ದಕ್ಷಿಣ ಭಾರತದ ರಾಜ್ಯವಾದ ಆಂಧ್ರ ಪ್ರದೇಶದ ನಿಜಾಮಾಬಾದ್ ಜಿಲ್ಲೆಯ ನಗರಸಭೆ ಹಾಗೂ ಒಂದು ನಗರ ನಿಜಾಮಾಬಾದ್. ಇದನ್ನು ಇಂದೂರು ಮತ್ತು ಇಂದ್ರಪುರಿ ಎಂದೂ ಕರೆಯುತ್ತಾರೆ. ನಿಜಾಮಾಬಾದ್ ಜಿಲ್ಲೆಯ ಕೇಂದ್ರ ಸ್ಥಳಗಳು ಕೂಡ ನಿಜಾಮಾಬಾದ್ ನಗರದಲ್ಲಿವೆ ಹಾಗೂ ಇದು ರಾಜ್ಯದ ಹತ್ತನೆಯ ದೊಡ್ಡ ಪಟ್ಟಣವಾಗಿದೆ.
ಎಂಟನೆಯ ಶತಮಾನದಲ್ಲಿ ಈ ನಗರವು ರಾಷ್ಟ್ರಕೂಟರ ಅರಸನಾದ ಇಂದ್ರ ವಲ್ಲಭ ಪಂಥ್ಯ ವರ್ಷ ಇಂದ್ರ ಸೋಮನ ಅಧೀನದಲ್ಲಿತ್ತು. ಇದೇ ರಾಜನಿಂದಾಗಿ ಈ ನಗರ ತನ್ನ ಹೆಸರನ್ನು ಪಡೆದುಕೊಂಡಿದೆ. ಆದರೆ ಸಿಕಂದರಾಬಾದ್ ಮತ್ತು ಮನ್ಮಾಡ್ ನಡುವಿನ ರೈಲ್ವೆ ಮಾರ್ಗದ ನಿರ್ಮಾಣದ ನಂತರ ನಿಜಾಮಾಬಾದ್ ರೈಲ್ವೆ ನಿಲ್ದಾಣ ಆರಂಭವಾಯಿತು. ಈ ರೈಲ್ವೆ ನಿಲ್ದಾಣವನ್ನು ಆಗ ಈ ಪ್ರದೇಶವನ್ನು ಆಳಿದ್ದ ನಿಜಾಮ್ – ಉಲ್- ಮುಲ್ಕ್ ನ ಹೆಸರಿನಲ್ಲಿ ಆರಂಭಿಸಲಾಯಿತು. ನಿಜಾಮಾಬಾದ್ ರೈಲ್ವೆ ನಿಲ್ದಾಣವು ಮುಂಬಯಿ ಮತ್ತು ಹೈದರಾಬಾದ್ ನಗರಗಳನ್ನು ಜೋಡಿಸುವ ಕಾರಣ ಒಂದು ಪ್ರಮುಖ ರೈಲ್ವೆ ನಿಲ್ದಾಣವಾಗಿದೆ ಮತ್ತು ಇದೇ ಕಾರಣದಿಂದ ಇದರ ಹೆಸರನ್ನು ಇಂದ್ರಪುರಿಯಿಂದ ನಿಜಾಮಾಬಾದ್ ಎಂದು ಬದಲಾವಣೆ ಮಾಡಲಾಯಿತು.
ನಿಜಾಮ್ – ಉಲ್ –ಮುಲ್ಕ್ ನ ಆಡಳಿತಾವಧಿಯಲ್ಲಿ ನಿಜಾಮಾಬಾದ್ ತನ್ನ ಸುವರ್ಣಯುಗವನ್ನು ಕಂಡಿತು. ಅವನು ಕಲೆ ಮತ್ತು ಸಂಸ್ಕೃತಿಯ ಆರಾಧಕನಾಗಿದ್ದು ತನ್ನ ಅವಧಿಯಲ್ಲಿ ದೇವಾಲಯ ಮತ್ತು ಮಸೀದಿಗಳನ್ನೊಳಗೊಂಡು ಹಲವಾರು ಧಾರ್ಮಿಕ ಸಂಸ್ಥೆಗಳನ್ನು ಕಟ್ಟಿದನು.
