ತಿರುವನಂತಪುರಂನಿಂದ ಪೊನ್ಮುಡಿಗೆ ತೆರಳುವ ಮಾರ್ಗದಲ್ಲಿ ಈ ಪೆಪ್ಪರಾ ವನ್ಯಜೀವಿ ತಾಣ ಸಿಗುತ್ತದೆ. ಇದು ಇಲ್ಲಿನ ಇನ್ನೊಂದು ನೋಡಲೇಬೇಕಾದ ತಾಣ. ತಿರುವನಂತಪುರಂನಿಂದ 50 ಕಿ.ಮೀ. ದೂರದಲ್ಲಿದೆ. ನಗರದಿಂದ ಅತ್ಯಂತ ಆರಾಮವಾಗಿ ತಲುಪಬಹುದಾದ ರೀತಿಯಲ್ಲಿದೆ. ಸಾಕಷ್ಟು ಗುಡ್ಡಗಳಿಂದ ಕೂಡಿದ, ಸಾಕಷ್ಟು ಗಮನ ಸೆಳೆಯುವ ಗುಡ್ಡದ ಅಂಚನ್ನು ಒಳಗೊಂಡಿದೆ. ಇದಕ್ಕೆ ಸಮೀಪದಲ್ಲಿಯೇ ಪೆಪ್ಪರಾ ಅಣೆಕಟ್ಟೆ ಇದ್ದು, ಕುಡಿಯುವ ನೀರು ಪೂರೈಕೆಗೆ ಬಳಸಲಾಗುತ್ತದೆ. ಈ ಪ್ರದೇಶವನ್ನು ರಕ್ಷಿತ ವಲಯವೆಂದು 1983 ರಲ್ಲಿ ಘೋಷಿಸಲಾಗಿದೆ.
ಈ ಪ್ರದೇಶವು ಸಾಕಷ್ಟು ವನ್ಯಜೀವಿಗಳ ಆವಾಸ ತಾಣವಾಗಿದೆ. ಹುಲಿ, ಆನೆ, ಜಿಂಕೆ, ನೀಲಗಿರಿ ಲಂಗೂರ್, ಚಿರತೆ, ಕರಡಿ, ಕೋತಿ, ನೀಲಗಿರಿ ತಾರ್ ಪ್ರಾಣಿಗಳು ಹೇರಳವಾಗಿವೆ. 53 ಚದರ್ ಕಿ. ಮೀ. ವ್ಯಾಪ್ತಿಯಲ್ಲಿ ಇದು ಹರಡಿಕೊಂಡಿದೆ. ಈ ಪ್ರದೇಶವು ವನ್ಯಜೀವಿ ಆಸಕ್ತರು ಹಾಗೂ ಅಧ್ಯಯನಕಾರರನ್ನು ಅಪಾರವಾಗಿ ಸೆಳೆಯುತ್ತದೆ.
ವನ್ಯಜೀವಿ ರಕ್ಷಿತಾರಣ್ಯ ವ್ಯಾಪ್ತಿಯಲ್ಲಿರುವ ಇಲ್ಲಿಯ ಅಣೆಕಟ್ಟೊಂದು ಪ್ರಮುಖ ತಾಣವಾಗಿ ಗುರುತಾಗಿದೆ. ಕೇರಳ ಪ್ರವಾಸೋದ್ಯಮ ಅಭಿವೃದ್ಧಿ ಇಲಾಖೆಯು ರಾಜ್ಯ ಅರಣ್ಯ ಇಲಾಖೆ ಹಾಗೂ ಕೇರಳ ಜಲ ಮಂಡಳಿ ಸಹಯೋಗದೊಂದಿಗೆ ಇತ್ತೀಚೆಗೆ ಈ ಅಣೆಕಟ್ಟನ್ನು ಇನ್ನಷ್ಟು ಸಮೃದ್ಧಗೊಳಿಸಲಾಗಿದೆ. ಪ್ರವಾಸಿಗರಿಗೆ ಮನರಂಜನೆ ಹಾಗೂ ನದಿ ನೀರಿನ ಮುದ ಅನುಭವಿಸುವ ಅವಕಾಶ ಲಭಿಸಿದೆ. ಇಲ್ಲಿದ್ದಷ್ಟು ಹೊತ್ತು ಒಂದು ಉತ್ತಮ ಅನುಭವ ಹೊಂದಲು ಸಹಕಾರಿಯಾಗುವ ರೀತಿಯಲ್ಲಿ ರೂಪಿಸಲಾಗಿದೆ.