ಪಾಣಿಪತ್ ಹರಿಯಾಣದ ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಭಾರತದ ಇತಿಹಾಸವನ್ನು ಬದಲಾಯಿಸಿದ ಮೂರು ಐತಿಹಾಸಿಕ ಯುದ್ಧಗಳು ಇದೇ ಸ್ಥಳದಲ್ಲಿ ನಡೆದವು. ಈ ನಗರ ಮತ್ತು ಜಿಲ್ಲೆಯನ್ನು ಪಾಣಿಪತ್ ಎಂಬ ಹೆಸರಿನಿಂದಲೆ ಕರೆಯುತ್ತಾರೆ. ಈ ಊರು ತನ್ನ ಗರ್ಭದಲ್ಲಿ ಅಸಂಖ್ಯಾತ ಐತಿಹಾಸಿಕ ಸ್ಮಾರಕಗಳನ್ನು ಮತ್ತು ಸಾಂಸ್ಕೃತಿಕ ಅಂಶಗಳನ್ನು ಅಡಗಿಸಿಕೊಂಡು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಭಗವದ್ಗೀತೆಯ ಪ್ರಥಮ ಅಧ್ಯಾಯದಲ್ಲಿ ಪಾಣಿಪತ್ನ ಪ್ರಸ್ತಾಪ ಬರುತ್ತದೆ. ಅದರಲ್ಲಿ ಇದನ್ನು " ಧರ್ಮಕ್ಷೇತ್ರ" ವೆಂದು ಕರೆಯಲಾಗಿದೆ.
ಪಾಣಿಪತ್ ತನ್ನ ಐತಿಹಾಸಿಕ ಮೂಲಗಳ ಹೊರತಾಗಿ ಭಾರತದ " ನೇಕಾರರ ನಗರ"ವೆಂಬ ಖ್ಯಾತಿಗೆ ಪಾತ್ರವಾಗಿದೆ. ಈ ನಗರವು ದೇಶ- ವಿದೇಶಗಳಿಗೆ ಕೈಮಗ್ಗದ ಉತ್ಪನ್ನಗಳನ್ನು ರಫ್ತು ಮಾಡುತ್ತದೆ. ಇಲ್ಲಿನ ಕೈಮಗ್ಗವು ಭಾರೀ ಹೆಸರುವಾಸಿಯಾಗಿದೆ.
ಪಾಣಿಪತ್ ಸುತ್ತ- ಮುತ್ತ ಇರುವ ಪ್ರವಾಸಿ ತಾಣಗಳು
ಪಾಣಿಪತ್ನಲ್ಲಿ ಹಲವಾರು ಸ್ಮಾರಕಗಳನ್ನು, ಕಟ್ಟಡಗಳನ್ನು ಮತ್ತು ವಸ್ತು ಸಂಗ್ರಹಾಲಯಗಳನ್ನು ನಾವು ನೋಡಬಹುದು. ಪಾಣಿಪತ್ ವಸ್ತು ಸಂಗ್ರಹಾಲಯವು ಈ ಪ್ರಾಂತ್ಯದ ಹಿಂದಿನ ಕಾಲದ ಕಲೆ ಮತ್ತು ವಾಸ್ತು ಶಿಲ್ಪದ ಪ್ರತಿಕೃತಿಗಳನ್ನು ಮತ್ತು ಕಲಾವಸ್ತುಗಳನ್ನು ಪ್ರದರ್ಶಿಸುತ್ತಿದೆ. ಇಲ್ಲಿ ನೀವು ಹಳೆಯ ಕೋಟೆ ಎಂದು ಕರೆಯಲ್ಪಡುವ ಪ್ರಾಚೀನ ಕೋಟೆಯನ್ನು ಕಾಣಬಹುದು. ಈ ಕೋಟೆಯು ಇಂದು ಬಹುತೇಕ ಶಿಥಿಲಾವಸ್ಥೆಯಲ್ಲಿದೆ.
