ಛತ್ತರ್ ಮಂಜಿಲ್ ಅಥವಾ ಛತ್ರಿ ಅರಮನೆಯನ್ನು ಹೀಗೆ ಕರೆಯಲು ಕಾರಣವೇನೆಂದರೆ, ಇದರ ಗುಮ್ಮಟವು ಕೊಡೆಯ ಆಕಾರದಲ್ಲಿರುವುದೇ ಕಾರಣವಾಗಿದೆ. ಈ ಅರಮನೆಯು ಹಲವು ಮಾಲೀಕರ ಕೈಯನ್ನು ಬದಲಿಸಿರುವ ಸಲುವಾಗಿ, ವರ್ಣರಂಜಿತವಾದ ಇತಿಹಾಸವನ್ನು ಹೊಂದಿದೆ.
ಲಖನೌದ ಗೋಮ್ಟಿ ನದಿಯ ದಂಡೆಯಲ್ಲಿ ಮೊಟ್ಟ ಮೊದಲ ಬಾರಿಗೆ ಈ ಅರಮನೆಯನ್ನು ಜನರಲ್ ಕ್ಲಾಡ್ ಮಾರ್ಟಿನ್ 1781ರಲ್ಲಿ ನಿರ್ಮಿಸಿದನು. ನಂತರ ಇದನ್ನು ನವಾಬ್ ಸಾದತ್ ಅಲಿ ಖಾನ್ ಖರೀದಿಸಿದನು. ಆನಂತರ ಇದನ್ನು ನವಾಬ್ ಘಜಿ ಉದ್ದಿನ್ ಹೈದರ್ ನವೀಕರಣ ಮಾಡಲು ಆರಂಭಿಸಿದನು. ಆದರೆ ಅದನ್ನು ಅವನ ಉತ್ತರಾಧಿಕಾರಿಯಾದ ನವಾಬ್ ನಾಸಿರ್ ಉದ್ದಿನ್ ಪೂರ್ಣಗೊಳಿಸಿದನು. ಪ್ರಸ್ತುತ ಈ ಸ್ಥಳವು ಕೇಂದ್ರ ಔಷಧ ಸಂಶೋಧನಾ ಸಂಸ್ಥೆಯ ( ಸಿ ಡಿ ಆರ್ ಐ) ಕಛೇರಿಯನ್ನು ಹೊಂದಿದೆ. ಒಂದಾನೊಂದು ಕಾಲದಲ್ಲಿ ಈ ಸ್ಥಳವು ಅವಧ್ನ ನವಾಬ ಮತ್ತು ಆತನ ಮಡದಿಯರ ನಿವಾಸವಾಗಿತ್ತು.
ಅಲ್ಲದೆ 1857ರಲ್ಲಿ ನಡೆದ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ ಇದು ಸ್ವಾತಂತ್ರ್ಯ ಹೋರಾಟಗಾರರ ಮುಖ್ಯ ಖಾರಾಸ್ಥಾನವಾಗಿತ್ತು. ಈ ಐತಿಹಾಸಿಕ ಅರಮನೆಯ ಪ್ರಮುಖ ವೈಶಿಷ್ಟ್ಯವೇನೆಂದರೆ, ಇದರ ನೆಲಮಹಡಿಯಲ್ಲಿರುವ ತಹೆಖಾನ ಎಂಬ ಹಜಾರಗಳು. ಇವುಗಳನ್ನು ಗೋಮ್ಟಿ ನದಿಯ ನೀರಿನ ಅಡಿಯಲ್ಲಿ ನಿರ್ಮಿಸಲಾಗಿದೆ. ಹಾಗಾಗಿ ಎಂತಹ ಕಡು ಬೇಸಿಗೆಯಲ್ಲು ಸಹ ಈ ಹಜಾರಾಗಳು ತಂಪಾಗಿ ಇರುತ್ತವೆ. ಈ ಎಲ್ಲಾ ಕಾರಣಗಳಿಂದಾಗಿ ಈ ಅರಮನೆಯು ಪ್ರವಾಸಿಗರ ಮತ್ತು ವೃತ್ತಿಪರ ಛಾಯಾಗ್ರಾಹಕರ ನೆಚ್ಚಿನ ತಾಣವಾಗಿದೆ. ಸ್ಯಾಮುಯೆಲ್ ಬೌರ್ನ್, ಡರೊಗಾ ಉಬ್ಬಸ್ ಅಲಿ, ಫೆಲಿಸ್ ಬಿಯಾಟೋ ಮತ್ತು ಥಾಮಸ್ ರಸ್ಟ್ ರಂತಹ ಛಾಯಾಗ್ರಹಣ ಕ್ಷೇತ್ರದ ದಿಗ್ಗಜರು ಇಲ್ಲಿಗೆ ಭೇಟಿ ನೀಡಿದ್ದಾರೆ.