ಮುದುಮಲೈ ವನ್ಯಜೀವಿಧಾಮವು ಮೂರು ರಾಜ್ಯಗಳ ಗಡಿಯು ಸಂಧಿಸುವ ತಾಣದಲ್ಲಿ ನೆಲೆಗೊಂಡಿರುವ ನೀಲಗಿರಿ ಪರ್ವತಳ ದಟ್ಟ ಕಾಡುಗಳಲ್ಲಿ ನೆಲೆಸಿದೆ. ಮುದುಮಲೈ ವನ್ಯಜೀವಿಧಾಮವು ದಕ್ಷಿಣ ಭಾರತದಲ್ಲಿ ಮಾತ್ರವಲ್ಲದೆ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅತ್ಯಂತ ಶ್ರೀಮಂತ ವನ್ಯ ಸಂಪತ್ತನ್ನು ಹೊಂದಿರುವ ವನ್ಯಧಾಮವಾಗಿ ಗುರುತಿಸಿಕೊಂಡಿದೆ. 1940 ರಲ್ಲಿ ಸ್ಥಾಪನೆಗೊಂಡ ಈ ವನ್ಯಧಾಮವು ಅತ್ಯಂತ ನಾಜೂಕಾಗಿ ಮತ್ತು ವ್ಯವಸ್ಥಿತವಾಗಿ ಕಾಡು ಪ್ರಾಣಿಗಳನ್ನು ಸಂರಕ್ಷಿಸುತ್ತಿರುವ ವನ್ಯಧಾಮವಾಗಿ ದೇಶದಲ್ಲಿಯೇ ಹೆಸರುವಾಸಿಯಾಗಿದೆ. ಈ ವನ್ಯಧಾಮವು ದಕ್ಷಿಣ ಭಾರತದ ಪ್ರಸಿದ್ಧ ಆಕರ್ಷಣೆಯಾಗಿದ್ದು, ಇಲ್ಲಿಗೆ ಭೇಟಿಕೊಡುವವರಿಗೆ ತನ್ನಲ್ಲಿರುವ ಶ್ರೀಮಂತ ಪ್ರಾಣಿ ಮತ್ತು ಸಸ್ಯ ಸಂಪತ್ತಿನ ಪರಿಚಯವನ್ನು ಮಾಡಿಕೊಡುತ್ತದೆ.
ಕಾಡಿಗೆ ಸ್ವಾಗತ ಸುಸ್ವಾಗತ!
ಅರಣ್ಯ ಇಲಾಖೆಯು ಮುದುಮಲೈ ವನ್ಯಧಾಮದಲ್ಲಿ ಜಂಗಲ್ ಸಫಾರಿಯನ್ನು ಆಯೋಜಿಸುತ್ತಾರೆ. ಇದು ನಿಜಕ್ಕು ಬೆಲೆಕಟ್ಟಲಾಗದಂತಹ ಸಫಾರಿಯಾಗಿರುತ್ತದೆ. ಈ ಸಫಾರಿಯಲ್ಲಿ ನೀವು ಮುದುಮಲೈನ ವಿಪುಲ ವನಸಂಪತ್ತಿನ ಪರಿಚಯವನ್ನು ಪಡೆದುಕೊಳ್ಳುತ್ತೀರಷ್ಟೇ ಅಲ್ಲದೆ ನಿಮ್ಮ ಜೀವನದಲ್ಲಿ ಎಂದೆಂದಿಗು ಮರೆಯದ ಅನುಭವವನ್ನು ನಿಮ್ಮದಾಗಿಸಿಕೊಳ್ಳುತ್ತೀರಿ.
ಈ ವನ್ಯಧಾಮದಲ್ಲಿ ಜೌಗು ಪ್ರದೇಶದ ಎಲೆ ಉದುರುವ ದಟ್ಟ ಕಾಡುಗಳನ್ನು, ದಕ್ಷಿಣದ ಉಷ್ಣವಲಯದ ಮುಳ್ಳು ಕಾಡುಗಳನ್ನು ಮತ್ತು ಉಷ್ಣವಲಯದ ದಟ್ಟವಾದ ಒಣ ಕಾಡುಗಳನ್ನು ಕಾಣಬಹುದು. ಪಕ್ಷಿ ವೀಕ್ಷಕರಿಗೆ ಇಲ್ಲಿ ನೂರಾರು ಪಕ್ಷಿಗಳನ್ನು ನೋಡುವ ಅವಕಾಶ ದೊರೆಯುತ್ತದೆ. ಇದರ ಜೊತೆಗೆ ಇಲ್ಲಿ ಉಡಗಳು, ಕತ್ತೆ ಕಿರುಬಗಳು, ನರಿಗಳು, ಚಿರತೆ ಮತ್ತು ಜಿಂಕೆಗಳು ಶಾಂತಿಯುತ ಜೀವನ ನಡೆಸುತ್ತಿರುವುದನ್ನು ನಾವು ಇಲ್ಲಿ ಕಾಣಬಹುದು.
