ಮಣಿಪುರದ ಒಂಭತ್ತು ಜಿಲ್ಲೆಗಳಲ್ಲಿ ಸೇನಾಪತಿಯು ಒಂದು. ನೀವು ಪ್ರಕೃತಿ ಪ್ರಿಯರಾಗಿದ್ದಲ್ಲಿ ಇಲ್ಲಿಗೆ ಭೇಟಿ ನೀಡಲೇಬೇಕು. ಇದು ಜಿಲ್ಲೆಯ ಮುಖ್ಯಕೇಂದ್ರ. ಈಶಾನ್ಯ ಭಾಗಗಳಲ್ಲಿನ ಬಹುತೇಕ ಪ್ರದೇಶಗಳಂತೆ ಇದು ಪ್ರಕೃತಿ ಸೌಂದರ್ಯವನ್ನು ಕಾಪಾಡಿಕೊಂಡಿದೆ. ಬೆಟ್ಟಪ್ರದೇಶಗಳು, ಬಾಗುಬಳುಕಿನ ಜಲಪಾತಗಳು, ನದಿಗಳು, ಕಣಿವೆಗಳು ಮತ್ತು ಪರ್ವತಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ. ನೀವು ಸಾಹಸಪ್ರಿಯರಾಗಿದ್ದಲ್ಲಿ ಮಣಿಪುರದ ಈ ಜಿಲ್ಲೆ ನಿಮಗೆ ಹೇಳಿಮಾಡಿಸಿದ್ದು.
ಸೇನಾಪತಿಯ ಸುತ್ತಮುತ್ತಲಿನ ಹಲವು ರೀತಿಯ ಪ್ರವಾಸಿ ತಾಣಗಳು
ಸೇನಾಪತಿಯ ಸುತ್ತಮುತ್ತ ಹಲವು ಪ್ರವಾಸಿತಾಣಗಳಿವೆ. ಮಾರಂ ಖುಲ್ಲೇನ್, ಯಾಂಗ್ಖುಲ್ಲೇನ್, ಮಾವೋ, ಲಿಯಾಯಿ, ಮಖೇಲ್, ಪುರುಲ್, ಕೌಬ್ರು ಪರ್ವತ ಮತ್ತು ಹೌಡು ಕೋಯ್ಡೆ ಬೀಶೋ ಮುಂತಾದ ಸ್ಥಳಗಳಿವೆ. ಪ್ರತಿ ವರ್ಷ ಸಾವಿರಾರು ಪ್ರವಾಸಿಗರು ದೇಶ ವಿದೇಶಗಳಿಂದ ಇಲ್ಲಿಗೆ ಬರುತ್ತಾರೆ. ಇಲ್ಲಿನ ಪ್ರವಾಸಿ ತಾಣಗಳ ಸೌಂದರ್ಯವನ್ನು ನೋಡಿ ಮೂಕವಿಸ್ಮಿತರಾಗುತ್ತಾರೆ.
ಸೇನಾಪತಿಯಲ್ಲಿ ಸಸ್ಯ ಮತ್ತು ಜೀವ ವೈವಿಧ್ಯ
ಸೇನಾಪತಿಯಲ್ಲಿನ ಸಸ್ಯ ಮತ್ತು ಜೀವ ವೈವಿಧ್ಯವನ್ನು ನೋಡುವುದು ಅವಿಸ್ಮರಣೀಯ ಅನುಭವ. ಜಿಲ್ಲೆಯ ಶೇ80% ಪ್ರದೇಶ ಅರಣ್ಯಾವೃತವಾಗಿದ್ದು ನಿಮ್ಮ ಪ್ರವಾಸದ ಸಮಯದಲ್ಲಿ ಹಲವು ಬಗೆಯ ಸಸ್ಯ ಮತ್ತು ಜೀವಿಗಳನ್ನು ನೋಡಬಹುದು. ಇಲ್ಲಿ ಕಂಡುಬರುವ ಔಷಧೀಯ ಗಿಡಮೂಲಿಕೆಗಳಲ್ಲಿ ಆಡಿಯಾಂಟಮ್ ಫ್ಲಾಬೆಲ್ಯೂಲ್ಯಾಟಂ ಲಿನ್, ಅಬ್ರುಸ್ ಪ್ರಿಕಾಟೊರಿಯಸ್ ಲಿನ್ ಮತ್ತು ಎಲ್ಶೋಲಿಟ್ಜಾ ಸಿಲಿಯಟೆಗಳು ಸೇರಿದ್ದು ಇವುಗಳನ್ನು ಸ್ಥಳೀಯ ಔಷಧಿಗಳಲ್ಲಿ ಬಳಸಲಾಗುತ್ತದೆ. ಚಳಿಗಾಲದಲ್ಲಿ ಇಲ್ಲಿ ಹಲವು ಬಗೆಯ ವಲಸೆ ಹಕ್ಕಿಗಳನ್ನು ಕೂಡ ಕಾಣಬಹುದು.
