ಅರ್ಜುನನ ತಪಸ್ಸು ಎಂಬುದು ಒಂದು ಬೃಹತ್ತಾದ ಏಕಶಿಲಾ ಉಬ್ಬು ವಿಗ್ರಹವಾಗಿದೆ. ಬಿಸಿಲು- ಮಳೆಗೆ ಮೈ ಚಾಚಿಕೊಂಡಿರುವ 43 ಅಡಿಗಳಷ್ಟು ಉದ್ದದ ಈ ವಿಗ್ರಹವನ್ನು ಸುಮಾರು 7ನೇ ಶತಮಾನದ ಮಧ್ಯ ಭಾಗದಲ್ಲಿ ನಿರ್ಮಿಸಲಾಗಿದೆ. ಇದನ್ನು ಗಂಗೆಗಾಗಿ ತಪಸ್ಸು ಮಾಡಿದ ಸ್ಥಳವೆಂದು ಸಹ ಕರೆಯಲಾಗುತ್ತದೆ.
ಈ ಸ್ಥಳದ ಹೆಸರನ್ನು ಎರಡು ದಂತ ಕತೆಗಳ ಮೂಲಕ ತಿಳಿಯಬಹುದು. ಈ ಎರಡು ದಂತ ಕತೆಗಳು ಒಂದಕ್ಕೊಂದು ಪೈಪೋಟಿ ನೀಡುತ್ತ ಇಲ್ಲಿ ಪ್ರಚಲಿತದಲ್ಲಿವೆ. ಒಂದು ದಂತ ಕತೆಯು ಪಾಂಡವರಲ್ಲಿ ಒಬ್ಬನಾದ ಅರ್ಜುನನು ತನ್ನ ಶತ್ರುಗಳನ್ನು ಸದೆ ಬಡಿಯುವ ಸಲುವಾಗಿ ಶಿವನಿಂದ ಪಾಶುಪತಾಸ್ತ್ರವನ್ನು ಪಡೆಯಲು ಇಲ್ಲಿ ಕಠಿಣ ತಪಸ್ಸು ಮಾಡಿದ ಎಂದು ಸಾರುತ್ತದೆ. ಮತ್ತೊಂದು ರಾಜ ಭಗೀರಥನು ತನ್ನ ಪೂರ್ವಿಕರ ಆತ್ಮವನ್ನು ಪರಿಶುದ್ಧಗೊಳಿಸುವ ಸಲುವಾಗಿ ದೇವಲೋಕದಿಂದ ಗಂಗೆಯನ್ನು ಭೂಮಿಗೆ ತರಲು ಇಲ್ಲಿ ತಪಸ್ಸು ಮಾಡಿದನೆಂದು ತಿಳಿಸುತ್ತದೆ.
ಇಲ್ಲಿ ಇರುವ ಕೆತ್ತನೆಗಳು ಶಿಲ್ಪಿಯ ಕಲಾ ನೈಪುಣ್ಯತೆಯನ್ನು ಸಾರಿ ಸಾರಿ ಹೇಳುತ್ತಿವೆ. ಇಲ್ಲಿ ಸುಮಾರು 100ಕ್ಕಿಂತ ಹೆಚ್ಚಾದ ದೇವಾನುದೇವತೆಗಳು, ಗಂಧರ್ವರು ಮತ್ತು ವನ್ಯ ಮೃಗಗಳ ಕೆತ್ತನೆಗಳನ್ನು ನಾವು ನೋಡಬಹುದು. ನಂಬಿಕೆಗಳ ಪ್ರಕಾರ ಇಲ್ಲಿ ಎರಡು ಬಂಡೆಗಳ ನಡುವೆ ಒಂದು ಏಕಶಿಲಾ ವಿಗ್ರಹವಿದೆ. ಅದು ಗಂಗಾನದಿಯು ದೇವ ಲೋಕದಿಂದ ಭೂಮಿಗೆ ಆಗಮಿಸಿದ ವಿವರವನ್ನು ತಿಳಿಸುತ್ತದೆ ಎಂದು ನಂಬಲಾಗಿದೆ.