ಆರ್ಮುರು, ಬೋಧಾನ್, ಬನ್ಸ್ವಾಡಾ, ಕಾಮರೆಡ್ಡಿ ಸೇರಿದಂತೆ ಹಲವಾರು ಹಳ್ಳಿಗಳು ಮತ್ತು ಪಟ್ಟಣಗಳು ನಿಜಾಮಾಬಾದ್ ಜಿಲ್ಲಯಲ್ಲಿವೆ, ಒಂದಾನೊಂದು ಕಾಲದಲ್ಲಿ ಏಷ್ಯಾದಲ್ಲೇ ಅತೀ ದೊಡ್ಡ ಸಕ್ಕರೆ ಕಾರ್ಖಾನೆಯಾಗಿದ್ದ ನಿಜಾಮ್ ಸಕ್ಕರೆ ಕಾರ್ಖಾನೆ ಇದೇ ಜಿಲ್ಲೆಯ ಬೋಧಾನ್ ಪಟ್ಟಣದಲ್ಲಿದೆ.
ಹಲವಾರು ಸಂಸ್ಕೃತಿಗಳ ಸಮ್ಮಿಲನ
ನಿಜಾಮಾಬಾದ್ ತನ್ನಲ್ಲಿರುವ ಹಲವಾರು ಸಂಸ್ಕೃತಿಗಳ ಮಿಶ್ರಣದಿಂದ ಬಹಳ ಪ್ರಸಿದ್ಧವಾಗಿದೆ. ಇಲ್ಲಿನ ಪಟ್ಟಣಗಳಲ್ಲಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಸಿಕ್ಖ್ ಸಮುದಾಯಕ್ಕೆ ಸೇರಿದ ಜನರಿದ್ದಾರೆ. ಎಲ್ಲಾ ಸಮುದಾಯಗಳ ಜನರು ಪರಸ್ಪರ ಹೊಂದಾಣಿಕೆಯಿಂದ ವಾಸಿಸುತ್ತಿದ್ದು ಇಲ್ಲಿಯ ತನಕ ಒಂದೇ ಒಂದು ಕೋಮು ಗಲಭೆ ಆದ ಉದಾಹರಣೆಯಿಲ್ಲ.
ಜಂದಾ ಮತ್ತು ನೀಲಕಂಠೇಶ್ವರ ಉತ್ಸವಗಳು ಇಲ್ಲಿ ಬಹಳ ಹೆಚ್ಚಿನ ಸಂಭ್ರಮದಿಂದ ಆಚರಿಸಲಾಗುತ್ತದೆ. ಜಂದಾ ಉತ್ಸವವನ್ನು ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳುಗಳಲ್ಲಿ ಆಚರಿಸಲಾಗುತ್ತಿದ್ದು ಸುಮಾರು 15 ದಿನಗಳ ಕಾಲ ನಡೆಯುತ್ತದೆ. ನೀಲಕಂಠೇಶ್ವರ ಉತ್ಸವವು ಎರಡು ದಿನಗಳ ಉತ್ಸವವಾಗಿದ್ದು ಜನವರಿ ಮತ್ತು ಫೆಬ್ರವರಿ ತಿಂಗಳಲ್ಲಿ ನಡೆಯುತ್ತದೆ.