ಸೇನಾಪತಿಯಲ್ಲಿನ ಜನರು
ಸೇನಾಪತಿಯಲ್ಲಿ ಹಲವು ಸಮುದಾಯಗಳ ಜನರನ್ನು ಕಾಣಬಹುದು. ಮಾವೋ, ತಂಗಕ್ಕುಲ್, ಮಾರಂ, ಕುಕಿ, ಜೆಮಾಯಿ, ವೈಫೆಯಿ, ಚಿರು, ಚೋಥೆ ಮತ್ತು ಮೀಥೆ ಸಮುದಾಯಗಳನ್ನು ಕಾಣಬಹುದು. ಪ್ರತಿ ಸಮುದಾಯದವರು ವಿಭಿನ್ನ ಜೀವನ ಶೈಲಿ ಹೊಂದಿದ್ದು ವಿಶಿಷ್ಟವಾದ ಉಡುಪು ಮತ್ತು ಊಟೋಪಚಾರಗಳನ್ನು ಹೊಂದಿದ್ದಾರೆ.ಇಲ್ಲಿ ಕ್ರಿಶ್ಚಿಯನ್ ಧರ್ಮವು ಪ್ರಾಮುಖ್ಯತೆಯನ್ನು ಪಡೆದಿದೆ. ಇಲ್ಲಿ ಹಿಂದೂ ಮತ್ತು ಮುಸ್ಲಿಂ ಧರ್ಮದವರು ಕೂಡ ಇದ್ದು ಎಲ್ಲರೂ ಸೌಹಾರ್ದಯುತವಾಗಿ ಸಹಬಾಳ್ವೆ ನಡೆಸುತ್ತಿದ್ದಾರೆ. ಇಲ್ಲಿನ ಜನ ಮಾತನಾಡುವ ಭಾಷೆಗಳು ಏಮೋಲ್, ಚೀನಿ-ಟಿಬೆಟ್ ಮತ್ತು ಮಾಯಿತಿ.
ಸೇನಾಪತಿಯ ಇತಿಹಾಸ
ಮಣಿಪುರದ ಉತ್ತರ ಭಾಗದಲ್ಲಿರುವ ಈ ಜಿಲ್ಲೆಯ ಗಡಿಯಲ್ಲಿ ಪೂರ್ವಕ್ಕೆ ಉಖ್ರೆಲ್ ಜಿಲ್ಲೆ ಮತ್ತು ಪಶ್ಚಿಮದಲ್ಲಿ ತಾಮೆಂಗ್ಲಾಂಗ್ ಜಿಲ್ಲೆಗಳಿವೆ. ಉತ್ತರಕ್ಕೆ ನಾಗಾಲ್ಯಾಂಡಿನ ಫೇಕ್ ಮತ್ತು ದಕ್ಷಿಣಕ್ಕೆ ಇಂಪಾಲ್ ಜಿಲ್ಲೆಗಳಿವೆ. ಈ ಜಿಲ್ಲೆಯು 1969ರಲ್ಲಿ ಅಸ್ತಿತ್ವಕ್ಕೆ ಬಂದಿತು. ಮಣಿಪುರ ಉತ್ತರ ಜಿಲ್ಲೆ ಎಂದು ಹೆಸರಾಗಿತ್ತು. ಹಿಂದೆ ಇದು ಮಣಿಪುರ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಇಲ್ಲಿನ ಸಂಸ್ಕೃತಿ ಸಂಪ್ರದಾಯಗಳು ಈ ಸಮಯದಲ್ಲೇ ಬೆಳೆದದ್ದು.ಮಣಿಪುರದ ಅರಸು ಮನೆತನಕ್ಕೆ ಸೇರಿದ ಸೇನಾಪತಿ ತೆಕೇನ್ದ್ರಜಿತ್ ಸಿಂಗನ ನೆನಪಿನಲ್ಲಿ ಈ ಸ್ಥಳಕ್ಕೆ ಸೇನಾಪತಿ ಎಂದು ಹೆಸರಿಸಲಾಯಿತು.
ಇಲ್ಲಿನ ಇತಿಹಾಸದ ಪ್ರಕಾರ ಸೇನಾಪತಿ ತೆಕೆನ್ದ್ರಜಿತ್ ಸಿಂಗನು ಬ್ರಿಟೀಷರ ರಾಜಕೀಯ ರಾಯಭಾರಿ ಮೇಜರ್ ಜನರಲ್ ಸರ್ ಜೇಮ್ಸ್ ಜಾನ್ಸ್ಟೋನ್ ಮಣಿಪುರಕ್ಕೆ ಬಂದಾಗ ಇಲ್ಲಿಯೇ ಸ್ವಾಗತಿಸಿದ್ದನಂತೆ. 1891ರಲ್ಲಿ ಬ್ರಿಟೀಷರು ಮಣಿಪುರವನ್ನು ಆಕ್ರಮಿಸಲು ಪ್ರಯತ್ನಿಸಿದಾಗ ಅವರ ವಿರುದ್ಧ ಹೋರಾಡಿದನಂತೆ. ಮಣಿಪುರವನ್ನು ಆಕ್ರಮಿಸಿದ ನಂತರ ರಾಜಕುಮಾರನನ್ನು ಗಲ್ಲಿಗೇರಿಸಲಾಯಿತು. ಇದು ಇತಿಹಾಸದ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿತು. ಬ್ರಿಟೀಷರು ಉಪ ಖಂಡದ ಪೂರ್ವ ರಾಜ್ಯಗಳಲ್ಲಿ ತಮ್ಮ ಅಧಿಪತ್ಯವನ್ನು ಸ್ಥಾಪಿಸಲು ಆರಂಭಿಸಿದರು.
ಸೇನಾಪತಿಗೆ ಹೋಗಲು ಸೂಕ್ತ ಸಮಯ
ಅಕ್ಟೋಬರ್ ಮತ್ತು ನವಂಬರ್ನ ಆರಂಭದಲ್ಲಿ ಮತ್ತು ಬೇಸಿಗೆಕಾಲ ಸೇನಾಪತಿಗೆ ಹೋಗಲು ಸೂಕ್ತ ಕಾಲ