ಪಿಥೋರಗಡ್, ಉತ್ತರಖಂಡ ರಾಜ್ಯದಲ್ಲಿರುವ ಒಂದು ಜಿಲ್ಲೆಯಾಗಿದ್ದು ಹಿಮಾಲಯಕ್ಕೆ ತೆರಳುತ್ತಿರುವವರಿಗೊಂದು ಹೆಬ್ಬಾಗಿಲಾಗಿದೆ. ಇದು ಸೋರ್ ಕಣಿವೆಯಲ್ಲಿದ್ದು ಉತ್ತರದಲ್ಲಿ ಅಲ್ಮೋರಾ ಜಿಲ್ಲೆಯ ಗಡಿಗೆ ಹೊಂದಿಕೊಂಡಿದೆ. ಕಾಳಿ ನದಿಯು ಪೂರ್ವದಲ್ಲಿ ನೇಪಾಳದಿಂದ ಇದನ್ನು ಬೇರ್ಪಡಿಸುತ್ತದೆ. ಇಲ್ಲಿರುವ ಹೆಚ್ಚಿನ ದೇವಾಲಯಗಳು ಮತ್ತು ಕೋಟೆಗಳನ್ನು ಪಾಲ ಮತ್ತು ಚಾಂದ್ ರಾಜವಂಶದ ಕಾಲದಲ್ಲಿ ಕಟ್ಟಲಾಗಿದೆ. 15 ನೇ ಶತಮಾನದಲ್ಲಿ ಸ್ವಲ್ಪ ಅವಧಿಯ ತನಕ ಬ್ರಹ್ಮ ರಾಜವಂಶದ ರಾಜರು ಇದನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದರು. ಇವರಿಂದ ಅಧಿಕಾರ ಪಡೆದುಕೊಂಡ ಚಾಂದ್ ರಾಜವಂಶದವರು ಬ್ರಿಟೀಷರ ಆಳ್ವಿಕೆ ಆರಂಭವಾಗುವ ತನಕ ತಮ್ಮ ಅಧಿಕಾರ ನಡೆಸಿದರು.
ಕುಮಾವೂನಿ ಭಾಷೆಯನ್ನು ಇಲ್ಲಿಯ ಜನ ಮಾತನಾಡುತ್ತಾರೆ. ಇದು ನೈಸರ್ಗಿಕ ಸಂಪನ್ಮೂಲಗಳಾದ ಸುಣ್ಣದಕಲ್ಲು, ತಾಮ್ರ, ಮ್ಯಾಗ್ನೇಷಿಯಂ ಮತ್ತು ಬಳಪದ ಕಲ್ಲಿನಿಂದ ಸಂಪದ್ಭರಿತವಾಗಿದೆ. ಅಲ್ಲದೆ ಸುತ್ತಲೂ ಸಾಲ್, ಚಿರ್ ಮತ್ತು ಓಕ್ ನಂತಹ ಮರಗಳ ಹಚ್ಚ ಹಸುರಿನಿಂದ ಆವೃತವಾಗಿದೆ. ಇದು ಹಿಮಾಲಯದ ಜಿಂಕೆ, ಸಾಂಬಾರ್ ಮತ್ತು ಹುಲಿಗಳ ನೆಲೆಯಾಗಿದೆ. ಇವುಗಳ ಜೊತೆಗೆ ಹಲವು ಹಕ್ಕಿಗಳೂ, ಸರಿಸೃಪಗಳೂ ಇಲ್ಲಿವೆ.
ಇಲ್ಲಿರುವ ಹಲವಾರು ಚರ್ಚುಗಳು, ಮಿಷನರಿ ಶಾಲೆಗಳು ಮತ್ತು ಕಟ್ಟಡಗಳನ್ನು ಬ್ರಿಟೀಷರ ಆಳ್ವಿಕೆಯ ಕಾಲದಲ್ಲಿ ಕಟ್ಟಲಾಗಿವೆ. ಪಿಥೋರಗಡ್ ಗೆ ಭೇಟಿ ನೀಡುವ ಪ್ರವಾಸಿಗರು ಇದರ ಜೊತೆಗೆ ಕಪಿಲೇಶ್ವರ ಮಹಾದೇವ ದೇವಸ್ಥಾನವನ್ನು ನೋಡಬಹುದು, ಇಲ್ಲಿ ಹಿಂದೂ ದೇವತೆ ಶಿವನ ಆರಾಧನೆ ನಡೆಯುತ್ತದೆ. ಇಲ್ಲಿನ ಜನರ ನಂಬಿಕೆಯ ಪ್ರಕಾರ, ಪ್ರಸಿದ್ಧ ಸಂತ ಕಪಿಲ ಮಹರ್ಷಿ ಇಲ್ಲಿಯೇ ತಮ್ಮ ತಪಸ್ಸನ್ನಾಚರಿಸಿದ್ದರು. ಕೇದಾರ, ಇಲ್ಲಿನ ಮತ್ತೊಂದು ಪ್ರಮುಖ ಆಕರ್ಷಣೆ. ಇದು ಪಿಥೋರಗಡ್ ನಿಂದ ದಕ್ಷಿಣಕ್ಕೆ ಸುಮಾರು 8 ಕಿ.ಮೀ ದೂರದಲ್ಲಿದೆ.
