ಲಖನೌದಲ್ಲಿರುವ ರಾಮಕೃಷ್ಣ ಮಠ ಅಥವಾ ಸೇವಾಶ್ರಮವು ಬೇಲೂರಿನ ರಾಮಕೃಷ್ಣ ಮಠದ ಒಂದು ಶಾಖೆಯಾಗಿದೆ. ಈ ಮಠವು ಇಲ್ಲಿ ಎರಡು ಪ್ರಮುಖ ಸಂಸ್ಥೆಗಳನ್ನು ಹೊಂದಿದೆ. ಅದರಲ್ಲಿ ಮೊದಲನೆಯದು ವಿವೇಕಾನಂದ ಪಾಲಿ ಕ್ಲಿನಿಕ್ ಎಂಬ ಮಲ್ಟಿ-ಸ್ಪೇಷಾಲಿಟಿ ಆಸ್ಪತ್ರೆಯಾಗಿದ್ದರೆ, ಇನ್ನೊಂದು ಮಠದ ಆವರಣದಲ್ಲಿ ವೈಧ್ಯಕೀಯ ಸೌಲಭ್ಯಗಳನ್ನು ಒದಗಿಸುತ್ತದೆ. ಅದರ ಜೊತೆಗೆ ಇದು ಸುತ್ತ ಮುತ್ತಲ ಹಳ್ಳಿಯ ಜನಗಳ ಆರೋಗ್ಯ ಕಾಪಾಡುವ ಕೆಲಸವನ್ನು ಸಹ ಮಾಡುತ್ತಿದೆ.
ಇಲ್ಲಿರುವ ಪಾಲಿ ಕ್ಲಿನಿಕ್ಕನ್ನು 1970ರಲ್ಲಿ ರಾಮಕೃಷ್ಣ ಮಠ ಮತ್ತು ಮಿಷನ್ನ ಅಧ್ಯಕ್ಷರಾಗಿದ್ದ, ಸ್ವಾಮಿ ವೀರೇಶ್ವರಾನಂದರವರು ಉದ್ಘಾಟನೆ ಮಾಡಿದರು. ಇಲ್ಲಿ 14 ಅಡಿ ಎತ್ತರದ ಸ್ವಾಮಿ ವಿವೇಕಾನಂದರ ಸುಂದರ ಪ್ರತಿಮೆಯನ್ನು ನಾವು ನೋಡಬಹುದು. ಇದನ್ನು ಪ್ರಖ್ಯಾತ ಶಿಲ್ಪಿ ದೇವಿ ಪ್ರಸಾದ್ ರಾಯ್ ಚೌಧರಿಯವರು ಕೆತ್ತಿದ್ದರು. ಇದನ್ನು ಇಲ್ಲಿನ ಪಾಲಿಕ್ಲಿನಿಕ್ ಮುಂಭಾಗದ ದ್ವಾರದಲ್ಲಿ ಪ್ರತಿಷ್ಟಾಪನೆ ಮಾಡಲಾಗಿದ್ದು, ಇದು ಇಲ್ಲಿನ ಸಿಬ್ಬಂದಿ ಮತ್ತು ಸಾರ್ವಜನಿಕರನ್ನು ಸ್ಫೂರ್ತಿಗೊಳಿಸುವಂತೆ ಇದೆ.
ಪ್ರವಾಸಿಗರು ನೋಡಬೇಕಾದ ದೃಷ್ಟಿಯಿಂದ ಇಲ್ಲಿ ಒಂದು ಪ್ರಮುಖ ಪ್ರವಾಸಿ ತಾಣವಿದೆ. ಅದೇ ಇಲ್ಲಿನ ನಿರಾಲನಗರದ ರಾಮಕೃಷ್ಣ ಮಾರ್ಗದಲ್ಲಿರುವ ಶ್ರೀ ರಾಮಕೃಷ್ಣ ಮಂದಿರ. ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರು ಈ ದೇವಾಲಯದ ಭವ್ಯತೆ ಮತ್ತು ವೈಭವಕ್ಕೆ ಮಾರು ಹೋಗುತ್ತಾರೆ. ಇದರ ಬಗ್ಗೆ ತಿಳಿಯದವರು ಸಹ ಇದನ್ನು ನೋಡಿದ ಕೂಡಲೆ ತಪ್ಪದೆ ಈ ದೇವಾಲಯದ ಬಳಿ ಬಂದು ನೋಡಿ ಹೋಗುತ್ತಾರೆ. ಅದು ಈ ದೇವಾಲಯದ ವೈಶಿಷ್ಟ್ಯ.
ಇದರ ಗರ್ಭಗೃಹವು ಒಂಬತ್ತು ಗುಮ್ಮಟಗಳನ್ನು ಹೊಂದಿದ್ದು, 90 ಅಡಿ ಎತ್ತರವನ್ನು ಹೊಂದಿದೆ. ಇದರಲ್ಲಿ ಶ್ರೀ ರಾಮಕೃಷ್ಣ, ಶ್ರೀ ಮಾತಾ ಶಾರದಾ ದೇವಿ ಹಾಗು ಸ್ವಾಮಿ ವಿವೇಕಾನಂದರ ವಿಗ್ರಹಗಳನ್ನು ನಾವು ಕಾಣಬಹುದು. ಇದರ ಜೊತೆಗೆ ಈ ಮಂದಿರದಲ್ಲಿ ಕಮಲ, ತ್ರಿಶೂಲ, ಡಮರುಗ, ಶಂಖ, ಹಂಸ ಮತ್ತು ವಜ್ರಾಯುಧದಂಥಹ ಪುರಾಣ ವಸ್ತುಗಳ ವಿಗ್ರಹಗಳನ್ನು ನಾವು ಕಾಣಬಹುದು. ಇವುಗಳನ್ನು ಕೆಂಪು ಸಿಮೆಂಟಿನಿಂದ ನಿರ್ಮಿಸಲಾಗಿದೆ. ಮುಖ್ಯ ದೇವಾಲಯಕ್ಕೆ ಸಮೀಪದಲ್ಲಿರುವ ಈ ಮಂದಿರವನ್ನು 1987ರಲ್ಲಿ ಉದ್ಘಾಟನೆ ಮಾಡಲಾಯಿತು.
ಅಮೃತಶಿಲೆ ಮತ್ತು ಕೆಂಪು ಮರಳುಗಲ್ಲಿನಿಂದ ನಿರ್ಮಾಣಗೊಂಡಿರುವ ಈ ದೇವಾಲಯವು ಹಲವು ವಾಸ್ತುಶೈಲಿಗಳನ್ನು ಒಳಗೊಂಡಿದೆ. ಅದರಲ್ಲಿಯೂ ಪ್ರಮುಖವಾಗಿ ಜೈನ, ಪಲ್ಲವ, ಚಂಡೇಲ, ಚಾಲುಕ್ಯ ಮತ್ತು ಮೊಘಲರ ವಾಸ್ತುಶೈಲಿಯನ್ನು ತನ್ನಲ್ಲಿ ಒಳಗೊಂಡಿದೆ.