ಭಾರತದ ಭೂಪಟದಲ್ಲಿ ತೀರವನ್ನು ಗಮನಿಸಿದರೆ ಹಲವೆಡೆ ಸಮುದ್ರ ನೆಲದ ಒಳಭಾಗವನ್ನು ಒಂದು ಚಿಕ್ಕ ಗೆರೆಯಾಕಾರದಲ್ಲಿ ಆಕ್ರಮಿಸಿರುವುದನ್ನು ಕಾಣಬಹುದು. ಈ ಪ್ರದೇಶದಲ್ಲಿ ಸಮುದ್ರದ ಅಲೆಗಳ ತೀವ್ರತೆ ಕಡಿಮೆಯಿದ್ದು ಹಡಗುಗಳಿಗೆ ಲಂಗರು ಹಾಕಲು ಹೇಳಿ ಮಾಡಿಸಿದಂತಹ ನೈಸರ್ಗಿಕ ಬಂದರುಗಳಾಗಿವೆ. ಮುಂಬೈ ನಗರ ಇರುವುದೇ ಇಂತಹ ಒಂದು ಕೊಲ್ಲಿಯಲ್ಲಿ. ಇದೇ ರೀತಿಯ ಕೊಲ್ಲಿಯೊಂದು ಗುಜರಾತ್ ರಾಜ್ಯದಲ್ಲಿಯೂ ಇದೆ. ಮುಂಬೈ ಪ್ರವರ್ಧಮಾನಕ್ಕೆ ಬರುವ ಮುನ್ನ ಈ ಕೊಲ್ಲಿಯ ತೀರದಲ್ಲಿರುವ ಮಾಂಡ್ವಿ ಭಾರತದ ಪ್ರಮುಖ ನೈಸರ್ಗಿಕ ಬಂದರುಗಟ್ಟೆಯಾಗಿತ್ತು.
ಕಾಲಕ್ರಮೇಣ ಗುಜರಾತಿನ ಸೂರತ್ ಹಾಗೂ ಮುಂಬೈ ನಗರಗಳು ವಾಣಿಜ್ಯ ವಹಿವಾಟುಗಳನ್ನು ಹೆಚ್ಚಿಸಿಕೊಂಡಿದ್ದರಿಂದ ಪ್ರಾಮುಖ್ಯತೆಯಲ್ಲಿ ನಿಧಾನವಾಗಿ ಮಾಂಡ್ವಿ ನಿಧಾನಕ್ಕೆ ಹಿಂದೆ ಸರಿಯಿತು. ಯಾವುದೇ ಕೊಲ್ಲಿಯಾದರೂ ಹಡಗು ತೀರಕ್ಕೇ ತಾಗಿ ಬಂದು ನಿಲ್ಲಲು ಕಟ್ಟೆಯೊಂದರ ಅಗತ್ಯವಿದೆ. ಅಂತೆಯೇ ಈ ಕೊಲ್ಲಿಯಲ್ಲಿ ಬಂದರುಕಟ್ಟೆಯೊಂದನ್ನು ನಿರ್ಮಿಸಿ ಮಾಂಡ್ವಿ ನಗರವನ್ನು 1574ರಲ್ಲಿ ಅಂದಿನ ಕಛ್ ರಾಜ್ಯದ ರಾಜರಾದ ಖೆಂಗರ್ಜಿಯವರು ಸ್ಥಾಪಿಸಿದರು. ಕೂಡಲೇ ಪ್ರಾರಂಭವಾದ ವಾಣಿಜ್ಯ ವಹಿವಾಟುಗಳು ಮಾಂಡ್ವಿ ನಗರಕ್ಕೆ ಹೆಚ್ಚಿನ ಮಹತ್ವವನ್ನೂ ಹೆಸರನ್ನೂ ತಂದುಕೊಟ್ಟವು. ಪರಿಣಾಮವಾಗಿ ಹೆಚ್ಚಿನ ಜನರು ಮಾಂಡ್ವಿಯಲ್ಲಿ ನೆಲೆಸಿ ತಮ್ಮ ತಮ್ಮ ಸಂಸ್ಕೃತಿಗಳನ್ನು ಬೆಳೆಸಿದರು, ಹಲವು ಪ್ರಮುಖ ಕಟ್ಟಡಗಳನ್ನೂ ಸ್ಮಾರಕಗಳನ್ನೂ ಕಟ್ಟಿದರು.
ಇವುಗಳಲ್ಲಿ ಜಮಾ ಮಸ್ಜಿದ್, ಲಕ್ಷ್ಮೀನಾರಾಯಣ ದೇವಾಲಯ, ಕಾಜಿವಲಿ ಮಸೀದಿ ಮತ್ತು ರಾಮೇಶ್ವರ ದೇವಾಸ್ಥಾನಗಳು ಪ್ರಮುಖವಾಗಿವೆ. ಮಾಂಡ್ವಿ ರೇವುಪಟ್ಟಣ ತನ್ನ ವಹಿವಾಟಿನ ಉತ್ತುಂಗದಲ್ಲಿದ್ದ ಕಾಲದಲ್ಲಿ ಸುಮಾರು ನಾನೂರಕ್ಕೂ ಹೆಚ್ಚು ಹಡಗುಗಳಿದ್ದು ಭಾರತದ ತೀರಗಳಿಗೆ ಮಾತ್ರವಲ್ಲದೇ ದೂರದ ಇಂಗ್ಲೆಂಡ್ ಗೂ ಹೋಗಿ ಬರುತ್ತಿದ್ದವು. ಆಗ ಶೇಖರವಾದ ಸಂಪತ್ತನ್ನು ವೈರಿಗಳಿಂದ ರಕ್ಷಿಸಿಕೊಳ್ಳಲು ನಗರದ ಸುತ್ತ ಎಂಟು ಮೀಟರ್ ಎತ್ತರದ ಕೋಟೆಯೊಂದನ್ನು ಕಟ್ಟಲಾಯ್ತು.
