ಹಿರಾಕುಡ್ ಹಿನ್ನೀರಿನಲ್ಲಿ ಈ ದ್ವೀಪವಿದೆ. ಹಿರಾಕುಡ್ ಅಣೆಕಟ್ಟು ಕಟ್ಟುವ ಮುಂಚೆ ಈ ದ್ವೀಪವು ಒಂದು ಹಳ್ಳಿಯಾಗಿತ್ತು. ಅಣೆಕಟ್ಟು ನಿರ್ಮಾಣ ಪೂರ್ಣಗೊಂಡ ಬಳಿಕ ಈ ಹಳ್ಳಿಯ ಜನರನ್ನು ಅಲ್ಲಿಂದ ಸ್ಥಳಾಂತರಿಸಲಾಯಿತು. ಹೀಗೆ ಹಳ್ಳಿಯನ್ನು ಬಿಟ್ಟು ಹೊರಡುವಾಗ ಕೆಲ ಹಳ್ಳಿಯ ಜನ ತಮ್ಮ ಬದುಕಿನ ಭಾಗವಾಗಿದ್ದ ಜಾನುವಾರುಗಳನ್ನು ಅಲ್ಲಿಯೇ ಬಿಟ್ಟು ಬಂದರು.
ಕಾಲಾಂತರದಲ್ಲಿ ಈ ಜಾನುವಾರುಗಳ ಸಂತತಿ ದ್ವಿಗುಣಗೊಂಡಿತು. ಇವುಗಳಿಗೆ ಮನುಷ್ಯರ ಪರಿಚಯವೇ ಇರಲಿಲ್ಲ. ಈ ದ್ವೀಪದಲ್ಲಿನ ಹೆಚ್ಚು ಕಮ್ಮಿ ಎಲ್ಲ ಜಾನುವಾರುಗಳು ಬಿಳಿ ಅಥವ ತಿಳಿ ಕಂದು ಬಣ್ಣದ್ದಾಗಿದ್ದವು. ಈ ಜಾನುವಾರುಗಳು ಸಾಕುಪ್ರಾಣಿಗಳಂತೆ ಸಾಧುವಾಗಿರಲಿಲ್ಲ. ಬದಲಿಗೆ ಹೆಚ್ಚು ವ್ಯಗ್ರತೆಯಿಂದ ಕೂಡಿದ್ದವು ಮತ್ತು ಆಕಾರದಲ್ಲಿ ಕೂಡ ಸಾಕುಪ್ರಾಣಿಗಳಿಗಿಂತ ದೊಡ್ಡದಾಗಿತ್ತು.
ಇವುಗಳು ಈ ದ್ವೀಪದಲ್ಲಿ ತಿಂದುಂಡು ಸುರಕ್ಷಿತವಾಗಿದ್ದವು. ಈ ದೈತ್ಯ ಜಾನುವಾರುಗಳನ್ನು ಹಿಡಿಯುವ ಪ್ರಯತ್ನವನ್ನು ಕೆಲವರು ಮಾಡಿದರಾದರೂ ಅದು ಅಷ್ಟು ಯಶಸ್ವಿಯಾಗಿಲ್ಲ. ಈ ದ್ವೀಪಕ್ಕೆ ಭೇಟಿ ನೀಡಿದರೆ ಪಾಳುಬಿದ್ದ ಹಳ್ಳಿಯ ಅವಶೇಷಗಳು ಹಾಗೂ ಈ ಜಾನುವಾರುಗಳು ಪ್ರಕೃತಿಯ ಮಡಿಲಲ್ಲಿ ಸುರಕ್ಷಿತವಾಗಿರುವುದನ್ನು ಕಾಣಬಹುದು.