ಇಲ್ಲಿ ಭೇಟಿ ನೀಡುವ ಪ್ರವಾಸಿಗರು ಸುಮಾರು 20 ಕಿ.ಮೀ ದೂರದಲ್ಲಿರುವ ಅಭಯಾರಣ್ಯ ಆಶುರ್ ಛುಲಾವನ್ನು ನೊಡಬಬಹುದು. ಇದು ಸಮುದ್ರ ಮಟ್ಟದಿಂದ 5412 ಅಡಿ ಎತ್ತರದಲ್ಲಿದೆ. ಇದರ ಜೊತೆಗೆ ಜೊಹರ್ ಪ್ರದೇಶಕ್ಕೆ ಪ್ರವೇಶ ದ್ವಾರದಂತಿರುವ ಮುನ್ ಶ್ಯಾರಿಯನ್ನೂ ನೋಡಬಹುದು. ಇಲ್ಲಿಂದ ಮಿಲ್ಲಾಮ್, ನಾಮಿಕ್ ಮತ್ತು ರಾಲಮ್ ಹಿಮನದಿಗಳಿಗೂ ಭೇಟಿ ನೀಡಬಹುದು.
ಪಿಥೋರಗಡ್ ಕೋಟೆ ಇಲ್ಲಿನ ಇನ್ನೊಂದು ಪ್ರಸಿದ್ಧ ಪ್ರವಾಸಿ ತಾಣ. ಇದನ್ನು ಗೋರ್ಖಾಗಳು ಪಿಥೋರಗಡ್ ಪ್ರದೇಶವನ್ನು ಆಕ್ರಮಿಸಿದ ನಂತರ 1789 ರಲ್ಲಿ ಕಟ್ಟಿದರು. ಆಕೋಟ್ ಮಸ್ಕ್ ಜಿಂಕೆಗಳ ಅಭಯಾರಣ್ಯವೂ ಇದರ ಸಮೀಪದಲ್ಲಿದೆ. ಇದನ್ನು ಕಸ್ತೂರಿ ಮೃಗಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಆರಂಭಿಸಲಾಗಿದೆ. ಈ ಅಭಯಾರಣ್ಯದಲ್ಲಿ ಪ್ರವಾಸಿಗರು ಚಿರತೆ, ಕಾಡು ಬೆಕ್ಕು, ಸಿವೆಟ್ ಬೆಕ್ಕು, ಬಾರ್ಕಿಂಗ್ ಜಿಂಕೆ, ಸೆರೋವ್, ಗೋರಲ್, ಕಂದು ಬಣ್ಣದ ಹಿಮ ಚಿರತೆಗಳು, ಕಸ್ತೂರಿ ಮೃಗ, ಹಿಮಾಲಯದ ಕಪ್ಪು ಕರಡಿಗಳು ಮತ್ತು ಭರಾಲ್ ನಂತಹ ಪ್ರಾಣಿಗಳನ್ನೂ ನೋಡಬಹುದಾಗಿದೆ. ಇದರ ಜೊತೆಗೆ ಈ ಅಭಯಾರಣ್ಯದಲ್ಲಿ ಹಲವು ಪಕ್ಷಿಗಳು, ಹಿಮ ಕಾಕ್ಸ್, ಮೊನಾಲ್ಸ್, ಲಾವಗೆಗಳು ಮತ್ತು ಚುಕೋರ್ಸ್ ಗಳನ್ನು ಕಾಣಬಹುದಾಗಿದೆ.
