ಇದು ನಗರದ ಹೃದಯಭಾಗದಲ್ಲಿರುವ ಗವರ್ನರ್ ನಿವಾಸದ ಬಳಿಯಲ್ಲಿ ನೆಲೆಗೊಂಡಿದೆ. ಮಾನವ ನಿರ್ಮಿತ ಕಾಡಿಗೆ ಹೊಂದಿಕೊಂಡಿರುವ ಈ ವನವು ರಾಜ್ಯ ಸರ್ಕಾರದಿಂದ 2003ರಲ್ಲಿ ಸ್ಥಾಪಿಸಲ್ಪಟ್ಟಿತು. ಇಲ್ಲಿ ಮಕ್ಕಳ ಉದ್ಯಾನವನ, ಉದ್ಯಾನವನಗಳು, ಕೃತಕ ದಿಬ್ಬಗಳು, ಜಲಪಾತ ಮತ್ತು ಸಂಗೀತ ಕಾರಂಜಿಗಳು ಇವೆ. ಜೊತೆಗೆ ಈ ವನವು ಆಯ್ದ 40ಗಿಡಮೂಲಿಕೆಗಳನ್ನು ಹೊಂದಿದೆ. ಈ ಉದ್ಯಾನವನವನ್ನು ಜಾರ್ಖಂಡ್ ಅರಣ್ಯ ಇಲಾಖೆಯು ನಿರ್ಮಿಸಿದೆ. ಈ ಉದ್ಯಾನವನದಲ್ಲಿ ಜ್ಯೋತಿಷ್ಯಶಾಸ್ತ್ರದಲ್ಲಿ ಬರುವ ಎಲ್ಲಾ ನಕ್ಷತ್ರಗಳನ್ನು ಮತ್ತು ರಾಶಿಗಳನ್ನು ಹಾಗು ಅವುಗಳಿಗೆ ಸಂಬಂಧಿಸಿದ ಮರ- ಗಿಡಗಳನ್ನು ಬೆಳೆಸಲಾಗಿದೆ. ಅಲ್ಲದೇ ಪ್ರತಿ ಮರ ಗಿಡದ ಔಷಧೀಯ ಗುಣಗಳನ್ನು, ಸೌಂದರ್ಯವರ್ಧಕವಾಗಿ ಬಳಸುವ ಬಗೆ, ಸಾಮಾಜಿಕ ಮತ್ತು ವಾಣಿಜ್ಯ ಮೌಲ್ಯಗಳನ್ನು ಇಲ್ಲಿ ನಮೂದಿಸಲಾಗಿದೆ.
ಈ ಉದ್ಯಾನವನದ ಕೇಂದ್ರಭಾಗದಲ್ಲಿ ಸಂಗೀತ ಕಾರಂಜಿಯನ್ನು ನಿರ್ಮಿಸಲಾಗಿದೆ. ಇಲ್ಲಿ ಚಿಮ್ಮುವ ನೀರು ಒಂದು ಬೃಹತ್ ಬಿಂದಿಗೆಗೆ ಸುರಿಯುವ ಹಾಗೆ ಇದನ್ನು ನಿರ್ಮಿಸಲಾಗಿದೆ. ಕಾಲು ಹಾದಿಯ ಅಕ್ಕ ಪಕ್ಕ ಹಲವಾರು ಬಗೆಯ ಗಿಡಗಳನ್ನು ಬೆಳೆಸಲಾಗಿದೆ. ಇವುಗಳ ಜೊತೆಗೆ ಮಲಗಿರುವ ಭಂಗಿಯಲ್ಲಿರುವ ಧನ್ವಂತರಿಯ ವಿಗ್ರಹವನ್ನು ಸಹ ನಾವು ಇಲ್ಲಿ ನೋಡಬಹುದು.