ನಿಜಾಮಾಬಾದ್ ಮತ್ತು ಅದರ ಆಕರ್ಷಣೆಗಳು
ನಿಜಾಮಾಬಾದ್ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ನಿಲ್ಲುತ್ತದೆ. ಇದು ಆಂಧ್ರ ಪ್ರದೇಶದ ಅತೀ ಹೆಚ್ಚು ಭೇಟಿ ನೀಡುವ ಸ್ಥಳಗಳಲ್ಲಿ ಒಂದಾಗಿದೆ. ಇದಕ್ಕೆ ಮುಖ್ಯ ಕಾರಣ ಇಲ್ಲಿರುವ ಪ್ರಮುಖ ದೇವಸ್ಥಾನಗಳು. ಅವುಗಳೆಂದರೆ ಹನುಮಂತ ದೇವಾಲಯ, ನೀಲಕಂಠೇಶ್ವರ ದೇವಸ್ಥಾನ, ಖಿಲ್ಲಾ ರಾಮಲಾಯನ ದೇವಾಲಯ, ಶ್ರೀ ರಘುನಾಥ ದೇವಸ್ಥಾನ, ಶ್ರೀ ಲಕ್ಷ್ಮೀ ನಾರಾಯಣ ದೇವಸ್ಥಾನ ಮತ್ತು ಸರಸ್ವತಿ ದೇವಾಲಯ (ಬಸ್ರಾದ ಬಳಿ).
ಈ ದೇವಾಲಯಗಳ ಹೊರತಾಗಿಯೂ ಇಲ್ಲಿ ಹಲವು ಪ್ರಮುಖ ತಾಣಗಳಿವೆ. ಉದಾಹರಣೆಗೆ ಇತಿಹಾಸಾಸಕ್ತರು ಇಲ್ಲಿನ ಪುರಾತತ್ವ ಮತ್ತು ಪಾರಂಪರಿಕ ನಿಜಾಮಾಬಾದ್ ವಸ್ತುಸಂಗ್ರಹಾಲಯವನ್ನು ನೋಡದೇ ಇರಲಾರರು. ಇಲ್ಲಿ ಇತಿಹಾಸಕ್ಕೆ ಸಂಬಂಧಿಸಿದ ಹಲವು ಪ್ರಮುಖ ಆಕರ್ಷಣೆಗಳಿವೆ. ಸಂಪೂರ್ಣ ನಶಿಸುವ ಅಂಚಿನಲ್ಲಿರುವ ದೋಮಕೊಂಡ ಕೋಟೆ ಇಲ್ಲಿನ ಮತ್ತೊಂದು ಆಕರ್ಷಣೆ. ಇದು ನಿಜಾಮಾಬಾದ್ ನ ಸಂಪದ್ಭರಿತ ಇತಿಹಾಸವನ್ನು ನೆನಪಿಸುವ ಕಾರಣ ಇದೊಂದು ನೋಡಲೇ ಬೇಕಾದ ಸ್ಥಳಗಳಾಗಿದೆ. ನಿಜಾಮಾಬಾದ್ ನಗರಕ್ಕೆ ಹತ್ತಿರದಲ್ಲೇ ಇರುವ ಇನ್ನೊಂದು ಕೋಟೆ ನಿಜಾಮಾಬಾದ್ ಕೋಟೆ. ಇದು ಪ್ರವಾಸಿಗಳು ಮತ್ತು ರಜಾ ದಿನಗಳನ್ನು ಸವಿಯಲು ಬರುವವರ ಫೇವರಿಟ್ ತಾಣ. ಕೆಂಟು ಮಸೀದಿ ನಗರದಲ್ಲಿರುವ ಪ್ರಸಿದ್ಧ ಧಾರ್ಮಿಕ ಕಟ್ಟಡ. ಇಲ್ಲಿ ಧರ್ಮದ ಆಧಾರವಿಲ್ಲದೆ ಹಲವಾರು ಮಂದಿ ನಿರಂತರವಾಗಿ ಭೇಟಿ ನೀಡುತ್ತಾರೆ.
