ಕೊಲ್ವಿನ್ ತಾಲುಕ್ದಾರ್ಸ್ ಕಾಲೇಜು ಭಾರತದ ಅತ್ಯಂತ ಹಳೆಯ ಕಾಲೇಜುಗಳಲ್ಲಿ ಒಂದಾಗಿದೆ. ಇದನ್ನು ಅಂದು ಅವಧ್ ಮತ್ತು ಆಗ್ರಾದ ಲೆಫ್ಟಿನೆಂಟ್ ಗವರ್ನರ್ ಆಗಿದ್ದ ಸರ್ ಆಕ್ಲ್ಯಾಂಡ್ ಕೊಲ್ವಿನ್ ಸ್ಥಾಪಿಸಿದರು. ಈತನು ಗೋಮ್ಟಿ ನದಿಯ ದಂಡೆಯಲ್ಲಿದ್ದ ಅಂದಿನ ಪುರಾನ ಹೈದ್ರಬಾದ್ನ ಹಸನ್ಗಂಜ್ ಪ್ರಾಂತ್ಯದಲ್ಲಿ ನೆಲೆಸಿದ್ದನು.
ಈ ಶಾಲೆಯನ್ನು ಇಲ್ಲಿದ್ದ ಬ್ರಿಟೀಷರ ಮತ್ತು ತಾಲ್ಲೂಕುದಾರರ ಮಕ್ಕಳಿಗೆ ಶಿಕ್ಷಣ ನೀಡುವ ಸಲುವಾಗಿ ಸ್ಥಾಪಿಸಲಾಯಿತು. ಇದು ವಿದ್ಯಾರ್ಥಿಗಳನ್ನು ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಗೆ ತಯಾರು ಮಾಡುತ್ತಿತ್ತು. 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ಈ ಶಾಲೆಯಲ್ಲಿ ಸಾರ್ವಜನಿಕರಿಗು ಸಹ ಪ್ರವೇಶಾವಕಾಶ ಲಭ್ಯವಾಯಿತು. ಇದರಲ್ಲಿ ಮೂರು ವಿದ್ಯಾರ್ಥಿ ನಿಲಯಗಳು ಇದ್ದವು. ಅವುಗಳ ಹೆಸರು ಅವಧ್, ಅಂಜುಮನ್ ಮತ್ತು ಹಿಂದ್ ಎಂದು ಇದೆ. ಎಲ್ಲಾ ಶಾಲೆಗಳಲ್ಲಿ ಇರುವಂತೆ ಇದರಲ್ಲಿಯು ಸಹ ಹೌಸ್ ಪದ್ಧತಿ ಇದೆ. ಅವುಗಳ ಹೆಸರು ಕ್ರಮವಾಗಿ ಅಜಂತಾ, ನಳಂದಾ, ಸಾಂಚಿ, ತಕ್ಷಶಿಲಾ ಮತ್ತು ಉಜ್ಜೈನಿ ಎಂದು ಇದೆ.
ಈ ಕಾಲೇಜಿನಲ್ಲಿ ಡಿಸೆಂಬರ್ ತಿಂಗಳಿನಲ್ಲಿ ದರ್ಬಾರ್ ದಿನವೆಂಬ ಹೆಸರಿನಲ್ಲಿ ವಾರ್ಷಿಕ ಕ್ರೀಡಾ ಮತ್ತು ವಿದ್ಯಾರ್ಥಿ ಸಂಘದ ಸಾಂಸ್ಕೃತಿಕ ಸಮಾರಂಭವನ್ನು ನಡೆಸಲಾಗುತ್ತದೆ. ಈ ಸಂಸ್ಥೆಯು ಭಾರತದ ಪ್ರಸಿದ್ಧ ವ್ಯಕ್ತಿಗಳನ್ನು ಕೊಡುಗೆಯಾಗಿ ನೀಡಿದೆ. ಚಲನ ಚಿತ್ರ ಸಾಹಿತ್ಯ ರಚನೆಕಾರ ಜಾವೇದ್ ಅಖ್ತರ್ ಮತ್ತು ಮುಝಪ್ಪರ್ ಅಲಿ; ರಾಜಕೀಯ ಧುರೀಣ ಚೌಧರಿ ಅಜಿತ್ ಸಿಂಗ್: ಜಿತೇಂದ್ರ ಪ್ರಸಾದ್ ಮತ್ತಿತರರು ಇಲ್ಲಿನ ವಿದ್ಯಾರ್ಥಿಗಳಾಗಿದ್ದರು.