ಪಳನಿ ತಮಿಳುನಾಡಿನ ದಿಂಡುಕ್ಕಲ್ ಜಿಲ್ಲೆಯಲ್ಲಿದೆ. ಇದೊಂದು ಗಿರಿಪ್ರಾಂತ್ಯ. ಭಾರತದ ಪುರಾತನ ಗಿರಿಶ್ರೇಣಿಗಳಲ್ಲಿ ಇದು ಕೂಡ ಒಂದು. ‘ಪಳಂ’ ಎಂದರೆ ‘ಹಣ್ಣು’ ಮತ್ತು ‘ನೀ’ ಎಂದರೆ ‘ನೀನು’ ಎಂಬ ಎರಡು ತಮಿಳು ಪದಗಳಿಂದ ‘ಪಳನಿ’ ಎಂಬ ಹೆಸರು ಬಂದಿದೆ. ಈ ಪಟ್ಟಣವಿರುವ ಬೆಟ್ಟವು ಪೂರ್ವ ಕ್ಯಾಂಬ್ರಿಯನ್ನ ಅವಧಿಗೆ ಸೇರಿದ್ದು.
ಈ ಪ್ರಾಂತ್ಯವು ಪಶ್ಚಿಮ ಘಟ್ಟಗಳ ಪೂರ್ವಭಾಗದಲ್ಲಿದೆ. ಇದು ಹಲವಾರು ಅಲೆಮಾರಿ ಪಳಿಯನ್ ಪಂಗಡಗಳಿಗೆ ಆಶ್ರಯಸ್ಥಾನವಾಗಿದೆ. ಇದು ಮುರುಗನು(ಸುಬ್ರಹ್ಮಣ್ಯ) ನೆಲೆಗೊಂಡಿರುವ ಪವಿತ್ರ ಸ್ಥಳವೆಂದು ಭಾವಿಸಲಾಗಿದೆ. ದಂಡಯುಕ್ತ ಸ್ವಾಮಿ ಮುರುಗನ ದೇವಾಲಯವು ಈ ಬೆಟ್ಟದ ಮೇಲಿದೆ. ಈ ಭಾಗದ ಮತ್ತೊಂದು ಪ್ರಸಿದ್ಧ ಯಾತ್ರಾ ಸ್ಥಳ ಕುರುಂಜಿ ಆಂಡವರ್ ದೇವಾಲಯವನ್ನು ಈ ಬೆಟ್ಟದ ಮೇಲಿಂದ ನೋಡಬಹುದು.
ಇತಿಹಾಸ ಪ್ರಸಿದ್ಧ ಸ್ಥಳ
ಹಲವು ಪವಿತ್ರ ಗ್ರಂಥಗಳಲ್ಲಿ ಈ ಸ್ಥಳದ ಉಲ್ಲೇಖವನ್ನು ನೋಡಬಹುದು. ಪಳನಿಯು ವಿವಿಧ ಸಮಯಗಳಲ್ಲಿ ಮಧುರೈ ಮತ್ತು ಕೊಯಂಬತ್ತೂರು ರಾಜರ ಆಳ್ವಿಕೆಗಳಡಿಯಲ್ಲಿತ್ತು. ಪೆರಿಯನಾಯಕಿ ಅಮ್ಮನ ದೇವಾಲಯದ ವಾಸ್ತುಶಿಲ್ಪದ ಮೇಲೆ ಪಾಂಡ್ಯ ಮತ್ತು ನಾಯಕ ದೊರೆಗಳ ಪ್ರಭಾವವನ್ನು ಕಾಣಬಹುದು. 18ನೇ ಶತಮಾನದಲ್ಲಿ ಇದು ಹೈದರಾಲಿ ಮತ್ತು ಟಿಪ್ಪು ಸುಲ್ತಾನನ ಆಳ್ವಿಕೆಗೆ ಒಳಪಟ್ಟಿತ್ತು. ಅವರು ಇದನ್ನು ಬಾಲಸಮುದ್ರದ ಪಳಯಕ್ಕಾರರಿಗೆ ವಹಿಸಿದ್ದರು. ನಂತರ ಇದನ್ನು ಬ್ರಿಟೀಷರಿಗೆ ಒಪ್ಪಿಸಲಾಯಿತು.