ಮುದುಮಲೈ ಹುಲಿಗಳ ಆವಾಸ ಸ್ಥಾನವಾಗಿರುವುದಷ್ಟೇ ಅಲ್ಲದೆ, ಭಾರತದಲ್ಲಿಯೇ ಅತಿ ಹೆಚ್ಚು ಹುಲಿಗಳ ಸಾಂದ್ರತೆಯನ್ನು ಹೊಂದಿರುವ ವನ್ಯಧಾಮವಾಗಿ ಗುರುತಿಸಿಕೊಂಡಿದೆ. ಇದರ ಜೊತೆಗೆ ಇಲ್ಲಿ ಏಳು ನೂರು ಭಾರತೀಯ ಆನೆಗಳು ಓಡಾಡಿಕೊಂಡಿವೆ. ತನ್ನಲ್ಲಿರುವ ಅಳಿವಿನಂಚಿನಲ್ಲಿರುವ ಪ್ರಾಣಿ ಮತ್ತು ಪಕ್ಷಿ ಪ್ರಭೇದಗಳ ಸಲುವಾಗಿ ಮುದುಮಲೈ ದೇಶದ ಜೈವಿಕ - ವೈವಿಧ್ಯದ ಉತ್ತಮ ಸಂರಕ್ಷಣಾ ತಾಣವಾಗಿದೆ. ಈ ವನ್ಯಧಾಮದಲ್ಲಿ ಪ್ರಾಣಿಗಳಷ್ಟೇ ಅಲ್ಲದೆ ಕಾಡಿನಲ್ಲಿ ಬೆಳೆಯುವ ಕಾಡು ಭತ್ತ, ಅರಿಶಿಣ, ಕಾಡು ಶುಂಠಿ, ದಾಲ್ಚಿನ್ನಿ, ಮಾವು, ಸೀಬೆಹಣ್ಣು ಮತ್ತು ಮೆಣಸುಗಳು ಪ್ರಾಕೃತಿಕವಾಗಿ ಬೆಳೆಯುತ್ತವೆ.
ಈ ಸಸ್ಯ ಸಂಪತ್ತು ಸಸ್ಯಾಹಾರಿ ಪ್ರಾಣಿಗಳಿಗೆ ಆಹಾರವನ್ನು ಒದಗಿಸುವ ಕೆಲಸವನ್ನು ನಿರ್ವಹಿಸುತ್ತವೆ. ಆ ಕಾರಣದಿಂದಾಗಿ ಈ ಧಾಮವು ಪ್ರಾಕೃತಿಕವಾಗಿ ಬೆಳೆಯುವ ಸಸ್ಯ ತಳಿಗಳನ್ನು ಸಂರಕ್ಷಿಸುವ ತಾಣವಾಗಿ ಸಹ ಗುರುತಿಸಿಕೊಂಡಿದೆ. ಇದರ ಜೊತೆಗೆ ಇಲ್ಲಿ ಬಿದಿರಿನ ಎರಡು ಜಾತಿಯ ಬಗೆಗಳು (ಬಂಬುಸ ಮತ್ತು ಡೆಂಡ್ರೊಕಲಮಸ್ ಸ್ಟ್ರಿಕ್ಟಸ್) ಬೆಳೆಯುತ್ತವೆ. ಇವು ಆನೆ ಮತ್ತು ಕಾಡು ಕೋಣಗಳಿಗೆ ಆಹಾರವನ್ನು ಒದಗಿಸುತ್ತವೆ.
ಮುದುಮಲೈ ಸಮೀಪದಲ್ಲಿ ಹಲವಾರು ಆಕರ್ಷಣೆಗಳು ಇವೆ. ಅವುಗಳಲ್ಲಿ ಪೈಕರ ಕೆರೆ, ಕಲ್ಲಟ್ಟಿ ಜಲಪಾತ, ತೆಪ್ಪಕಾಡು ಆನೆ ಶಿಬಿರ, ಮೋಯರ್ ನದಿ ಮತ್ತು ಪ್ರಾಣಿಗಳನ್ನು ನೋಡುವ ಹಾಗು ಒಡನಾಡ ಬಹುದಾದ ಇನ್ನಿತರ ಅದ್ಭುತ ತಾಣಗಳು ಇವೆ. ಇಲ್ಲಿನ ಅದ್ಭುತವಾದ ವಾತಾವರನ ಮತ್ತು ಉತ್ತಮ ಸಂಪರ್ಕ ವ್ಯವಸ್ಥೆಯು ಇದನ್ನು ಉತ್ತಮ ಪ್ರವಾಸಿ ಕೇಂದ್ರವನ್ನಾಗಿ ಮಾಡಿವೆ. ಮುದುಮಲೈ ತನ್ನ ಅನುಪಮ ಸೌಂದರ್ಯ, ಉತ್ತಮ ಸ್ಥಳಗಳು ಮತ್ತು ಚಾರಣಕ್ಕೆ ಅವಕಾಶ ನೀಡುವ ಪ್ರದೇಶಗಳಿಂದ ಕೂಡಿ ಕುಟುಂಬ ಸಭ್ಯರಿಗೆ, ಸಾಹಸಿಗಳಿಗೆ ಮತ್ತು ಸುಮ್ಮನೆ ಸುತ್ತಾಡುವವರಿಗೆ ಒಂದು ದಿನದ ಪ್ರವಾಸಕ್ಕೆ ಹೇಳಿ ಮಾಡಿಸಿದ ಸ್ಥಳವಾಗಿದೆ.