ಮೈಸೂರು ದಕ್ಷಿಣ ಭಾರತದಲ್ಲಿ ತನ್ನ ವೈಭವೋಪೇತ ಮತ್ತು ಸಮೃದ್ಧ ಸನ್ನಿವೇಶಕ್ಕೆ ಪ್ರಸಿದ್ಧವಾಗಿರುವ ಒಂದು ಪ್ರವಾಸಿ ತಾಣವಾಗಿದೆ. ಮೈಸೂರು ನಗರದ ಹಿಂದಿನ ಕಾಲದ ಚೆಲುವು ಮತ್ತು ಉತ್ತಮವಾಗಿ ಪೋಷಿಸಿರುವ ಉದ್ಯಾನವನಗಳು, ಪಾರಂಪರಿಕ ಕಟ್ಟಡಗಳು ಹಾಗೂ ದಾರಿಯುದ್ದಕ್ಕೂ ಬಿದ್ದಿರುವ ಸುಂದರವಾದ ಎಲೆಗಳು ಮರೆಯಲಾರದಂತಹ ನೆನಪುಗಳನ್ನು ಅಲ್ಲಿಗೆ ಭೇಟಿ ನೀಡುವ ಪ್ರವಾಸಿಗರಲ್ಲಿ ತುಂಬುತ್ತದೆ.
ಗಂಧ, ರೋಜಾ ಹೂಗಳ ಸುವಾಸನೆ ಮತ್ತು ವಾತಾವರಣದಲ್ಲಿರುವ ಇತರೆ ಸುಗಂಧಗಳಿಂದ ಮೈಸೂರು ಸುಗಂಧದ ನಗರ ಎಂಬ ಕೀರ್ತಿಗೆ ಪಾತ್ರವಾಗಿದೆ. ಈ ಪಟ್ಟಣವು “ದಂತಗಳ ಪಟ್ಟಣ" ಮತ್ತು “ಅರಮನೆ ನಗರ" ಎಂಬ ಹೆಸರುಗಳಿಂದಲೂ ಪ್ರಸಿದ್ಧಿಯಾಗಿದೆ. ಕೆಲವೊಮ್ಮೆ “ಯೋಗದ ನಗರ"ಎಂದು ಕರೆಯಲ್ಪಡುವ ಮೈಸೂರು ಭಾರತದ ಅತ್ಯಂತ ಪ್ರಖ್ಯಾತಿಯ ಯೋಗ ಕೇಂದ್ರವಾಗಿದೆ. ಮೈಸೂರಿನಲ್ಲಿ ಹೇಳಿಕೊಡಲಾಗುವ ಅಷ್ಟಾಂಗ ಯೋಗ ಕಾರ್ಯಕ್ರಮವು ಭಾರತ ಮತ್ತು ವಿದೇಶದಿಂದ ಅನೇಕ ಉತ್ಸಾಹಿಗಳನ್ನು ಆಕರ್ಷಿಸುತ್ತದೆ.
ದಂತ ಕಥೆಗಳು ಮತ್ತು ಪುರಾಣದಿಂದ
ದೇವಿ ಭಾಗವತದ ಮೂಲದಿಂದ ತಿಳಿದಿರುವುದು ಮೈಸೂರನ್ನು ದುಷ್ಟ ರಕ್ಕಸ ಮಹಿಷಾಸುರನಿಂದ ಆಳಲ್ಪಟ್ಟಿತ್ತು ಮತ್ತು ಆತನ ಆಳ್ವಿಕೆಯ ಕಾರಣ ಈ ಪ್ರದೇಶಕ್ಕೆ ಮಹೀಶ –ಊರು ಎಂಬ ಹೆಸರು ಬಂದಿತು. ಆ ರಕ್ಕಸನನು ಸಂಹರಿಸಿದವಳು ದೇವಿ ಚಾಮುಂಡಿಯಾಗಿದ್ದು ಈ ಪ್ರದೇಶದ ಆರಾಧ್ಯ ದೇವತೆಯಾಗಿ ನಗರದ ಪೂರ್ವ ಭಾಗದ ಚಾಮುಂಡಿ ಬೆಟ್ಟದ ಸಾಲಿನಲ್ಲಿ ನೆಲೆಸಿದ್ದಾಳೆ. ಮಹಿಷ –ಊರು ನಂತರದಲ್ಲಿ ಮಹೀಶೂರು ಎಂದೂ ಇನ್ನೂ ಕೆಲ ಸಮಯದಲ್ಲಿ ಮೈಸೂರು ಎಂತಲೂ ಕನ್ನಡದಲ್ಲಿ ಬದಲಾಗುತ್ತ ಬಂದು ಕೊನೆಗೆ ಮೈಸೂರು ಎಂದು ಪ್ರಶಿದ್ಧಿಯಾಯಿತು.
