ಒಡಿಶಾ(ಒರಿಸ್ಸಾ)ದ ಜಗತ್ ಸಿಂಗ್ ಪುರ ಜಿಲ್ಲೆಯ ಪಾರಾದೀಪ್ ಒಂದು ಉತ್ತಮ ಕೈಗಾರಿಕಾ ಪ್ರದೇಶವಾಗಿ ಅಭಿವೃದ್ಧಿ ಹೊಂದುತ್ತಿದೆ. ಭುವನೇಶ್ವರ ವಿಮಾನ ನಿಲ್ದಾಣದಿಂದ ಪಾರಾದೀಪ್ 125 ಕಿ.ಮೀ. ಮತ್ತು ಕಟಕ್ ರೈಲು ನಿಲ್ದಾಣದಿಂದ 95 ಕಿ.ಮೀ. ದೂರದಲ್ಲಿದೆ. ಪಾರಾದೀಪ್ ಬಂದರು ಭಾರತದ ಪೂರ್ವ ಕರಾವಳಿಯಲ್ಲಿರುವ ಪ್ರಮುಖ ಬಂದರಾಗಿದೆ.
ಇದು ರಾಜ್ಯದ ಹಳೆಯ ಬಂದರುಗಳಲ್ಲಿ ಒಂದು. ಅಭಿವೃದ್ಧಿಗೆ ವಿಪುಲ ಅವಕಾಶಗಳಿರುವುದರಿಂದ ಇಲ್ಲಿ ಸ್ಟೀಲ್ ಪ್ಲಾಂಟ್, ಅಲ್ಯುಮಿನಾ ರಿಫೈನರೀಸ್, ಪೆಟ್ರೋಕೆಮಿಕಲ್ ಕಾಂಪ್ಲೆಕ್ಸ್, ಥರ್ಮಲ್ ಪವರ್ ಪ್ಲಾಂಟ್ ಮುಂತಾದ ಯೋಜನೆಗಳನ್ನು ಆರಂಭಿಸಲಾಗುತ್ತಿದೆ. ಇಂಥ ಕೈಗಾರಿಕೆಗಳ ಬಗ್ಗೆ ಆಸಕ್ತಿ ಇರುವವರಿಗೆ ಪಾರಾದೀಪ್ ಪ್ರವಾಸೋದ್ಯಮ ಹಲವಾರು ಮಾಹಿತಿ ನೀಡುತ್ತದೆ. ನಿಸರ್ಗ ಸೌಂದರ್ಯ ಆರಾಧಿಸುವವರಿಗೆ ಇಲ್ಲಿನ ದುಬಾರಿ ಬೀಚ್, ಹಚ್ಚಹಸಿರು ಅರಣ್ಯಪ್ರದೇಶ, ನೈಸರ್ಗಿಕ ಚಿಲುಮೆಗಳು ಈ ನಗರವನ್ನು ಆಕರ್ಷಣೀಯ ಪ್ರದೇಶವನ್ನಾಗಿ ಮಾಡಿದೆ.
ಪಾರಾದೀಪ್ ಸುತ್ತಲಿನ ಪ್ರವಾಸಿ ತಾಣಗಳು
ಪಾರಾದೀಪ್ ಬೀಚ್ ನಲ್ಲಿ ಕುಟುಂಬ ಸಮೇತರಾಗಿ ಪ್ರಸಾ ಕೈಗೊಳ್ಳುವುದು ಒಂದು ಮಜವಾದ ಅನುಭವ. ಈಜುವುದು ಅಥವಾ ಬಂಗಾರದಂಥ ಬೀಚ್ ನಲ್ಲಿ ಉದ್ದಕ್ಕೆ ನಡೆದಾಡುವುದು ವಿಶಿಷ್ಟ ಅನುಭವ ನೀಡುತ್ತದೆ. 1990ರಲ್ಲಿ ಪಾರಾದೀಪ್ ನಲ್ಲಿ ಭೀಕರ ಬಿರುಗಾಳಿ ಬೀಸಿದಾಗ ಜೀವ ಕಳೆದುಕೊಂಡ ಜನರ ನೆನಪಿಗಾಗಿ ನಿರ್ಮಿಸಲಾಗಿರುವ ಹಸಿರು ಮತ್ತು ಅತ್ಯಂತ ಸ್ವಚ್ಛವಾದ ಸ್ಮೃತಿ ಉದ್ಯಾನವನದಲ್ಲಿಯೂ ವಿರಮಿಸಬಹುದು.
