ಆಂಧ್ರಪ್ರದೇಶ ರಾಜ್ಯದ ನೆಲ್ಲೂರಿನಲ್ಲಿ ಶ್ರೀ ರಂಗನಾಥಸ್ವಾಮಿ ದೇವಾಲಯವಿದೆ. ವಿಷ್ಣುವಿನ ದೇವಸ್ಥಾನ ಇದಾಗಿದೆ. ಇಲ್ಲಿ ವಿಷ್ಣು ರಂಗನಾಥನ ರೂಪದಲ್ಲಿ ಪ್ರತಿಷ್ಠಾಪಿತನಾಗಿದ್ದಾನೆ. ಈ ದೇವಾಲಯವು ತಲಪಗಿರಿ ರಂಗನಾಥಸ್ವಾಮಿ ದೇವಾಲಯ ಹಾಗೂ ರಂಗನಾಯಕಲು ಎಂಬ ಹೆಸರಿನಿಂದಲೂ ಕರೆಸಿಕೊಳ್ಳುತ್ತದೆ. 12ನೇ ಶತಮಾನದಲ್ಲಿ ಇದು ನಿರ್ಮಾಣಗೊಂಡಿದೆ ಎಂದು ಹೇಳಲಾಗುತ್ತದೆ. ಪೆನ್ನಾ ನದಿ ದಡದಲ್ಲಿ ಇದು ನಿರ್ಮಾಣಗೊಂಡಿದೆ. ಅನೇಕ ಮಹತ್ವದ ಹಿನ್ನೆಲೆ ಹಾಗೂ ಪುರಾಣದ ಕತೆ ಇದಕ್ಕಿದೆ. ಒಂದು ಮಾಹಿತಿ ಪ್ರಕಾರ ಸಾದು ಕಶ್ಯಪ ಮುನಿ ಇಲ್ಲಿ ಪುಂಡರೀಕ ಯಾಗವನ್ನು ಮಾಡಿಸಿದ್ದ ಎನ್ನಲಾಗುತ್ತದೆ.
ದೇವರು ಆ ಯಾಗದ ನಂತರ ಮುನಿಗೆ ಆಶೀರ್ವಾದ ನೀಡಿದ್ದ ಎನ್ನಲಾಗುತ್ತದೆ. ಪಲ್ಲವ ಶೈಲಿಯನ್ನು ಈ ದೇವಾಲಯದ ನಿರ್ಮಾಣದಲ್ಲಿ ಕಾಣಬಹುದು. ಅವರ ವಾಸ್ತುಶಿಲ್ಪ ಮಾದರಿ ಇಲ್ಲಿದೆ. ಪ್ರವಾಸಿಗರನ್ನು ಅತ್ಯಂತ ಸೆಳೆಯುವುದು ಇಲ್ಲಿನ ಗಾಳಿ ಗೋಪುರ. ಅತ್ಯಂತ ಜನಪ್ರಿಯ ಹಾಗೂ ಅತಿ ಸುಲಭವಾಗಿ ದೇವಾಲಯವನ್ನು ಪತ್ತೆಹಚ್ಚಲು ಅನುಕೂಲವಾಗುವ ಗುರುತು 70 ಅಡಿ ಎತ್ತರವಾದ ಗಾಳಿಗೋಪುರ. ಇದು ವಿಂಡ್ ಟವರ್ ಎಂಬ ಶಬ್ಧದ ಅರ್ಥವನ್ನು ನೀಡುತ್ತದೆ. ಗಾಳಿ ಗೋಪುರದ ಮೇಲೆ ಇರುವ 10 ಚಿನ್ನದ ಲೇಪನ ಒಳಗೊಂಡ ಕಲಶಗಳು ಅತ್ಯಾಕರ್ಷಕವಾಗಿವೆ. ನೆಲ್ಲೂರಿನ ಅತ್ಯಂತ ಪ್ರಸಿದ್ಧ ತಾಣ ಇದಾಗಿದೆ. ನೆಲ್ಲೂರಿಗೆ ತಲುಪಿದರೆ ಇಲ್ಲಿ ಬರುವುದು ಕಷ್ಟವಲ್ಲ.