ಮೈಸೂರು ಇತಿಹಾಸದ ಕೆಲವು ತುಣುಕುಗಳು
ರಾಜ ಅಶೋಕನ ಕಾಲದಿಂದಲೂ ಮೈಸೂರು ಪ್ರಖ್ಯಾತ ಪ್ರದೇಶವಾಗಿ ಪ್ರಸಿದ್ಧಿ ಹೊಂದಿದ್ದು ಕ್ರಿ ಪೂ 245ರ ಪ್ರಾಚೀನ ಸಾಹಿತ್ಯ ಬರಹಗಳಲ್ಲಿ ಇದರ ಉಲ್ಲೇಖವನ್ನು ಕಾಣಬಹುದಾಗಿದೆ. ಮೈಸೂರಿನ ಮಹತ್ವದ ಐತಿಹಾಸಿಕ ದಾಖಲೆಗಳನ್ನು 10ನೇ ಶತಮಾನದಿಂದ ಕಾಣಬಹುದಾಗಿದೆ.
ಈ ದಾಖಲೆಗಳ ಪ್ರಕಾರ, ಮೈಸೂರು 2ನೇ ಶತಮಾನದಲ್ಲಿ 1004ರವರೆಗೂ ಗಂಗಾ ರಾಜವಂಶದ ಆಳ್ವಿಕೆಯಲ್ಲಿತ್ತು. ಅವರ ನಂತರ ಚೋಳರು ಒಂದು ಶತಮಾನಗಳ ಕಾಲ ಈ ಪ್ರದೇಶವನ್ನು ಆಳಿದರು. ಮೈಸೂರು ನಂತರದಲ್ಲಿ ಚಾಲುಕ್ಯರ ಆಕ್ರಮಣಕ್ಕೊಳಗಾಗಿ 10ನೇ ಶತಮಾನದವರೆಗೂ ಅವರ ಆಳ್ವಿಕೆಗೆ ಸಾಕ್ಷಿಯಾಯಿತು. ಚೋಳರು 10ನೇ ಶತಮಾನದಲ್ಲಿ ಮತ್ತೊಮ್ಮೆ ಮೈಸೂರನ್ನು ಆಕ್ರಮಿಸಿದರೂ 12ನೇ ಶತಮಾನದಲ್ಲಿ ಅದು ಹೊಯ್ಸಳರ ಪಾಲಾಯಿತು. ಹೊಯ್ಸಳರು ಮೈಸೂರಿನಲ್ಲಿ ಅನೇಕ ಹೊಸ ದೇವಾಲಯಗಳನ್ನು ನಿರ್ಮಿಸುವ ಜೊತೆಗೆ ಹಳೆಯ ದೇವಾಲಯಗಳ ಜೀರ್ಣೋದ್ಧಾರಕ್ಕೂ ಕೈ ಹಾಕಿದರು.
ವಿಜಯನಗರ ಸಾಮ್ರಾಜ್ಯದ ಕುಟುಂಬಸ್ಥರಾದ ಮೈಸೂರಿನ ಯದು ರಾಜವಂಶ 1399ರಲ್ಲಿ ಮೈಸೂರಿನ ಒಡೆಯರಾದರು. ಯಾದವ ರಾಜ ಮನೆತನದ ಮುಂದಿನ ಪೀಳಿಗೆಯೆನಿಸಿಕೊಂಡ ಯದು ರಾಜವಂಶ ಕಾಲಚಕ್ರದಲ್ಲಿ ಒಡೆಯರ್ ರಾಜ ಮನೆತನವಾಯಿತು. 1584ರಲ್ಲಿ ಬೆಟ್ಟದ ಚಾಮರಾಜ ಒಡೆಯರ್ ಮೈಸೂರಿನ ಅರಮನೆಯನ್ನು ಮರುನಿರ್ಮಿಸಿದರಲ್ಲದೆ ಅದನ್ನು ಪ್ರಧಾನ ಕಚೇರಿಯಾಗಿಸಿದರು. ಅವರು 1610ರಲ್ಲಿ ಮೈಸೂರಿನ ಬದಲು ಶ್ರೀರಂಗಪಟ್ಟಣವನ್ನು ರಾಜಧಾನಿಯಾಗಿ ಮಾಡಿದರು.