ಈ ಕೋಟೆಯಲ್ಲಿ ಹಲವು ಮಹಾದ್ವಾರಗಳೂ ಮತ್ತು ಸುಮಾರು ಇಪ್ಪತ್ತೈದು ಬುರುಜುಗಳೂ ಇದ್ದವು. ಕಾಲನ ಹೊಡೆತಕ್ಕೆ ಇಂದು ಈ ಕೋಟೆ ಸರಿಸುಮಾರು ಜರ್ಝರಿತವಾಗಿ, ಜೀರ್ಣವಾಗಿ ಮಣ್ಣಾಗಿ ಹೋಗಿದೆ. ಆದರೆ ನೈಋತ್ಯ ಭಾಗದಲ್ಲಿರುವ ದೊಡ್ಡ ಬುರುಜು ಈಗಲೂ ಸುಸ್ಥಿತಿಯಲ್ಲಿದ್ದು ದೀಪಸ್ಥಂಭವಾಗಿ ಕಾರ್ಯನಿರ್ವಹಿಸುತ್ತಿದೆ. ವಹಿವಾಟು ಹೆಚ್ಚಿದಂತೆ ಚಿಕ್ಕ ಹಡಗುಗಳಲ್ಲಿ ಬೇಡಿಕೆಯನ್ನು ಪೂರೈಸುವುದು ಅಸಾಧ್ಯವಾದುದರಿಂದ ದೊಡ್ಡ ಹಡಗುಗಳಲ್ಲಿ ವಸ್ತುಗಳನ್ನು ಕಳುಹಿಸಲು ಪ್ರಾರಂಭವಾಯಿತು.
ಆದರೆ ಮಾಂಡ್ವಿಯ ಕೊಲ್ಲಿ ಈ ದೊಡ್ಡ ಹಡಗುಗಳಿಗೆ ಲಂಗರು ಹಾಕಲು ಆಗುವಷ್ಟು ಸಾಮರ್ಥ್ಯ ಹೊಂದದಿರದ ಕಾರಣ ಈ ದೊಡ್ಡ ಹಡಗುಗಳು ಮುಂಬೈ, ಸೂರತ್ ರೇವುಗಳ ದಾರಿ ಹಿಡಿದವು. ಆಗಲೇ ಮಾಂಡ್ವಿಯ ಪ್ರಾಮುಖ್ಯತೆ ಕುಂದುತ್ತಾ ಹೋಯಿತು. ರುಕ್ಮಾವತಿ ನದಿ ಈ ಕೊಲ್ಲಿಯ ಮೂಲಕವೇ ಸಮುದ್ರ ಸೇರುವ ಸ್ಥಳದಲ್ಲಿ ಅಂದಿನ ಕಾಲದಿಂದಲೂ ಹಡಗುಗಳನ್ನು ನಿರ್ಮಿಸುವ ಘಟಕವೊಂದಿದೆ.
ಅಚ್ಚರಿಯೆಂದರೆ ಇಂದಿಗೂ ಕೇವಲ ಕುಶಲಕರ್ಮಿಗಳ ಕೈಗಳಿಂದ ಚಿಕ್ಕ ಹಾಗೂ ಮಧ್ಯಮ ಗಾತ್ರದ ಹಡಗುಗಳು ತಯಾರಾಗುತ್ತಿವೆ. ಜನಾಂಗ ಸ್ಥಿತಿ ಅಧ್ಯಯನದ ಪ್ರಕಾರ ಮಾಂಡ್ವಿ ನಗರದಲ್ಲಿ ಪ್ರಮುಖವಾಗಿ ಗುಜರಾತ್ ನ ಕಛ್ ಸಂಸ್ಕೃತಿ ಬೀಡುಬಿಟ್ಟಿದೆ. ಇಲ್ಲಿ ನೆಲೆಸಿರುವವರಲ್ಲಿ ವರ್ತಕರು ಹಾಗೂ ಸಾಗರವನ್ನೇ ಅವಲಂಬಿಸಿರುವ ಜನರೇ ಪ್ರಮುಖರಾಗಿದ್ದಾರೆ.
ಸಂದರ್ಶನಕ್ಕೆಸೂಕ್ತ ಕಾಲ:
ಬೇಸಿಗೆಯಲ್ಲಿ ಹೆಚ್ಚಿನ ಬಿಸಿಲು ಹಾಗೂ ಮಳೆಗಾಲದಲ್ಲಿ ಹೆಚ್ಚಿನ ಮಳೆ ಇರುವ ಕಾರಣ ಅಕ್ಟೋಬರ್ ನಿಂದ ಫೆಬ್ರವರಿ ಭೇಟಿಗೆ ಸೂಕ್ತಕಾಲವಾಗಿದೆ.