ವಶಿಷ್ಟ ಎಂಬ ಹಳ್ಳಿ ಇನ್ನೊಂದು ಆಕರ್ಷಣೆಯ ಕೇಂದ್ರ. ಕಲ್ಲಿನಿಂದಲೇ ನಿರ್ಮಿಸಿದ ದೇವಾಲಯದಿಂದ ಇದು ಪ್ರಸಿದ್ಧಿ ಹೊಂದಿದೆ. ಇಲ್ಲಿ ನೈಸರ್ಗಿಕ ಝರಿ ಹರಿದಿದೆ. ಮನಾಲಿಯಿಂದ ಈ ನಿಸರ್ಗದತ್ತ ಸೌಂದರ್ಯ ಹೊತ್ತ ದೇವಾಲಯ ಇರುವುದು ಆರು ಕಿ.ಮೀ. ದೂರದಲ್ಲಿ. ರಾವಿ ನದಿಯ ದಡದಲ್ಲಿ ಈ ದೇವಾಲಯವಿದೆ. ಇಲ್ಲಿ ಉದ್ಭವಿಸಿರುವ ನೈಸರ್ಗಿಕ ಝರಿಯ ನೀರು ಔಷಧಿಯುಕ್ತವಾಗಿದೆ ಎಂದು ಹೇಳಲಾಗುತ್ತದೆ. ಇದರಿಂದ ಚರ್ಮರೋಗದಂತಹ ಸಮಸ್ಯೆ ನಿವಾರಣೆಯಾಗುತ್ತದೆ ಎಂದು ಸ್ಥಳೀಯರು ನಂಬಿದ್ದಾರೆ. ಇಲ್ಲಿನ ಸ್ಥಳೀಯ ಪುರಾಣದ ಪ್ರಕಾರ, ದೇವ ಶ್ರೀರಾಮಚಂದ್ರನ ಸಹೋದರ ಲಕ್ಷ್ಮಣನು ವಶಿಷ್ಟದಲ್ಲಿ ಬಿಸಿನೀರ ಬುಗ್ಗೆಯನ್ನು ನಿರ್ಮಿಸಿದ್ದ. ಇಲ್ಲೊಂದು ಕಾಲ ಗುರು ಹಾಗೂ ಶ್ರೀರಾಮ ಮಂದಿರವೂ ಕೂಡ ಇದೆ. ಇಲ್ಲಿ ಮಹಿಳೆಯರು ಹಾಗು ಪುರುಷರಿಗೆ ಪ್ರತ್ಯೇಕವಾಗಿ ಸ್ನಾನ ಮಾಡುವ ಸೌಲಭ್ಯವನ್ನು ಒದಗಿಸಲಾಗಿದೆ. ನಗರ ಕೇಂದ್ರದಿಂದ, ಈ ಬಿಸಿನೀರಿನ ಬುಗ್ಗೆಯಿರುವ ಸ್ಥಳವನ್ನು ತಲುಪಲು ಹತ್ತು ನಿಮಿಷ ಕಾಲ್ನಡಿಗೆಯಲ್ಲಿ ಸಾಗಿದರೆ ಸಾಕು. ದೇವಾಲಯವು ಕಪ್ಪು ಶಿಲೆಯಿಂದ ನಿರ್ಮಾಣಗೊಂಡಿದೆ. ಇಲ್ಲಿರುವ ಋಷಿ ವಿಗ್ರಹ ಹುಲಿ ಚರ್ಮವನ್ನು ಹೊದ್ದು ನಿಂತಿದೆ. ಇದು ಝರಿಗೆ ಅತ್ಯಂತ ಸಮೀಪದಲ್ಲೇ ಇದೆ.
ವಿಷ್ಣುವಿನ ಏಳನೆ ಅವತಾರ ಎಂದು ಕರೆಸಿಕೊಳ್ಳುವ ಕಾಲ ಗುರುವಿಗೆ ಈ ಪ್ರದೇಶವನ್ನು ಮೀಸಲಿಡಲಾಗಿದೆ. ಇದೆ ಹಳ್ಳಿಯಲ್ಲಿ ಇದಲ್ಲದೆ ವಿಷ್ಣು ಹಾಗು ರಾಮನ ದೇವಾಲಯಗಳೂ ಇವೆ. ರಾಮನ ದೇವಾಲಯದಲ್ಲಿ ರಾಮ, ಸೀತೆ ಹಾಗೂ ಲಕ್ಷ್ಮಣ ಒಟ್ಟಾಗಿ ನಿಂತಿರುವ ವಿಗ್ರಹ ಪೂಜಿಸಲ್ಪಡುತ್ತಿದೆ.
ಜನಪ್ರಿಯ ವಾಗ್ಮಿಗಳ ಪ್ರಕಾರ, ಹಿಂದೂ ಧರ್ಮದ ಸಪ್ತರ್ಷಿಗಳಲ್ಲಿ ಒಬ್ಬರಾದ ಋಷಿ ವಸಿಷ್ಟರು ಒಮ್ಮೆ, ವಿಶ್ವಾಮಿತ್ರರು ತಮ್ಮ ಮಕ್ಕಳನ್ನು ಸಾಯಿಸಿದ್ದರಿಂದ ಬೇಸರಗೊಂಡು ಆತ್ಮಹತ್ಯೆ ಮಾಡಿಕೊಳ್ಳಲು ನದಿಯಲ್ಲಿ ಧುಮುಕಿದರು. ಆದರೆ ಆಶ್ಚರ್ಯವೆಂಬಂತೆ ಆ ನದಿಯು ಇವರನ್ನು ಈ ಹಳ್ಳಿಗೆ ಕರೆತಂದಿತು. ಮುಂದೆ ವಸಿಷ್ಟರು ಇಲ್ಲಿಯೇ ತಮ್ಮ ಹೊಸ ಜೀವನ ಕಟ್ಟಿಕೊಂಡರು. ಋಷಿಯನ್ನು ಈ ರೀತಿಯಾಗಿ ಕರೆತಂದ ನದಿಯ ಹೆಸರು ವಿಪಾಷಾ ಅಂದರೆ 'ಮೋಹದ ಪಾಷದಿಂದ ಬಿಡುಗಡೆ'. ಇದೇ ನದಿ ಇಂದು ಬಿಯಸ್ ನದಿಯಾಗಿ ಜನಜನಿತವಾಗಿದೆ.