ಜಿಯಾರತ್ ಸೈನ್ ಇಲ್ಲಾಹಿ ಭಕ್ಷ ಸಾಹೀಬ್ ಒಂದು ಜನಪ್ರಿಯ ಸೂಫಿ ಸಂತರಾದ ಇಲ್ಲಾಹಿ ಭಕ್ಷ ಸಾಹೀಬ್ರ ಮಂದಿರವಾಗಿದೆ. ಬತ್ತಲಕೋಟೆ ಎಂಬ ಹಳ್ಳಿಯಲ್ಲಿ ಈ ಮಂದಿರ ಇದೆ. ಪೂಂಚ್ ಪಟ್ಟಣದಿಂದ ಇದು 37 ಕಿ.ಮೀ. ದೂರದಲ್ಲಿದೆ. ಬತ್ತಲಕೋಟೆ ಒಂದು ಸುಂದರ ಹಳ್ಳಿಯಾಗಿದ್ದು, ಪೀರ್ ಪಂಚಲಾ ಬೆಟ್ಟಗಳ ಸಮೂಹದ ವ್ಯಾಪ್ತಿಯಲ್ಲಿ ಬರುತ್ತದೆ. ನೈನ್ ಸುಖ್ ಹಾಗೂ ನಂದಿ ಶೂಲ ಎಂಬ ಎರಡು ತೊರೆ ಇದೇ ಊರಿನ ಮಾರ್ಗವಾಗಿ ಹರಿದಿದ್ದು, ಇವುಗಳಿಂದಲೂ ಈ ತಾಣ ಒಂದಿಷ್ಟು ಜನಪ್ರಿಯತೆಯನ್ನು ಸಾಧಿಸಿದೆ. ಈ ಧಾರ್ಮಿಕ ತಾಣವು ಅತ್ಯಂತ ದಟ್ಟ ಅರಣ್ಯ, ಸುಂದರ ಬೆಟ್ಟ, ನೀರಿನ ಮೂಲಗಳನ್ನು ಒಳಗೊಂಡು ಅತ್ಯಂತ ಸಮೃದ್ಧವಾಗಿದೆ. ಆಕರ್ಷಣೆಯನ್ನೂ ಹೆಚ್ಚಿಸಿಕೊಂಡಿದೆ.
1948 ರಲ್ಲಿ ಜಿಯಾರತ್ ಸೈನ್ ಇಲ್ಲಾಹಿ ಭಕ್ಷ ಸಾಹೀಬ್ ಅವರು ಇಲ್ಲಿಗೆ ಬಂದು ತಂಗಿದರು. ಆನಂತರ ತಮ್ಮ ಜೀವಿತಾವಧಿಯೆಲ್ಲಿ ಇಲ್ಲಿಯೆ ಕಳೆದರು. ಅಂತಿಮವಾಗಿ 1976 ರ ಮೇ 16 ರಂದು ಇವರು ಇಹಲೋಕವನ್ನು ತ್ಯಜಿಸಿದರು. ಕೇವಲ ನಾಲ್ಕು ದಿನ ಹಿಂದೆ ಇವರು ತಮ್ಮ ಅನುಯಾಯಿಗಳಿಗೆ ತಾವು ಬಹುಬೇಗ ಸಾಯುತ್ತಿರುವುದಾಗಿಯೂ ತಿಳಿಸಿದ್ದರು. ತಾವು ಸತ್ತ ನಂತರ ತಮ್ಮ ಸಮಾಧಿ ಸ್ಥಳವನ್ನೂ ಅವರು ಮೊದಲೇ ಸೂಚಿಸಿದ್ದರು. ಅಲ್ಲದೇ ಸಾವಿಗೆ ಮುನ್ನ ಇವರು ಭಕ್ತರ ದರ್ಶನಕ್ಕೆ ತನ್ನ ಪಾರ್ಥಿವ ಶರೀರವನ್ನು ಮೂರು ದಿನಗಳ ಕಾಲ ತೆರೆದ ಸ್ಥಿತಿಯಲ್ಲಿ ಇಡುವಂತೆ ಸೂಚಿಸಿದ್ದರು. ಒಬ್ಬ ಸೂಫಿ ಸಂತರಾಗಿ ಒಳ್ಳೆಯ ಧ್ಯೇಯವನ್ನು ಅಳವಡಿಸಿಕೊಂಡು ಅಪಾರ ಪ್ರಮಾಣದಲ್ಲಿ ಸಾಮಾಜಿಕ ಸೇವೆ ಸಲ್ಲಿಸಿದ್ದರು. ತಮ್ಮ ಜೀವಿತಾವಧಿಯಲ್ಲಿ ಭ್ರಾತೃತ್ವ, ಶಾಂತಿ, ಪ್ರೀತಿಯನ್ನು ಅವರು ಸಾರಿದ್ದರು.
ಪ್ರತಿ ವರ್ಷ ಮೇ ತಿಂಗಳಲ್ಲಿ ಇಲ್ಲಿ ಉರುಸ್ ನಡೆಯುತ್ತದೆ. ಇದು ಸಂತ ಸಾಹೀಬ್ರ ನೆನಪಿನಲ್ಲಿ ನಡೆಯುವ ಕಾರ್ಯಕ್ರಮ. ಭಕ್ತರು ಅಪಾರ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ. ಜಾತಿ, ಧರ್ಮ ಮೀರಿ ಈ ಉತ್ಸವ ಅದ್ದೂರಿಯಾಗಿ ನಡೆಯುತ್ತದೆ. ಉರುಸ್ನಲ್ಲಿ ಮುಸ್ಲೀಮೇತರರೂ ಕೂಡ ಪಾಲ್ಗೊಳ್ಳುತ್ತಾರೆ, ಸಹಕಾರ ನೀಡುತ್ತಾರೆ. ಇದೊಂದು ಸಾಂಸ್ಕೃತಿಕ ತಾಣವಾಗಿದ್ದು, ಅಪಾರ ಸಂಖ್ಯೆಯಲ್ಲಿ ನಾಗರಿಕರು ಸಾಕ್ಷಿಯಾಗುತ್ತಾರೆ.