ಗೌತಮ್ ಬುದ್ಧ ಉದ್ಯಾನವನವು ಲಖನೌದಲ್ಲಿರುವ ಅಸಂಖ್ಯಾತ ಐತಿಹಾಸಿಕ ಉದ್ಯಾನವನಗಳು ಮತ್ತು ಸ್ಮಾರಕಗಳ ಪಟ್ಟಿಯಲ್ಲಿ ಹೊಸ ಸೇರ್ಪಡೆಯಾಗಿದೆ. ನಂಬಿಕೆಗಳ ಪ್ರಕಾರ ಗೌತಮ ಬುದ್ಧನು ತನ್ನ ಜೀವಿತಾವಧಿಯ ಬಹುಪಾಲು ಭಾಗವನ್ನು ಉತ್ತರ್ ಪ್ರದೇಶ ಮತ್ತು ಲಖನೌ ಭಾಗದಲ್ಲಿ ಕಳೆದನು ಎಂದು ಹೇಳಲಾಗುತ್ತದೆ. ಆಗ ಲಖನೌ ಅನ್ನು ನಖಲೌ ಎಂದು ಕರೆಯಲಾಗುತ್ತಿತ್ತು. ಬುದ್ಧನ ನಖ ( ಉಗುರು) ಗಳಿಂದಾಗಿ ಹೀಗೆ ಕರೆಯಲಾಗುತ್ತಿತ್ತು ಎಂದು ಹೇಳಲಾಗುತ್ತದೆ.
ಈ ಉಗುರುಗಳನ್ನು ಇಲ್ಲಿನ ಸ್ತೂಪದಲ್ಲಿ ಇಡಲಾಗಿದೆ. ಹತ್ತು ಎಕರೆಗಳಷ್ಟು ವಿಸ್ತೀರ್ಣವನ್ನು ಹೊಂದಿರುವ ಈ ಉದ್ಯಾನವನವನ್ನು 1980ರಲ್ಲಿ ಲಖನೌ ಅಭಿವೃದ್ಧಿ ಪ್ರಾಧಿಕಾರವು ಅಭಿವೃದ್ಧಿಪಡಿಸಿತು. ಇಲ್ಲಿ ಅಮೃತಶಿಲೆಯ ವೇದಿಕೆಯ ಮೇಲೆ ನಿಲ್ಲಿಸಲಾಗಿರುವ ಬೃಹತ್ ಬುದ್ಧನ ವಿಗ್ರಹವು ಗಮನ ಸೆಳೆಯುತ್ತದೆ. ಈ ಉದ್ಯಾನವನವು ರುಮಿ ದ್ವಾರ, ಬಾರಾ ಇಮಂಬರ ಮತ್ತು ಹಳೆಯ ಲಖನೌ ನಗರ ಭಾಗದಲ್ಲಿರುವ ಹುತಾತ್ಮರ ಸ್ಮಾರಕಕ್ಕೆ ಸಮೀಪದಲ್ಲಿ ನೆಲೆಗೊಂಡಿದೆ.
ಪ್ರಶಾಂತವಾದ, ನಿರ್ಮಲವಾದ ವಾತಾವರಣವು ಇದರ ಸೌಂದರ್ಯವನ್ನು ಇಮ್ಮಡಿಗೊಳಿಸಿದೆ. ಸುಂದರವಾಗಿ ವಿನ್ಯಾಸಗೊಳಿಸಲಾಗಿರುವ ಉದ್ಯಾನವನ, ಕಾರಂಜಿಗಳು, ದೀಪದ ಕಂಬಗಳು, ಆಸನಗಳು, ತಡೆಗೋಡೆಗಳು, ವೈವಿಧ್ಯಮಯ ಸಸ್ಯಗಳು ಮತ್ತು ಹಲವಾರು ವಿಗ್ರಹಗಳು ನೋಡುಗರ ಮನಸೂರೆಗೊಳ್ಳುತ್ತವೆ.
ಸ್ಥಳೀಯರ ಮತ್ತು ಪ್ರವಾಸಿಗರ ವಲಯದಲ್ಲಿ ಭಾರೀ ಪ್ರಸಿದ್ಧಿಯನ್ನು ಪಡೆದಿರುವ ತಾಣವಾದ ಈ ಉದ್ಯಾನವನವು ಅಬಾಲ ವೃದ್ಧರಾದಿಯಾಗಿ ಎಲ್ಲರಿಗು ಮನೋರಂಜನೆ ನೀಡುವಂತಹ ಹಲವಾರು ಚಟುವಟಿಕೆಗಳನ್ನು ತನ್ನಲ್ಲಿ ಒಳಗೊಂಡಿದೆ. ಮಕ್ಕಳಿಗೆ ಹಲವಾರು ಬಗೆಯ ಸವಾರಿ ನಡೆಸಲು ಇಲ್ಲಿ ಅವಕಾಶವಿದ್ದರೆ, ಹಿರಿಯರಿಗೆ ಇಲ್ಲಿನ ಕಾಲುವೆಯಲ್ಲಿ ದೋಣಿಯಾನ ಮಾಡುವ ಸೌಲಭ್ಯವನ್ನು ಒದಗಿಸಲಾಗುತ್ತದೆ.