ಯಾತ್ರಾ ಸ್ಥಳದಲ್ಲಿನ ಪ್ರವಾಸಿ ಆಕರ್ಷಣೆಗಳು- ಪಳನಿಯ ಸುತ್ತಮುತ್ತ
ಪಳನಿ ಹಲವು ದೇವಾಲಯಗಳ ತವರು. ಪಳನಿ ದಂಡಯುತಪಾಣಿ ಮುರುಗ ದೇವಾಲಯ, ತಿರುವಾವಿಂಕುಡಿ ದೇವಾಲಯ, ಇಂದುಬನ್ ದೇವಾಲಯ, ಪದ ವಿನಾಯಕರ ದೇವಾಲಯ ಎಂಬ ಗಣಪತಿ ದೇವಾಲಯ, ಪೆರಿಯ ನಾಯಕಿ ಅಮ್ಮನ ಪಾರ್ವತಿ ದೇವಾಲಯ, ಪೆರಿಯನ್ ಅವುಡೈಯೂರ್ ಎಂಬ ಶಿವನ ದೇವಾಲಯ ಮತ್ತು ಕನ್ನಡಿ ಪೆರುಮಾಳ್ ಎಂಬ ವಿಷ್ಣುವಿನ ದೇವಾಲಯ- ಇವು ಇಲ್ಲಿನ ಕೆಲವು ಪ್ರಸಿದ್ಧ ದೇಗುಲಗಳು. ಇಲ್ಲಿ ತಾಯಿಪುಸಂ, ವೈಕಾಸಿ ವೈಶಾಖಂ ಮತ್ತು ತಿರುಕಾರ್ತಿಕೈ ಹಬ್ಬಗಳನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಈ ಸ್ಥಳ ಪಕ್ಷಿವೀಕ್ಷಕರಿಗೆ ಸ್ವರ್ಗವಿದ್ದಂತೆ. ಇಲ್ಲಿ ಕ್ರೌಂಚ ಹಕ್ಕಿಗಳು, ಬೆಳ್ಳಕ್ಕಿಗಳು ಮತ್ತು ಚಿನ್ನದ ಬಣ್ಣದ ಮರಕುಟಿಗ ಹಕ್ಕಿಗಳು ಹೆಚ್ಚಾಗಿ ಕಂಡು ಬರುತ್ತವೆ. ಇದರ ಪ್ರಕೃತಿ ಸೌಂದರ್ಯ ಚಾರಣಿಗರನ್ನು ಮತ್ತು ಪರ್ವತಾರೋಹಿಗಳನ್ನು ತನ್ನತ್ತ ಸೆಳೆಯುತ್ತದೆ.
ಪಳನಿಗೆ ಹೋಗುವುದು ಹೇಗೆ?
ಪಳನಿಯ ಪ್ರಯಾಣ ಕಷ್ಟವೇನಲ್ಲ. ಇಲ್ಲಿಗೆ ಹತ್ತಿರದ ವಿಮಾನ ನಿಲ್ದಾಣವೆಂದರೆ ಇಲ್ಲಿಂದ 100 ಕಿ.ಮೀ ದೂರದಲ್ಲಿರುವ ಕೊಯಂಬತ್ತೂರು ವಿಮಾನ ನಿಲ್ದಾಣ. ಇಲ್ಲಿಂದ ಪಳನಿಗೆ ಬಸ್ಸು ಮತ್ತು ಟ್ಯಾಕ್ಸಿಗಳು ಸುಲಭವಾಗಿ ದೊರೆಯುತ್ತವೆ. ಪಳನಿಯ ರೈಲ್ವೇ ನಿಲ್ದಾಣವು ಕೊಯಂಬತ್ತೂರು ಮತ್ತು ಮಧುರೈಗಳೊಂದಿಗೆ ಸಂಪರ್ಕ ಹೊಂದಿದೆ. ಈ ನಿಲ್ದಾಣಗಳು ಭಾರತದ ಎಲ್ಲ ಮುಖ್ಯ ನಗರಗಳೊಂದಿಗೆ ಸಂಪರ್ಕ ಹೊಂದಿದೆ. ತಮಿಳುನಾಡಿನ ಎಲ್ಲ ಭಾಗಗಳಿಂದಲೂ ಸರ್ಕಾರಿ ಮತ್ತು ಖಾಸಗಿ ಬಸ್ಸುಗಳು ಪಳನಿಗೆ ಹೋಗುತ್ತವೆ.
ಪಳನಿಯ ಹವಾಮಾನ
ಪಳನಿಯಲ್ಲಿ ಬೇಸಿಗೆ ಕಾಲ ಅತ್ಯಂತ ತೀಕ್ಷ್ಣವಾಗಿರುತ್ತದೆ. ಈ ಸಮಯದಲ್ಲಿ ಪ್ರಯಾಣ ತ್ರಾಸದಾಯಕ. ಮಳೆಗಾಲದಲ್ಲಿ ಸುಮಾರಾಗಿ ಮಳೆಯಾಗುತ್ತದೆ. ಆದ್ದರಿಂದ ಪಳನಿಗೆ ಹೋಗಲು ಉತ್ತಮ ಸಮಯವೆಂದರೆ ಚಳಿಗಾಲ. ಈ ಸಮಯದಲ್ಲಿ ತಾಪಮಾನವು ಕಡಿಮೆಯಿದ್ದು ಓಡಾಟಕ್ಕೆ ಅನುಕೂಲಕರವಾಗಿರುತ್ತದೆ. ಚಳಿಗಾಲದ ತಿಂಗಳುಗಳಲ್ಲೇ ಹಲವು ಹಬ್ಬಗಳನ್ನು ಆಚರಿಸುವುದರಿಂದ ಅವುಗಳನ್ನು ನೋಡಲು ಅನುಕೂಲಕರವಾಗಿರುತ್ತದೆ.