ಮೈಸೂರನ್ನು 1761ರಿಂದ 1799ರವರೆಗಿನ ಅವಧಿಯಲ್ಲಿ ಹೈದರ್ ಆಲಿ ಮತ್ತು ಟಿಪ್ಪು ಸುಲ್ತಾನರಿಂದ ಆಳಲ್ಪಟ್ಟಿತು. 1799ರಲ್ಲಿ ಟಿಪ್ಪು ಸುಲ್ತಾನನ ಮರಣದ ನಂತರ ಮೈಸೂರು ಮತ್ತೆ ಒಡೆಯರ ರಾಜಧಾನಿಯಾಯಿತು. ನಾಲ್ವಡಿ ಕೃಷ್ಣ ರಾಜ ಒಡೆಯರ್ (1895 – 1940)ರವರ ಅದ್ಭುತ ಯೋಜನೆಗನುಗುಣವಾಗಿ ಮೈಸೂರು ಅಗಲವಾದ ರಸ್ತೆ, ಕಟ್ಟಡಗಳು ಮತ್ತು ಉದ್ಯಾನವನ ಹಾಗೂ ಕೆರೆಗಳೊಂದಿಗೆ ಅತ್ಯಂತ ಸುಂದರವಾದ ನಗರವಾಗಿ ಮಾರ್ಪಾಡುಗೊಂಡಿತು.
ಸ್ಥಳೀಯ ಸಾಂಸ್ಕೃತಿಕತೆ ಮತ್ತು ಆಕರ್ಷಣೆಗಳು
ಮೈಸೂರಿಗೆ ಭೇಟಿ ನೀಡುವವರನ್ನು ಬಹಳ ಕಾಡುವುದು ಅಲ್ಲಿನ ವೈವಿಧ್ಯಮಯ ಸಂಸ್ಕೃತಿ. ಇದನ್ನು ಅಲ್ಲಿನವರ ಪರಂಪರೆ, ಕಲೆ, ಕರಕುಶಲತೆ, ಭಕ್ಷ್ಯ ಬೋಜನ ಮತ್ತು ಜೀವನ ಶೈಲಿಗಳಲ್ಲೂ ಬಿಂಬಿತವಾಗಿವೆ. ಪ್ರಾಕೃತಿಕವಾಗಿ ವಿಶ್ವಮಾನವ ನಗರವೆನಿಸಿಹ ಮೈಸೂರು ವಿವಿಧ ಧರ್ಮಗಳ ಮತ್ತು ರೀತಿಯ ಜನಸಾಗರವನ್ನು ಹೊಂದಿದೆ.
ಮೈಸೂರು ನಗರದ ಆಡಳಿತಾತ್ಮಕ ಪ್ರಧಾನ ಕಛೇರಿಯಾದ ಮೈಸೂರು ನಗರವು ತನ್ನ ಸಂದರ್ಶಕರಿಗೆ ಆಕರ್ಷಣೆಗಳ ಮಹಾಪೂರವನ್ನೆ ಹೊಂದಿದೆ. ಈ ಆಕರ್ಷಣೆಗಳು ಪಾರಂಪರಿಕ ಕಟ್ಟಡಗಳಿಂದ ಹಿಡಿದು ಪ್ರಾಚೀನ ದೇವಾಲಯಗಳು, ವಸ್ತುಸಂಗ್ರಹಾಲಯ, ಕೆರೆಗಳು ಮತ್ತು ಉದ್ಯಾನವನಗಳನ್ನು ಒಳಗೊಂಡಿವೆ.