ಸಮರ್ಪಕ ಸಾರಿಗೆ ವ್ಯವಸ್ಥೆ
ನಿಜಾಮಾಬಾದ್ ಒಂದು ಪ್ರಮುಖ ಪ್ರವಾಸಿ ತಾಣ. ಇಲ್ಲಿಗೆ ನವೆಂಬರ್ ನಿಂದ ಫೆಬ್ರವರಿ ತನಕ ಭೇಟಿ ನೀಡುವುದು ಬಹಳ ಸೊಗಸಾಗಿರುತ್ತದೆ. ಈ ಅವಧಿಯಲ್ಲಿ ಹವಾಮಾನ ಬಹಳ ಚೆನ್ನಾಗಿದ್ದು ಹೆಚ್ಚು ಬಿಸಿ ಇರುವುದಿಲ್ಲ. ನಿಜಾಮಾಬಾದ್ ಸಮಶೀತೋಷ್ಣ ವಲಯದಲ್ಲಿರುವುದರಿಂದ ಇಲ್ಲಿ ಬೇಸಿಗೆ ಬಹಳ ಬಿಸಿಯಾಗಿರುತ್ತದೆ. ಮೇ ಯಿಂದ ಜೂನ ವರೆಗೆ ಬಹಳ ಬಿಸಿಯಾದ ವಾತಾವರಣ ಇರುತ್ತದೆ. ಇಲ್ಲಿ ಮಳೆಯ ಪ್ರಮಾಣ ಸಾಧಾರಣವಾಗಿದ್ದು ತೇವಾಂಶ ಹೆಚ್ಚಾಗಿರುತ್ತದೆ ಹಾಗೂ ಇದರಿಂದ ಪ್ರವಾಸ ಸ್ವಲ್ಪ ಕಷ್ಟಸಾಧ್ಯವೆನಿಸುತ್ತದೆ.
ಯಾವಾಗ ಈ ನಗರಕ್ಕೆ ಭೇಟಿ ನೀಡಬೇಕೆಂಬುದನ್ನು ಸರಿಯಾಗಿ ಯೋಚಿಸಿ ನಿರ್ಧರಿಸಿ. ನಿಜಾಮಾಬಾದ್ ನಗರಕ್ಕೆ ಸಮರ್ಪಕವಾದ ಸಂಪರ್ಕ ಸೌಲಭ್ಯಗಳಿವೆ. ರೈಲು ಮತ್ತು ರಸ್ತೆ ಮಾರ್ಗಗಳೆರಡೂ ಈ ನಗರವನ್ನು ಸಂಪರ್ಕಿಸುತ್ತದೆ. ರಾಜ್ಯ ಸಾರಿಗೆ ಸಂಸ್ಥೆಯ ಬಸ್ಸುಗಳು ನಿಜಾಮಾಬಾದ್ ನಗರದಿಂದ ಸಾಮಾನ್ಯವಾಗಿ ಎಲ್ಲಾ ನಗರಗಳನ್ನು ಸಂಪರ್ಕಿಸುತ್ತವೆ. ಹೈದರಾಬಾದ್ ಮತ್ತು ಮುಂಬಯಿ ಯಿಂದ ನಿಜಾಮಾಬಾದ್ ಗೆ ಹೋಗುವವರಿಗೆ ರಸ್ತೆಗಳ ಬಗ್ಗೆ ಯಾವುದೇ ಭಯ ಬೇಡ. ಇಲ್ಲಿನ ರೈಲ್ವೆ ನಿಲ್ದಾಣದಿಂದ ಹೈದರಾಬಾದ್, ಬೆಂಗಳೂರು, ಮುಂಬಯಿ, ದೆಹಲಿ, ಚೆನ್ನೈ ಸೇರಿದಂತೆ ಎಲ್ಲಾ ಪ್ರಮುಖ ನಗರಗಳಿಗೂ ನೇರವಾದ ರೈಲ್ವೆ ಸಂಪರ್ಕವೂ ಇದೆ. ಇಲ್ಲಿಗೆ ಸಮೀಪದಲ್ಲಿರುವ ವಿಮಾನ ನಿಲ್ದಾಣವೆಂದರೆ ಹೈದರಾಬಾದ್ ವಿಮಾನ್ ನಿಲ್ದಾಣ ಇದು ಸುಮಾರು 200 ಕಿ.ಮೀ ದೂರದಲ್ಲಿದೆ. ವಿಮಾನ ನಿಲ್ದಾಣಕ್ಕೆ ತಲುಪಲು ಕ್ಯಾಬ್ ವ್ಯವಸ್ಥೆಯೂ ಸಾಕಷ್ಟಿದೆ.