ಸೋಲಂಕಿಯರ ಕಾಲದಲ್ಲಿ ಇದು ಮುಖ್ಯ ಜೈನ ಕೇಂದ್ರವಾಗಿದ್ದರಿಂದ ಇಲ್ಲಿ ನೂರಾರು ಜೈನ ದೇವಾಲಯಗಳಿವೆ. ಇವುಗಳಲ್ಲಿ ಮುಖ್ಯವಾದುದು ಪಂಚಸಾರ ಪಾರ್ಶ್ವನಾಥ ಜೈನ ದೆರ್ಸಾರ್. ಪಟಾನ್ನಲ್ಲಿ ಹಲವು ದೇವಾಲಯಗಳಲ್ಲಿ ಅಮೃತ ಶಿಲೆಯ ನೆಲಹಾಸು ಮತ್ತು ಕಲ್ಲಿನ ಕೆತ್ತನೆಗಳನ್ನು ಕಾಣಬಹುದು. ಇವು ಜೈನದೇವಾಲಯಗಳ ಲಕ್ಷಣಗಳು. ಮೊದಲು ಜೈನ ದೇವಾಲಯಗಳನ್ನು ಮರದಲ್ಲಿ ಕಟ್ಟಲಾಗುತ್ತಿತ್ತು. ಮರದಿಂದ ಶಿಲೆಗೆ ಪರಿವರ್ತನೆಹೊಂದಿದ್ದಕ್ಕೆ ಒಂದು ಕುತೂಹಲಕಾರಿ ಕತೆಯನ್ನು ಹೇಳಲಾಗುತ್ತದೆ.
ಒಮ್ಮೆ ಪ್ರಮುಖ ವಾಸ್ತುಶಿಲ್ಪಿಯಾಗಿದ್ದ ಉದಾ ಮೆಹ್ತಾನು ಇಲಿಯೊಂದು ಉರಿಯುತ್ತಿರುವ ಮೇಣದಬತ್ತಿಯನ್ನು ಕಚ್ಚಿಕೊಂಡು ಹೋಗುತ್ತಿರುವುದನ್ನು ಕಂಡನಂತೆ. ಇಲ್ಲಿಂದ ನಂತರ ದೇವಾಲಯಗಳನ್ನು ಕಲ್ಲಿನಲ್ಲಿ ಕಟ್ಟುವ ಪರಿಪಾಠ ಬೆಳೆಯಿತಂತೆ.