ಪಹಾರಿ ಮಂದಿರ್ ಎಂಬುದು ಶಿವನ ಮಂದಿರ. ಇದು ರಾಂಚಿಯ ಬೆಟ್ಟದ ಮೇಲೆ ಸಮುದ್ರ ಮಟ್ಟದಿಂದ 2140 ಅಡಿ ಎತ್ತರದಲ್ಲಿ ನೆಲೆಗೊಂಡಿದೆ. ಪ್ರಾಚೀನ ಕಾಲದಲ್ಲಿ ಈ ಬೆಟ್ಟವನ್ನು ಫಾನ್ಸಿ ಟೊಂಗ್ರಿ ಎಂದು ಕರೆಯುತ್ತಿದ್ದರು. ಬ್ರಿಟೀಷರ ಕಾಲದಲ್ಲಿ ಇಲ್ಲಿ ಸ್ವಾತಂತ್ರ್ಯ ಹೋರಾಟಗಾರರನ್ನು ಗಲ್ಲಿಗೆ ಹಾಕಲಾಗುತ್ತಿತ್ತು. ಅವರ ಸ್ಮರಣಾರ್ಥವಾಗಿ ಇಲ್ಲಿ ಪ್ರತಿವರ್ಷ ಗಣರಾಜ್ಯೋತ್ಸವದಂದು ಧ್ವಜಾರೋಹಣವನ್ನು ಮಾಡಲಾಗುತ್ತದೆ.
ಈ ದೇವಾಲಯಕ್ಕೆ ತಲುಪಲು 300 ಮೆಟ್ಟಿಲುಗಳನ್ನು ಹತ್ತಿ ಬರಬೇಕು. ಈ ದೇವಾಲಯಕ್ಕೆ ಕೋರಿದ ಹರಕೆಗಳನ್ನು ತೀರಿಸುವಂತಹ ಶಕ್ತಿ ಇದೆಯೆಂದು ನಂಬಲಾಗುತ್ತದೆ. ಈ ಸ್ಥಳದಿಂದ ಸಂಪೂರ್ಣವಾದ ರಾಂಚಿ ನಗರದ ಪಕ್ಷಿನೋಟವನ್ನು ನೋಡಬಹುದು. ಇಲ್ಲಿನ ಸುತ್ತ-ಮುತ್ತ ವಿವಿಧ ಬಗೆಯ ಮರಗಳು ಬೆಳೆದು ನಿಂತಿವೆ. ಶ್ರಾವಣ ಮಾಸದಲ್ಲಿ ಇಲ್ಲಿನ ದೇವಾಲಯದ ಮುಖ್ಯ ದೇವರಿಗೆ ಜಲ ಧಾರವನ್ನು ಅರ್ಪಿಸಲು ಭಕ್ತಾಧಿಗಳು ಇಲ್ಲಿಗೆ ಅಧಿಕ ಸಂಖ್ಯೆಯಲ್ಲಿ ಬರುತ್ತಾರೆ. ಆಗ ಈ ದೇವಾಲಯದ ಪ್ರಾಂಗಣ ಮತ್ತು ಸುತ್ತ ಮುತ್ತ ಎಲ್ಲೆಲ್ಲಿಯು ಜನ ಜಾತ್ರೆ ಕಂಡು ಬರುತ್ತದೆ.