ಇಲ್ಲಿರುವ ಸಂಗೀತ ಕಾರಂಜಿ ಕೂಡ ನೋಡತಕ್ಕದ್ದು. ಗಹಿರಮಾತಾ ಬೀಚ್ ವಿಶಿಷ್ಟ ತಳಿಯ ಬಿಳಿ ಮೊಸಳೆಗಳಿಗೆ ಆಶ್ರಯತಾಣವಾಗಿದ್ದು, ಬಿಳಿ ಮಾನಿಟರ್ ಹಲ್ಲಿ, ಸಮುದ್ರ ಆಮೆ, ವಲಸೆ ಹಕ್ಕಿಗಳು ಮತ್ತು ಜಿಂಕೆಗಳಿಗೆ ಹೆಸರು ಪಡೆದಿದೆ. ಅನೇಕ ತೊರೆ, ನದಿಗಳು ಇರುವ ಭಿತರಕನಿಕಾ ನ್ಯಾಷನಲ್ ಪಾರ್ಕ್ ನಿಮ್ಮನ್ನು ಮನುಷ್ಯ, ಪ್ರಾಣಿಗಳು ಮತ್ತು ನಿಸರ್ಗ ಒಟ್ಟಾಗಿ ಜೀವಿಸುತ್ತಿದ್ದ ನೂರಾರು ವರ್ಷಗಳ ಹಿಂದಿನ ಕಾಲಕ್ಕೆ ಕರೆದೊಯ್ಯುತ್ತದೆ.
ಪಾರಾದೀಪ್ ಮರೈನ್ ಅಕ್ವೇರಿಯಂನಲ್ಲಿ ಸುಮಾರು 28 ಟ್ಯಾಂಕ್ ಗಳಲ್ಲಿ ಸಾಕಲಾಗಿರುವ ವಿವಿಧ ತಳಿಯ ಮೀನುಗಳು ನಿಬ್ಬೆರಗಾಗುವಂತೆ ಮಾಡುತ್ತದೆ. ಇನ್ನು ಇಲ್ಲಿರುವ ಜಗನ್ನಾಥ ದೇವಸ್ಥಾನದಲ್ಲಿ ನಡೆಯುವ ವಾರ್ಷಿಕ ಕರ ಉತ್ಸವದಲ್ಲಿ ಎಲ್ಲ ಧರ್ಮದ ಜನರು ಜಗನ್ನಾಥ ದೇವರ ರಥವನ್ನು ಎಳೆಯುವುದನ್ನು ಪ್ರವಾಸಿಗರು ಕಾಣಬಹುದು. ನಿಜವಾದ ಜಾತ್ಯತೀತ ಭಾರತ ಇಲ್ಲಿದೆ ಎಂಬುದು ಪ್ರವಾಸಗರ ಗಮನಕ್ಕೆ ಖಂಡಿತ ಬರುತ್ತದೆ.
ಪಾರಾದೀಪ್ ನಿಂದ ಕೇವಲ 12 ಕಿ.ಮೀ. ದೂರದಲ್ಲಿರುವ ದೀಪಸ್ತಂಭ ಮತ್ತು ನೆಹರೂ ಬಂಗ್ಲೋ ಮತ್ತೊಂದೆರಡು ಆಕರ್ಷಣೀಯ ತಾಣಗಳಾಗಿವೆ. ಹನುಮಾನ್ ಮಂದಿರಕ್ಕೂ ಹಲವಾರು ಭಕ್ತರು ಭೇಟಿ ಕೊಡುತ್ತಾರೆ.