ನಗರದ ಒಳಭಾಗದಲ್ಲೇ ನೆಲೆಸಿರುವ ಅರಮನೆಗಳ ಸಂಖ್ಯೆಯ ಕಾರಣ ಮಸಿಊರನ್ನು “ಅರಮನೆ ನಗರ" ಎಂದು ಕರೆಯಲಾಗುತ್ತದೆ. ಮೈಸೂರು ಅರಮನೆ ಅಥವಾ ಅಂಬಾ ಅರಮನೆ ನಗರದ ಅತ್ಯಂತ ಪ್ರಖ್ಯಾತ ಸ್ಥಳವಾಗಿದ್ದು ಇದನ್ನು ಭಾರತದಲ್ಲೇ ಅತಿ ಹೆಚ್ಚು ಭೇಟಿ ನೀಡುವ ಐತಿಹಾಸಿಕ ತಾಣವೆಂದು ಗುರುತಿಸಲಾಗಿದೆ.
ಮೈಸೂರು ಮೃಗಾಲಯ, ಚಾಮುಂಡೇಶ್ವರಿ ದೇವಾಲಯ,ಮಹಾಬಲೇಶ್ವರ ದೇವಾಲಯ, ಸಂತ ಫಿಲೋಮಿನಾರ ಚರ್ಚ್, ಬೃಂದಾವನ ಉದ್ಯಾನವನ, ಜಗನ್ ಮೋಹನ್ ಅರಮನೆ ಕಲಾ ಪ್ರದರ್ಶನಾ ಕೇಂದ್ರ, ಲಲಿತ್ ಮಹಲ್ ಅರಮನೆ, ಜಯಲಕ್ಷ್ಮಿ ವಿಲಾಸ್ ನಿವಾಸ, ರೈಲ್ವೇ ವಸ್ತು ಸಂಗ್ರಹಾಲಯ, ಕಾರಂಜಿ ಕೆರೆ, ಮತ್ತು ಕುಕ್ಕರಹಳ್ಳಿ ಕೆರೆ ಮೈಸೂರು ನಗರದ ಇತರೆ ಆಕರ್ಷಣೆಗಳಾಗಿವೆ.
ಪ್ರವಾಸಿಗರು ಮೈಸೂರಿನ ಅಕ್ಕಪಕ್ಕದ ಸ್ಥಳಗಳನ್ನು ನೋಡುವ ಸಲುವಾಗಿಯೂ ಮೈಸೂರಿಗೆ ಬರುತ್ತಾರೆ. ಮೈಸೂರಿನ ಆಸುಪಾಸಿನಲ್ಲೆ ಇರುವ ಕೆಲವು ಪ್ರಮುಖ ತಾಣಗಳೆಂದರೆ ಶ್ರೀರಂಗಪಟ್ಟಣ, ನಂಜನಗೂಡು, ಶಿವನ ಸಮುದ್ರ ಜಲಪಾತ, ತಲಕಾಡು, ಮೇಲುಕೋಟೆ, ಸೋಮನಾಥಪುರ, ಹಳೇಬೀಡು, ಬೇಲೂರು, ಬಂಡೀಪುರ ರಾಷ್ಟ್ರೀಯ ಉದ್ಯಾನವನ, ಶ್ರವಣಬೆಳಗೊಳ ಹಾಗೂ ಕೂರ್ಗ್ / ಕೊಡಗು.
ರಾಮನಗರದ ಹೊರಭಾಗದ ಪ್ರದೇಶಗಳು ಬಂಡೆಗಲ್ಲನ್ನು ಏರುವ ಚಟುವಟಿಕೆಗೆ ಅವಕಾಶವನ್ನು ಹೊಂದಿದೆ. ಮೈಸೂರಿನ ಸಮೀಪದ ಇತರೆ ಬಂಡೆಗಲ್ಲನ್ನು ಏರಬಲ್ಲ ಸ್ಥಳಗಳೆಂದರೆ ಸವನದುರ್ಗ, ಕಬ್ಬಾಳದುರ್ಗ, ತುಮಕೂರು, ತುರಹಳ್ಳಿ ಮತ್ತು ಕನಕಪುರ. ಬಾದಾಮಿ ಮತ್ತು ಹಂಪಿಯ ಬಳಿಯಿರುವ ಬಂಡೆಗಳ ರಚನೆಗಳು ಕೂಡ ಮೈಸೂರಿನ ಪ್ರವಾಸಿಗರಲ್ಲಿ ಬಂಡೆಗಲ್ಲನ್ನು ಹತ್ತುವ ಆಸಕ್ತರನ್ನು ಆಕರ್ಷಿಸುತ್ತದೆ.
