ಗೋಮ್ತಿ ನದಿ ದಡದಲ್ಲಿರುವ ಉತ್ತರ ಪ್ರದೇಶದ ರಾಜಧಾನಿ ಲಖನೌ ನಗರ 'ಸಿಟಿ ಆಫ್ ನವಾಬ್ಸ್' ಎಂದೇ ಜನಪ್ರಿಯ. ಸೂರ್ಯವಂಶಿ ರಾಜವಂಶರ ಕಾಲದಲ್ಲೇ ಈ ನಗರವಿತ್ತೆಂದು ಇತಿಹಾಸ ಪುಟಗಳನ್ನು ತಿರುವಿದಾಗ ತಿಳಿದುಬರುತ್ತದೆ. ನವಾಬ್ ಅಸಫ್ ಉದ್ ದೌಲಾ ನಿರ್ಮಿಸಿದ ಲಖನೌ ನಗರ ಅವಧ್ ನವಾಬರಿಗೆ ರಾಜಧಾನಿಯಾಗಿತ್ತು. ನವಾಬರ ಕಾಲದಲ್ಲಿ ಈ ನಗರಕ್ಕೊಂದು ವಿನಯಶೀಲ ಸಂಸ್ಕೃತಿಯನ್ನು ನಿರ್ಮಿಸಿಕೊಟ್ಟಿದ್ದರು. ಆ ಕಾಲದಲ್ಲಿನ ಕೆಲವು ರುಚಿಕರವಾದ ತಿನಿಸುಗಳು ಇಂದು ಕೂಡ ಅದೇ ರುಚಿಯನ್ನು ಕಾಯ್ದುಕೊಂಡಿದೆ.
ಲಖನೌ ಕೂಡ ಬೆಳವಣೆಗೆ ಹಾಗೂ ಆಧುನೀಕರಣಕ್ಕೆ ಹೊರತಾಗಿಲ್ಲವಾದರೂ ಹಳೆಯ ಮೋಡಿ ಮತ್ತು ವೈಭವವನ್ನು ಹಾಗೆಯೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇಲ್ಲಿನ ಬೀದಿಗಳಲ್ಲಿ ಹಾಗೆ ಒಂದು ಸುತ್ತು ಹಾಕಿ ಅಥವಾ ಸ್ಥಳೀಯರೊಂದಿಗೆ ಮಾತನಾಡಿದರೆ ನಿಮ್ಮನ್ನು ಅದು ಲಖನೌವಿ ತೆಹಜೀಬ್ ಗೆ ಕೊಂಡೊಯ್ಯುತ್ತದೆ. ಹೆಚ್ಚುತ್ತಿರುವ ಜನಸಂಖ್ಯೆಯಿಂದಾಗಿ ಮಹಲುಗಳು ಅಪಾರ್ಟ್ ಮೆಂಟ್ ಗಳಿಗೆ ಜಾಗ ಮಾಡಿಕೊಟ್ಟಿವೆ. ಆದರೆ ಪ್ರೀತಿಪೂರತೆ ಹಾಗೂ ಆತಿಥ್ಯ ಹಾಗೆ ಉಳಿದುಕೊಂಡಿದೆ.
ನವಾಬರ ಕಾಲವು ಕೇವಲ ನಡವಳಿಕೆ ಹಾಗೂ ರುಚಿಕರವಾದ ತಿನಿಸುಗಳಿಗೆ ಮಾತ್ರವಲ್ಲದೆ, ಸಾಹಿತ್ಯ, ಸಂಗೀತ, ನೃತ್ಯ, ಕಲೆ ಮತ್ತು ಕರಕುಶಲತೆಗೂ ಪ್ರಸಿದ್ಧಿಯನ್ನು ಪಡೆದುಕೊಂಡಿತ್ತು. ಸಿತಾರ್ ಮತ್ತು ತಬಲದಂತಹ ಸಂಗೀತ ಸಾಧನಗಳು, ಕಥಕ್ ನಂತಹ ನೃತ್ಯಗಳು ಲಖನೌದ ಬೀದಿಗಳಲ್ಲೇ ಜನ್ಮ ಪಡೆದಿದ್ದವು. ಕಾಲಕ್ರಮೇಣ ಅವಧ್ ಕೂಡ ಬ್ರಿಟಿಷರ ಆಳ್ವಿಕೆಗೆ ಒಳಪಟ್ಟಿತು. ಬ್ರಿಟಿಷರ ಆಳ್ವಿಕೆಗೆ ಸಾಕ್ಷಿಯೆಂಬಂತೆ ಕೆಲ ಕಟ್ಟಡಗಳು ಮತ್ತು ಸ್ಮಾರಕಗಳನ್ನು ಇಲ್ಲಿ ಕಾಣಬಹುದಾಗಿದೆ.
