ಪೊಚಂಪಳ್ಳಿ- ಆಂಧ್ರಪ್ರದೇಶ ರಾಜ್ಯದ ನಲ್ಗೊಂಡ ಜಿಲ್ಲೆಯ ಪಟ್ಟಣವಾಗಿದ್ದು ಇಲ್ಲಿ ನೇಯುವ ಅತ್ಯುತ್ತಮ ಗುಣಮಟ್ಟದ ರೇಷ್ಮೆ ಸೀರೆಗಳಿಂದಾಗಿ ಪೊಚಂಪಳ್ಳಿ ಭಾರತದ ರೇಷ್ಮೆ ನಗರವೆಂದೇ ಪ್ರಸಿದ್ದವಾಗಿದೆ. ಪೊಚಂಪಳ್ಳಿ ಕೇವಲ ಸೀರೆಯಿಂದಾಗಿ ಪ್ರಸಿದ್ದವಲ್ಲ. ಬದಲಿಗೆ ಇಲ್ಲಿನ ಸಂಸ್ಕೃತಿ, ಸಂಪ್ರದಾಯ, ಪರಂಪರೆ, ಇತಿಹಾಸ ಮತ್ತು ಆಧುನಿಕತೆಗಳ ಸಮ್ಮಿಲನದಿಂದಾಗಿ ಈ ಸ್ಥಳಕ್ಕೊಂದು ಭಿನ್ನತೆಯ ರೂಪವನ್ನು ತಂದುಕೊಟ್ಟಿದೆ. ದೃಶ್ಯವೈಭವದ ಪೊಚಂಪಳ್ಳಿಯು, ಬೆಟ್ಟಗಳು, ಆಳೆತ್ತರದ ಪಾಮ್ ಮರಗಳು, ಕೆರೆಗಳು, ಕೊಳಗಳು ಮತ್ತು ದೇವಸ್ಥಾನಗಳ ಮಧ್ಯೆ ನೆಲೆ ನಿಂತಿದೆ. ಇಲ್ಲಿನ ಜನರು ತಮ್ಮ ತಮ್ಮ ಕೆಲಸ ಕಾರ್ಯಗಳಲ್ಲಿ ಸದಾ ಗಡಿಬಿಡಿಯಿಂದಿರುತ್ತಾರೆ. ಎಷ್ಟೇ ಕೆಲಸ ಕಾರ್ಯಗಳಿದ್ದರೂ ಕೂಡ ಇಲ್ಲಿಗೆ ಭೇಟಿ ನೀಡುವ ಅತಿಥಿಗಳನ್ನು ಸ್ವಾಗತಿಸುವುದನ್ನು ಮಾತ್ರ ಇಲ್ಲಿನವರು ಮರೆಯುವುದಿಲ್ಲ. ವಾಸ್ತವ ಸಂಗತಿಯೆಂದರೆ, ಬಹಳಷ್ಟು ವಿದೇಶಿ ಪ್ರವಾಸಿಗರು ಇಲ್ಲಿ ರೇಷ್ಮೆ ಸೀರೆಗಳ ನೇಯ್ಗೆಯನ್ನು ಕಲಿಯುತ್ತ ತಮ್ಮ ದಿನಗಳನ್ನು ಕಳೆಯುತ್ತಾರೆ.
ಪೊಚಂಪಳ್ಳಿ ಪಟ್ಟಣ ಆಸಕ್ತಿ ಕೆರಳಿಸುವಂಥ ಇತಿಹಾಸದ ಬೆಸುಗೆಯನ್ನು ಹೊಂದಿದೆ. ಇತಿಹಾಸದ ಘಟನೆಯೊಂದು ಸ್ವಾತಂತ್ರ್ಯಾ ನಂತರದ ಭಾರತದಲ್ಲಿನ ಮಹತ್ವದ ಚಳುವಳಿಯೊಂದರ ಬೆನ್ನೆಲುಬಾಯಿತು. 1951 ರಲ್ಲಿ ವಿನೋಬಾ ಭಾವೆ ಪೊಚಂಪಳ್ಳಿಗೆ ಭೇಟಿ ನೀಡುತ್ತಾರೆ ಮತ್ತು ಇಲ್ಲಿನ ಜನರಿಂದ ಹಿತವಾದ ಆತಿಥ್ಯ ಸ್ವೀಕರಿಸುತ್ತಾರೆ. ಇಲ್ಲಿನ ಜನ ತಮ್ಮ ಕುಟುಂಬದವರ ಜೀವನೋಪಾಯಕ್ಕೆ 80 ಎಕರೆ ಭೂಮಿಯನ್ನು ಕೇಳುತ್ತಾರೆ. ಜಮೀನುದಾರರಲ್ಲೊಬ್ಬ ವೇದ್ರೆ ರಾಮಚಂದ್ರ ರೆಡ್ಡಿ ಎಂಬಾತ ಜನರಿಗೆ 250 ಎಕರೆ ಭೂಮಿಯನ್ನು ದಾನವಾಗಿ ನೀಡುತ್ತಾನೆ. ಈ ಘಟನೆಯ ಪರಿಣಾಮದಿಂದಾಗಿಯೇ ಭೂದಾನ ಚಳುವಳಿ ಅಥವಾ ಜಮೀನು ದಾನವಾಗಿ ನೀಡುವ ಚಳುವಳಿಗೆ ಜೀವಂತ ರೂಪ ಬಂದಿತು. ಇಲ್ಲಿಂದ ಮುಂದೆ ಈ ಪಟ್ಟಣಕ್ಕೆ ಹೆಸರು ಬಂದದ್ದು: ಭೂದಾನ ಪೊಚಂಪಳ್ಳಿ.ಪೊಚಂಪಳ್ಳಿಯಲ್ಲಿ ಭೇಟಿ ನೀಡಲು ಆಸಕ್ತಿ ಕೆರಳಿಸುವ ಸ್ಥಳಗಳೆಂದರೆ- ವಿನೋಭಾ ಮಂದಿರ ಮತ್ತು 101 ದ್ವಾರಗಳ ಮನೆ. ಹೈದರಾಬಾದ್ ನಿಂದ ಸುಲಭವಾಗಿ ಪೊಚಂಪಳ್ಳಿಯನ್ನು ತಲುಪಬಹುದು. ಇಲ್ಲಿ ಯಾವುದೇ ವಿಮಾನ ನಿಲ್ದಾಣ ಅಥವಾ ರೈಲ್ವೇ ನಿಲ್ದಾಣಗಳಿಲ್ಲ. ಆಂಧ್ರಪ್ರದೇಶದ ಉಳಿದ ಭಾಗಗಳಂತೆಯೇ ಪೊಚಂಪಳ್ಳಿಯಲ್ಲಿ ವಾತಾವರಣ ಬದಲಾಗುತ್ತಿರುತ್ತದೆ. ಹೀಗಾಗಿ ಬೇಸಿಗೆಯಲ್ಲಿ ಅತಿ ಬಿಸಿ ಮತ್ತು ಚಳಿಗಾಲದಲ್ಲಿ ತಂಪಾದ ಹವೆಯಿರುತ್ತದೆ. ಕುತೂಹಲಭರಿತ ಇತಿಹಾಸ, ಭಿನ್ನವಾದ ಸಂಸ್ಕೃತಿ ಮತ್ತು ಶಾಪಿಂಗ್ ಅವಕಾಶಗಳಿಂದಾಗಿ ಪ್ರಪಂಚದಾದ್ಯಂತ ಪ್ರವಾಸಿಗರನ್ನು ಸೆಳೆಯುತ್ತದೆ ಪೊಚಂಪಳ್ಳಿ.