ಬಿಳಿಗಿರಿರಂಗನ ಪರ್ವತ, ಚಿಕ್ಕ ಮಗಳೂರು, ಹಾಸನ ಮತ್ತು ಕೊಡಗು ಇವು ಚಾರಣ ಪ್ರಿಯರಿಗೆ ಸೂಕ್ತವಾದರೆ ಅಂಗಲಿಂಗ್ ಪ್ರಿಯರು ಮೈಸೂರಿನ ಹೊರಭಾಗದಲ್ಲಿರುವ ಕಾವೇರಿ ಫಿಷಿಂಗ್ ಕ್ಯಾಂಪ್ ಗೆ ಭೇಟಿ ನೀಡುತ್ತಾರೆ. ನಾಗರಹೊಳೆಯ ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನ, ಬಿಆರ್ ಹಿಲ್ಸ್ ಸ್ಯಾಂಚುರಿ, ರಂಗನತಿಟ್ಟು ಪಕ್ಷಿ ವೀಕ್ಷಣಾಲಯ ಪಕ್ಷಿ ಪ್ರಿಯರ ಸ್ವರ್ಗವಾಗಿವೆ.
ಮೈಸೂರು ನಗರವು ತನ್ನ ದಂತ ಕುಶಲಕಾರ್ಯ, ಸಮೃದ್ಧ ರೇಷ್ಮೆ, ಗಂಧದ ಉತ್ಪನ್ನಗಳು ಮತ್ತು ಮರದ ಕೆತ್ತನೆಗಳಿಗೂ ಪ್ರಸಿದ್ಧ. ಹತ್ತು ದಿನಗಳ ಉತ್ಸವವಾದ ಮೈಸೂರು ದಸರಾ ಈ ಭಾಗದ ಅತ್ಯಂತ ಪ್ರಮುಖ ಆಚರಣೆಯಾಗಿದ್ದು ಮೈಸೂರಿನ ಜನರು ಇದನ್ನು ಅತ್ಯಂತ ವೈಭವದಿಂದ ಹಾಗೂ ಸಂತಸದಿಂದ ಆಚರಿಸುತ್ತಾರೆ.
ಸಮುದ್ರ ಮಟ್ಟವನ್ನೂ ಮೀರಿ ಸುಮಾರು 770 ಮೀ ಎತ್ತರದಲ್ಲಿ ದಕ್ಷಿಣ ಕರ್ನಾಟಕದ ಕಾವೇರಿ ಮತ್ತು ಕಬಿನಿ ನದಿಗಳ ಮಧ್ಯದಲ್ಲಿ ನೆಲೆಸಿಹ ಮೈಸೂರು ಪ್ರವಾಸಿಗರಿಗೆ ಸಾದರ್ಣ ಹವಾಮಾನ ವಾತಾವರಣವನ್ನು ಹೊಂದಿದೆ. ಬೆಂಗಳೂರಿನಿಂದ ಸುಮಾರು 140 ಕಿಮೀ ಅಂತರದಲ್ಲಿರುವ ಮೈಸೂರಿಗೆ ರಸ್ತೆ ಮತ್ತು ರೈಲು ಮಾರ್ಗವಾಗಿ ಸುಲಭವಾಗಿ ತಲುಪಬಹುದು. ಮೈಸೂರು ವಿಮಾನ ನಿಲ್ದಾಣವೆನಿಸಿಹ ಮಂಡಕಳ್ಳಿ ವಿಮಾನ ನೆಲೆಯೂ ಖಾಸಗೀ ನಿಲ್ದಾಣವಾಗಿದ್ದು ಭಾರತದ ಅನೇಕ ನಗರಗಳಿಗೆ ನಿತ್ಯ ವಿಮಾನ ಹಾರಾಟವನ್ನು ಹೊಂದಿದೆ.
ತನ್ನ ಮನಮೋಹಕ ರಸ್ತೆಗಳು ಮತ್ತು ವೈಭವದ ಇತಿಹಾಸದಿಂದ ನಿಜಕ್ಕೂ ಮೈಸೂರು ಕರ್ನಾಟಕದ ಸಾಂಸ್ಕೃತಿಕ ರಾಜಧಾನಿಯಾಗಿದೆ.