ಉರ್ದು, ಹಿಂದೂಸ್ತಾನಿ ಮತ್ತು ಹಿಂದಿ ಭಾಷೆಗಳಿಗೆ ಲಖನೌ ತವರೂರು ಹಾಗೂ ಭಾರತದ ಸಾಹಿತ್ಯ ಹಾಗೂ ಕಾವ್ಯಕ್ಕೆ ಇಲ್ಲಿನ ಕೊಡುಗೆ ಅಪಾರ. ದೇಶದಲ್ಲಿನ ಅತ್ಯುತ್ತಮ ಕುಶಲಕರ್ಮಿಗಳು ಇಲ್ಲಿದ್ದಾರೆ ಮತ್ತು ಇಲ್ಲಿನ ಪ್ರಸಿದ್ಧ ಚಿಕ್ನಕರಿ ಕೆಲಸವು ಪುರುಷರ ಹಾಗೂ ಮಹಿಳೆಯರ ವಸ್ತ್ರಗಳಲ್ಲಿ ತನ್ನದೇ ಆದ ಗೌರವಯುವ ಸ್ಥಾನವನ್ನು ಪಡೆದುಕೊಂಡಿದೆ. ರುಚಿಕರವಾದ ತಿಂಡಿ-ತಿನಿಸುಗಳ ಪ್ರಶಂಸೆಯಿಲ್ಲದೆ ಲಖನೌನ ವಿವರಣೆ ಅಪೂರ್ಣವಾಗುತ್ತದೆ. ಇಲ್ಲಿ ಹಿಂದಿನಿಂದಲೂ ಜನಪ್ರಿಯವಾಗಿರುವ ಮುಘಲ್ ಖಾದ್ಯಗಳಾದ ತಿಕ್ಕಾ ಮತ್ತು ಕಬಾಬ್ ನ ರುಚಿ ನೋಡಲೇಬೇಕು.
ಲಖನೌ ಮತ್ತು ಅದರ ಸುತ್ತಮುತ್ತಲಿನ ಪ್ರವಾಸಿ ತಾಣಗಳು
ಲಖನೌನಲ್ಲಿ ವೀಕ್ಷಣೆಗೆ ಮತ್ತು ಏನಾದರೂ ಮಾಡಲು ತುಂಬಾ ವಿಷಯಗಳಿವೆ. ದೊಡ್ಡದಾಗಿರುವ ಬಾರಾ ಇಮಾಂಬರಾ ಮತ್ತು ಭೂಲ್ ಭುಲೈಯಾ ಸಮಾಧಿ ಸಂಕೀರ್ಣ ಇಲ್ಲಿನ ಜನಪ್ರಿಯ ಆಕರ್ಷಣೆಯಾಗಿದೆ. ಇದು 1783ರಲ್ಲಿ ನಿರ್ಮಿಸಲ್ಪಟ್ಟ ಕುತೂಹಲಕಾರಿ ಚಕ್ರವ್ಯೂಹವಾಗಿದೆ. ಈ ಸ್ಮಾರಕಗಳಿಗೆ ಪಡೆಯುವ ಪ್ರವೇಶ ಟಿಕೆಟನ್ನು ಛೋಟಾ ಇಮಾಂಬರಾ, ಹುಸೈನಬಾದ್ ಕ್ಲಾಕ್ ಟವರ್ ಮತ್ತು ಚಿತ್ರ ಗ್ಯಾಲರಿಗೂ ಬಳಸಿಕೊಳ್ಳಬಹುದು. ಲಖನೌ ರೆಸಿಡೆನ್ಸಿ ಕಟ್ಟಡದ ಅವಶೇಷಗಳು ಮತ್ತು 1857ರ ಆಡಳಿತ ಕಾಲದ ಸಂಯುಕ್ತ ತಾಣದಲ್ಲಿರುವ 1857ರಲ್ಲಿ ನಡೆದ ಮೊದಲ ಸ್ವಾತಂತ್ರ್ಯ ಸಂಗ್ರಾಮದ ಸ್ಮಾರಕ ಮ್ಯೂಸಿಯಂಗೆ ಭೇಟಿ ನೀಡಬೇಕು. ರಕ್ತಸಿಕ್ತ ಇತಿಹಾಸ ಇಲ್ಲಿ ಅಮರವಾಗಿದೆ.