ನಿರೂರಿಸುವ ಸಮುದ್ರ ಖಾದ್ಯ ಮತ್ತು ತಾಜಾ ಪಾನೀಯ
ಸೀ ಫುಡ್ ಇಷ್ಟಪಡುವವರಿಗೆ ಪಾರಾದೀಪ್ ರಸದೌತಣ ನೀಡುತ್ತದೆ. ಅತ್ಯುತ್ತಮವಾದ ಮೀನು ಮತ್ತು ಪ್ರಾನ್ ಇಲ್ಲಿ ಯಾವುದೇ ಸಮಯದಲ್ಲಿ ದೊರೆಯುತ್ತವೆ. ತೆಂಗಿನಕಾಯಿಯಿಂದ ತಯಾರಿಸಲಾಗುವ ಪಾರಾದೀಪ್ ಲಸ್ಸಿ ಮತ್ತು ಗಾವೇಸ್ಕರ್ ಲಸ್ಸಿ ಇಲ್ಲಿ ಬರುವ ಪ್ರತಿ ಪ್ರವಾಸಿಗನ ನೆಚ್ಚಿನ ಪಾನೀಯವಾಗಿದೆ. ದೆಹಲಿ ದರ್ಬಾರಿನಲ್ಲಿ ಒಂದು ಪ್ಲೇಟ್ ಬಿರಿಯಾನಿಯನ್ನು ಆರ್ಡರ್ ಮಾಡಿ ನೋಡಿ, ಮತ್ತೊಂದು ಪ್ಲೇಟ್ ಬೇಕೆಂದು ಕೇಳದಿದ್ದರೆ ಹೇಳಿ. ಇಲ್ಲಿ ದೊರೆಯುವ ಬಿರಿಯಾನಿ 99ಗೆ ಅತಿ ಹೆಚ್ಚು ಬೇಡಿಕೆ.
ಪಾರಾದೀಪ್ ಹವಾಮಾನ
ಇಲ್ಲಿನ ಹವಾಮಾನವನ್ನು ಮೂರು ಭಾಗಗಳನ್ನಾಗಿ ಮಾಡಬಹುದು - ಬೇಸಿಗೆ, ಚಳಿಗಾಲ ಮತ್ತು ಮಳೆಗಾಲ. ಪಾರಾದೀಪ್ ನಲ್ಲಿ ಬೇಸಿಗೆಯಲ್ಲಿ ಭಾರೀ ಬಿಸಿಲಿರುತ್ತದೆ ಮತ್ತು ಚಳಿಗಾಲದಲ್ಲಿ ವಿಪರೀತ ಚಳಿಯಿರುತ್ತದೆ.
ಪಾರಾದೀಪ್ ತಲುಪುವುದು ಹೇಗೆ?
ಭುವನೇಶ್ವರ್ ವಿಮಾನ ನಿಲ್ದಾಣ ಅಥವಾ ಕಟಕ್ ರೈಲು ನಿಲ್ದಾಣದಿಂದ ಪಾರಾದೀಪ್ ಗೆ ಹಲವಾರು ಬಸ್ ಗಳ ವ್ಯವಸ್ಥೆಯಿದೆ. ಎನ್ಎಚ್-5ಎ ಒರಿಸ್ಸಾ ರಾಜ್ಯದ ಎಲ್ಲ ನಗರಗಳ ಸಂಪರ್ಕ ಕೊಂಡಿಯಾಗಿದೆ. ಪಾರಾದೀಪ್ ಗೆ ರೈಲು ಸಂಪರ್ಕವಿದ್ದರೂ ಎಲ್ಲರೂ ಭುವನೇಶ್ವರ್ ಅಥವಾ ಕಟಕ್ ಮುಖಾಂತರವೇ ಪಾರಾದೀಪ್ ತಲುಪಲು ಇಷ್ಟಪಡುತ್ತಾರೆ. ನವೆಂಬರ್ ನಿಂದ ಮಾರ್ಚ್ ವರೆಗೆ ಯಾವುದೇ ಸಮಯದಲ್ಲಿ ಪಾರಾದೀಪ್ ಗೆ ಭೇಟಿ ನೀಡಬಹುದು.