ಶ್ರೀ ವರಾಹ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯವು ವಿಷ್ಣುವಿನ ಅವತಾರವಾದ ನರಸಿಂಹ ಸ್ವಾಮಿಗಾಗಿ ನಿರ್ಮಿಸಲಾಗಿರುವ ದೇವಾಲಯವಾಗಿದೆ. ಈ ದೇವಾಲಯವನ್ನು ಸಿಂಹಾಚಲ ಅಥವಾ ಸಿಂಹದ ಬೆಟ್ಟವೆಂದು ಕರೆಯಲಾಗುವ ಬೆಟ್ಟದ ಮೇಲೆ ನಿರ್ಮಿಸಲಾಗಿದೆ. ಈ ದೇವಾಲಯವು ದೇಶದ ಎರಡನೆ ಅತಿ ಶ್ರೀಮಂತ ದೇವಾಲಯವಾಗಿ ಖ್ಯಾತಿ ಪಡೆದಿದ್ದು, ತಿರುಪತಿಯ ನಂತರದ ಸ್ಥಾನವನ್ನು ಅಲಂಕರಿಸಿದೆ.
ಈ ದೇವಾಲಯದ ವಾಸ್ತು ಶಿಲ್ಪವು ಒರಿಸ್ಸಾ ಮತ್ತು ದ್ರಾವಿಡ ಶೈಲಿಯ ಮಿಶ್ರಣವನ್ನು ಒಳಗೊಂಡಿದೆ.
ಹಿಂದೂ ಪುರಾಣದ ಪ್ರಕಾರ ಮಹಾವಿಷ್ಣುವು ತನ್ನ ಭಕ್ತನಾದ ಭಕ್ತ ಪ್ರಹ್ಲಾದನನ್ನು ಆತನ ಕ್ರೂರ ತಂದೆಯಿಂದ ಕಾಪಾಡುವ ಸಲುವಾಗಿ ನರಸಿಂಹ ಅವತಾರವೆತ್ತಿದನಂತೆ. ಪ್ರಹ್ಲಾದನ ತಂದೆ ತನ್ನನ್ನು ಯಾವುದೇ ಮನುಷ್ಯ, ಪ್ರಾಣಿ ಸಂಹರಿಸಬಾರದು. ತಾನು ಆಕಾಶ ಅಥವಾ ಭೂಮಿಯ ಮೇಲಾಗಲಿ ಸಾಯಬಾರದು ಎಂದು ವರ ಪಡೆದಿದ್ದನಂತೆ. ಹಾಗಾಗಿ ವಿಷ್ಣು ತನ್ನನ್ನು ತಾನು ಅರ್ಧ ಮನುಷ್ಯ ಮತ್ತು ಅರ್ಧ ಸಿಂಹವಾಗಿ ಪರಿವರ್ತಿಸಿಕೊಂಡು, ಪ್ರಹ್ಲಾದನ ತಂದೆಯನ್ನು ತನ್ನ ತೊಡೆಯ ಮೇಲೆ ಇಟ್ಟು ಕೊಂಡು, ಆತನ ಕರುಳನ್ನು ಬಗೆದು ಸಂಹರಿಸಿದನು. ಈ ದೇವಾಲಯವು ನರಸಿಂಹನಿಗೆ ಸಮರ್ಪಿಸಲಾಗಿರುವ ಹದಿನೆಂಟು ಕ್ಷೇತ್ರಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದೆ.
ನಂಬಿಕೆಗಳ ಪ್ರಕಾರ ಕೆಲವು ಮುಸ್ಲಿಂ ದಾಳಿಕೋರರು ಈ ದೇವಾಲಯವನ್ನು ನಾಶಪಡಿಸಲು ಹವಣಿಸಿದರಂತೆ. ಆಗ ಕುಮಾರನಾಥ ಎಂಬ ಕವಿಯು ನರಸಿಂಹ ಸ್ವಾಮಿಯನ್ನು ಬೇಡಿಕೊಂಡನಂತೆ. ಆತನ ಬೇಡಿಕೆಯನ್ನು ಪುರಸ್ಕರಿಸಿದ ಸ್ವಾಮಿಯು ಕಾಪ್ಪರ್ ಹಾರ್ನೆಟ್ (ಜೇನು ಹುಳುವಿನ ಹಾಗೆ ಕೊಂಡಿಯುಳ್ಳ ಒಂದು ಬಗೆಯ ಕೀಟ) ಹಿಂಡನ್ನು ಅವರ ಮೇಲೆ ಆಕ್ರಮಣ ಮಾಡಲು ಕಳುಹಿಸಿದನಂತೆ, ಅವುಗಳ ಆಕ್ರಮಣದಿಂದ ದಾಳಿಕೋರರು ಸಿಂಹಾಚಲ ಬೆಟ್ಟದ ಹಿಂಬದಿಯಲ್ಲಿ ನಾಶವಾದರಂತೆ. ಇಲ್ಲಿನ ಸ್ಥಳೀಯರು ಸ್ವತಃ ಸ್ವಾಮಿಯೆ ಅಂದು ಸುಲಿಗೆ ಮತ್ತು ಸಂಹಾರವಾಗುವುದರಿಂದ ರಕ್ಷಿಸದನೆಂದು ನಂಬುತ್ತಾರೆ.
ಸಿಂಹಾಚಲಕ್ಕೆ ಸಾಗುವ ಹಾದಿಯು ಸುತ್ತ ಹರಡಿರುವ ಹಸಿರ ವನಸಿರಿಯಿಂದಾಗಿ ಗಮನ ಸೆಳೆಯುತ್ತದೆ. ಸಿಂಹಾಚಲದಲ್ಲಿನ ದೇವಾಲಯವು ನೆಲೆಗೊಂಡಿರುವ ಸ್ಥಳವು ಸಹ ನೋಡುಗರನ್ನು ಮಂತ್ರ ಮುಗ್ಧಗೊಳಿಸುತ್ತದೆ.