ಭಾರತದ ಇನ್ನಿತರ ನಗರಗಳಂತೆ ಪಾಣಿಪತ್ ಹಲವಾರು ಧಾರ್ಮಿಕ ಸ್ಥಳಗಳನ್ನು ತನ್ನಲ್ಲಿ ಹೊಂದಿದೆ. ಮೊಘಲ್ ಸಾಮ್ರಾಜ್ಯವನ್ನು ಭಾರತದಲ್ಲಿ ಸ್ಥಾಪಿಸಿದ ಚಕ್ರವರ್ತಿ ಬಾಬರ್ ನಿರ್ಮಿಸಿದ ಕಾಬುಲಿ ಶಾ ಮಸೀದಿಯು ಈ ಊರಿನಲ್ಲಿರುವ ಪ್ರಾಚೀನ ಕಟ್ಟಡಗಳಲ್ಲಿ ಒಂದಾಗಿದೆ. ವಾಸ್ತು ಶಿಲ್ಪದ ದೃಷ್ಟಿಯಿಂದ ಮತ್ತು ಧಾರ್ಮಿಕ ಶ್ರದ್ಧಾಭಕ್ತಿಗಳ ತಾಣವಾಗಿರುವ ದೇವಿ ದೇವಾಲಯವು ಇಲ್ಲಿನ ಮತ್ತೊಂದು ಪ್ರಮುಖ ಧಾರ್ಮಿಕ ಸ್ಥಳವಾಗಿದೆ.\
ಮೊಘಲ್ ಸೈನ್ಯದ ಮೇಲೆ ವೀರಾವೇಶದಿಂದ ಹೋರಾಡಿದ ಹೆಮುವಿನ ಸಮಾಧಿ ಸ್ಥಳವು, ಇಲ್ಲಿನ ಪ್ರಸಿದ್ಧ ಸ್ಮಾರಕವಾಗಿದೆ. ತೀವ್ರವಾಗಿ ಗಾಯಗೊಂಡು ಪ್ರಙ್ಞಾಶೂನ್ಯನಾಗಿದ್ದ ಇವನ ರುಂಡ ಮುಂಡಗಳನು ಅಕ್ಬರ್ ತನ್ನ ಶಿಬಿರದಲ್ಲಿ ಬೇರ್ಪಡಿಸಿ ಹಾಕಿದನು. ನಂತರ ಹೆಮುವಿನ ಅನುಯಾಯಿಗಳು ಹೆಮುವಿನ ನೆನಪಿಗಾಗಿ ಇಲ್ಲಿ ಒಂದು ಸ್ಮಾರಕವನ್ನು ನಿರ್ಮಿಸಿದರು.
ಪ್ರಥಮ ಪಾಣಿಪತ್ ಯುದ್ಧದಲ್ಲಿ ತನ್ನ ಸೋದರ ಸಂಬಂಧಿ ಬಾಬರನೊಂದಿಗೆ ವೀರಾವೇಶದೊಂದಿಗೆ ಹೋರಾಡಿ ಮಡಿದ ಇಬ್ರಾಹಿಂ ಲೋಧಿಯ ಸಮಾಧಿ ಸಹ ಪಾಣಿಪತ್ನಲ್ಲಿ ಇದೆ. ಪಾಣಿಪತ್ಗೆ ಹೋದಾಗ ಇಲ್ಲಿರುವ ಬು ಅಲಿ ಶಾ ಕಲಂಧರ್ ಎಂಬ ಸ್ಥಳಕ್ಕೆ ನೀವು ಭೇಟಿ ನೀಡಬಹುದು.
ಇದರ ಜೊತೆಗೆ ಬಾಬರ್ ಇಬ್ರಾಹಿಂ ಲೋಧಿಯ ಮೇಲೆ ಸಾಧಿಸಿದ ವಿಜಯದ ನೆನಪಿಗಾಗಿ ನಿರ್ಮಿಸಿದ ಕಾಬೂಲಿ ಬಾಗ್ ಅನ್ನು ಸಹ ನೀವು ಕಾಣಬಹುದು. ಮುಂದೆ ಹುಮಾಯೂನ್ ಇದಕ್ಕೆ ಒಂದು ಕಲ್ಲಿನ ವೇದಿಕೆಯನ್ನು ನಿರ್ಮಿಸಿದನು. ಇದನ್ನು " ಚಬುತ್ರ" ಎಂದು ಸಹ ಕರೆಯುತಾರೆ. ಇದಲ್ಲದೆ ಇಲ್ಲಿ ಸಲಾರ್ ಜಂಗ್ ದ್ವಾರ, ಬು-ಅಲಿ ಶಾ ಕಲಂಧರ್ ಗೋರಿ ಮತ್ತು ಕಾಲಾ ಅಂಬ್ ಎಂಬ ಸ್ಥಳಗಳನ್ನು ಸಹ ನಾವು ನೋಡಬಹುದು.
ತಲುಪುವುದು ಹೇಗೆ
ಪಾಣಿಪತ್ಗೆ ಭಾರತದ ಎಲ್ಲಾ ಮೂಲೆಗಳಿಂದ ರಸ್ತೆ, ರೈಲು ಮತ್ತು ವಿಮಾನ ಯಾನದ ಸಂಪರ್ಕ ಉತ್ತಮವಾಗಿದೆ.