ಆದರೆ ಇಂದು ಇಲ್ಲಿನ ನಿವಾಸಿಗಳು ಉಷ್ಣತೆ, ಧೂಳು ಮತ್ತು ನಗರದ ಕರ್ಕಶ ಶಬ್ದದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.ಲಖನೌ ಹಸಿರಿಗೆ ತನ್ನದೇ ಆದ ಕೊಡುಗೆ ನೀಡಿದೆ. ಲಖನೌ ಮೃಗಾಲಯ, ಸಸ್ಯ ತೋಟ ಮತ್ತು ಬುದ್ಧ ಪಾರ್ಕ್, ಕುಕೈಲ್ ಮೀಸಲು ಅರಣ್ಯ ಮತ್ತು ನಗರದಿಂದ ಮೂಕವಿಸ್ಮಿತರಾಗಿದ್ದರೆ ಸಿಖಂದರ್ ಬಾಗ್ ಸಮಾಧಾನವನ್ನು ಒದಗಿಸುತ್ತದೆ.
ಅವಧ್ ವಾಸ್ತುಶೈಲಿಗೆ ಸಾಕ್ಷ್ಯವೆನ್ನುವಂತೆ ಹಲವಾರು ಆಕರ್ಷಕ ಸ್ಮಾರಕಗಳು ಮತ್ತು ಕಟ್ಟಡಗಳು ಲಖನೌದಲ್ಲಿದೆ. ಕೈಸರ್ಬಾಗ್ ಅರಮನೆ, ತಾಲುಕ್ದಾರ್ ಹಾಲ್, ಷಾ ನಜಾಫ್ ಇಮಾಂಬರಾ, ಬೇಗಂ ಹಜರತ್ ಮಹಲ್ ಪಾರ್ಕ್ ಮತ್ತು ಭಾರತದ ಆಕರ್ಷಕ ವಾಸ್ತುಶಿಲ್ಪ ವಿನ್ಯಾಸಗಳಲ್ಲಿ ಒಂದಾಗಿರುವ ಹಾಗೂ ಲಖನೌದ ಮಹಾದ್ವಾರವಾಗಿರುವ ರುಮಿ ದರ್ವಾಜಾಗೆ ಭೇಟಿ ಕೊಡಿ. 1423ರಲ್ಲಿ ಸುಲ್ತಾನ ಅಹ್ಮದ್ ಷಾ ನಿರ್ಮಿಸಿದ ಜುಮಾ ಮಸೀದಿ ಕೂಡ ಇಲ್ಲಿದೆ. ಇದನ್ನು ಸಂಪೂರ್ಣವಾಗಿ ಹಳದಿ ಮರಳುಗಲ್ಲಿನಿಂದ ನಿರ್ಮಿಸಲಾಗಿದ್ದು, ಇದರ ವಿನ್ಯಾಸ ಹಾಗೂ ವಾಸ್ತುಶಿಲ್ಪಕ್ಕೆ ಇದು ಪ್ರಸಿದ್ದಿಯನ್ನು ಪಡೆದುಕೊಂಡಿದೆ ಮತ್ತು ಭಾರತದ ಅತ್ಯಂತ ಸುಂದರ ಮಸೀದಿಗಳಲ್ಲಿ ಇದು ಒಂದೆಂದು ಪರಿಗಣಿಸಲಾಗಿದೆ.
ದಹಾಸ್ ಸರೋವರದ ಬಳಿ ಇರುವ ಪ್ರಮುಖ ಘಾಟ್ ಮತ್ತು ದಹಾಸ್ ಘಾಟ್ ಇಲ್ಲಿನ ಪ್ರಮುಖ ಆಕರ್ಷಣೆಯಾಗಿದ್ದು, ಈ ಪ್ರದೇಶಗಳನ್ನು ಪ್ರವಾಸಿಗಳು ಶಿಬಿರಗಳಿಗಾಗಿ ಬಳಸಿಕೊಳ್ಳುತ್ತಾರೆ.
ಲಖನೌ ತಲುಪುವುದು
ಲಖನೌಗೆ ವಿಮಾನ, ರೈಲು ಮತ್ತು ರಸ್ತೆ ಮೂಲಕ ಪ್ರಯಾಣಿಸಬಹುದು.
ಪ್ರಯಾಣಕ್ಕೆ ಸೂಕ್ತ ಸಮಯ
ಅಕ್ಟೋಬರ್ ಮತ್ತು ಮಾರ್ಚ್ ಮಧ್ಯೆ ಲಖನೌಗೆ ಭೇಟಿ ನೀಡಲು ಸರಿಯಾದ ಸಮಯ.