ಜೌಲ್ಜಿಬಿ ಒಂದು ಪ್ರಸಿದ್ಧ ಪ್ರವಾಸಿ ತಾಣ. ಇದು ಪಿಥೋರಗಡದಿಂದ ಸುಮಾರು 68 ಕಿ.ಮೀ ದೂರದಲ್ಲಿದೆ. ಇದು ಗೋರಿ ಮತ್ತು ಕಾಳಿ ನದಿಗಳು ಕೂಡುವ ಪ್ರದೇಶವೂ ಆಗಿದೆ. ಇಲ್ಲಿ ಮಕರ ಸಂಕ್ರಾಂತಿಯ ಸಂದರ್ಭದಲ್ಲಿ ದೊಡ್ಡ ಜಾತ್ರೆಯನ್ನು ಆಯೋಜಿಸಲಾಗುತ್ತದೆ. ಇಲ್ಲಿನ ಸ್ಥಳೀಯರ ಪ್ರಕಾರ, ಇದನ್ನು ಮೊದಲು 1914 ರಲ್ಲಿ ಆರಂಭಿಸಲಾಯಿತು.
ಪಿಥೋರಗಡ ನಗರದಿಂದ 4 ಕೀ.ಮೀ ದೂರದಲ್ಲಿರುವ ನಕುಲೇಶ್ವರ ಒಂದು ಪ್ರಮುಖ ದೇವಾಲಯವಾಗಿದೆ. ಇದೊಂದು ಶಿವ ದೇವಾಲಯವಾಗಿದ್ದು, ಖುಜರಾಹೋ ಶೈಲಿಯಲ್ಲಿ ಇದನ್ನು ನಿರ್ಮಿಸಲಾಗಿದೆ. ಅರ್ಜುನೇಶ್ವರ ದೇವಾಲಯ, ಚಂದಕ್, ಮೋಸ್ತಾಮನು ದೇವಾಲಯ, ಧ್ವಾಜ ದೇವಾಲಯ, ಕೊಟ ಗಾರಿ ದೇವಾಲಯ, ದಿದಿಹತ್, ನಾರಾಯಣ ಆಶ್ರಮ ಮತ್ತು ಝುಲಾಘಟ್ ಇಲ್ಲಿನ ಇತರೆ ಪ್ರಮುಖ ದೇವಾಲಯಗಳು. ಇದು ಸಾಹಸಿ ಕ್ರೀಡೆಗಳಾದ ಸ್ಕೀಯಿಂಗ್, ಹ್ಯಾಂಗ್ ಗ್ಲೈಡಿಂಗ್ ಮತ್ತು ಪಾರಾಗ್ಲೈಡಿಂಗ್ ಗೆ ಪ್ರಸಿದ್ಧವಾಗಿದೆ.
ಪ್ರವಾಸಿಗರು ಇಲ್ಲಿಗೆ ವಿಮಾನ ಮಾರ್ಗ, ರಸ್ತೆ ಮಾರ್ಗ ಮತ್ತು ರೈಲಿನ ಮೂಲಕ ತಲುಪಬಹುದಾಗಿದೆ. ಪಂತನಗರ್ ವಿಮಾನ ನಿಲ್ದಾಣ ಇಲ್ಲಿಗೆ ಸಮೀಪದಲ್ಲಿರುವ ವಿಮಾನ ನಿಲ್ದಾಣವಾಗಿದೆ. ಟಂಕಾಪುರ್ ರೈಲ್ವೆ ನಿಲ್ದಾಣ ಇಲ್ಲಿಗೆ ಸಮೀಪದಲ್ಲಿರುವ ರೈಲ್ವೆ ನಿಲ್ದಾಣವಾಗಿದೆ.
ಇಲ್ಲಿಗೆ ಭೇಟಿ ನೀಡಲಿಚ್ಛಿಸುವ ಪ್ರವಾಸಿಗರು ಬೇಸಿಗೆಯಲ್ಲಿ ಭೇಟಿ ನೀಡುವುದು ಸೂಕ್ತವಾಗಿದೆ, ಏಕೆಂದರೆ ಈ ಸಂದರ್ಭದಲ್ಲಿ ಇಲ್ಲಿನ ಹವಾಮಾನವು ಬಹಳ ಆಹ್ಲಾದಕರವಾಗಿದ್ದು ಹೊರಗಡೆ ತಿರುಗಾಡಿ ಎಲ್ಲಾ ಸ್ಥಳಗಳನ್ನು ನೋಡಲು ಸೂಕ್ತವಾಗಿದೆ.