ಥಾನೇಶ್ವರವು ಪ್ರಾಚೀನ ಮತ್ತು ಐತಿಹಾಸಿಕ ಪಟ್ಟಣವಾಗಿದೆ. ಇದು ಕುರುಕ್ಷೇತ್ರ ಜಿಲ್ಲೆಯಲ್ಲಿ ಹರಿಯುವ ಸರಸ್ವತಿ ಘಗ್ಗರ್ ನದಿಯ ದಂಡೆಯ ಮೇಲೆ ನೆಲೆಗೊಂಡಿದೆ. ಇದು ದೆಹಲಿಯಿಂದ ವಾಯುವ್ಯ ದಿಕ್ಕಿಗೆ 160 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಇದನ್ನು ಒಂದು ಕಾಲದಲ್ಲಿ ಹರ್ಷವರ್ಧನನ ತಂದೆ ಪ್ರಭಾಕರವರ್ಧನನು ಆಳುತ್ತಿದ್ದನು. ಈತನು ವರ್ಧನ ಮನೆತನದ ಪ್ರಥಮ ರಾಜನಾಗಿದ್ದನು.
ಹಿಂದೆ ಇದನ್ನು ಸ್ಥಾನೀಶ್ವರ ಎಂದು ಕರೆಯುತ್ತಿದ್ದರು, ನಂತರ ಇದನ್ನು ಥಾನೇಶ್ವರ ಎಂದು ಕರೆಯಲು ಆರಂಭಿಸಲಾಗಿತ್ತು. ಥಾನೇಶ್ವರವು 1950ರವರೆಗು ಕುಗ್ರಾಮವಾಗಿಯೇ ಇತ್ತು. 1947ರಲ್ಲಿ ಸ್ವಾತಂತ್ರ್ಯ ಬಂದ ನಂತರ ದೇಶ ವಿಭಜನೆಯ ಸಂದರ್ಭದಲ್ಲಿ ಇಲ್ಲಿ ಒಂದು ನಿರಾಶ್ರಿತರ ಶಿಬಿರವನ್ನು ನಿರ್ಮಿಸಲಾಯಿತು. ನಂತರದ ದಿನಗಳು ಈ ಊರು ನಗರವಾಗಿ ಪರಿವರ್ತನೆಗೊಂಡಿತು.
23 ಜನವರಿ 1973ರಲ್ಲಿ ಕುರುಕ್ಷೇತ್ರವು ಹೊಸ ಜಿಲ್ಲೆಯಾಗಿ ಉದಯಗೊಂಡಿತು. ನಂತರ ಥಾನೇಶ್ವರವು ಒಂದು ಪ್ರಮುಖ ಪಟ್ಟಣವಾಗಿ ರೂಪುಗೊಂಡಿತು. ಆದಾಗಿಯೂ ಜನರು ಕುರುಕ್ಷೇತ್ರವನ್ನು ಥಾನೇಶ್ವರವೆಂದು ತಪ್ಪಾಗಿ ಗ್ರಹಿಸುತ್ತಾರೆ. ಕುರುಕ್ಷೇತ್ರ ಜಿಲ್ಲೆಯು ಪೌರಾಣಿಕ ಮಹತ್ವವನ್ನು ಹೊಂದಿದೆ. ನಂಬಿಕೆಗಳ ಪ್ರಕಾರ ಶ್ರೀಕೃಷ್ಣನು ಸೂರ್ಯಗ್ರಹಣ ಉತ್ಸವದಲ್ಲಿ ಪಾಲ್ಗೊಳ್ಳಲು ತಮ್ಮ ಕುಟುಂಬ ಸದಸ್ಯರ ಸಮೇತವಾಗಿ ದ್ವಾರಕೆಯಿಂದ ಕುರುಕ್ಷೇತ್ರಕ್ಕೆ ಬಂದಿದ್ದನಂತೆ.
ನಂತರ ಮೊಘಲ್ ಚಕ್ರವರ್ತಿ ಅಕ್ಬರ್ ಸಹ 1567ರಲ್ಲಿ ಸಂಭವಿಸಿದ ಸೂರ್ಯಗ್ರಹಣದ ದಿನದಂದು ಇಲ್ಲಿಗೆ ಭೇಟಿ ನೀಡಿದ್ದನಂತೆ. ಆಗ ಆತನ ಜೊತೆಗೆ ಅಕ್ಬರ್ ನಾಮಾವನ್ನು ಬರೆದ ಇತಿಹಾಸಕಾರ ಅಬುಲ್ ಫಜಲ್ ಸಹ ಭೇಟಿ ನೀಡಿದ್ದನಂತೆ. ಈತ ಅಕ್ಬರನ ಆಸ್ಥಾನ ಇತಿಹಾಸಕಾರನಾಗಿದ್ದನು. ಈತನು ಅಂದು ಸೂರ್ಯಗ್ರಹಣದ ದಿನ ಕುರುಕ್ಷೇತ್ರದಲ್ಲಿ ಸ್ನಾನಮಾಡಿದ ಬಗ್ಗೆ ವಿವರಿಸಿದ್ದಾನೆ.
ಮೊಘಲ್ ದೊರೆ ಶಹಜಹಾನನ ಕಾಲದಲ್ಲಿ ಭಾರತಕ್ಕೆ ಭೇಟಿ ನೀಡಿದ ಫ್ರೆಂಚ್ ಪ್ರವಾಸಿ ಫ್ರಾಂಕೋಯಿಸ್ ಬರ್ನಿಯರ್ ತಮ್ಮ ಪ್ರವಾಸ ಕಥೆಗಳಲ್ಲಿ ಸೂರ್ಯ ಗ್ರಹಣದ ದಿನದಂದು ಭಾರತೀಯರು ಸ್ನಾನ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಉಲ್ಲೇಖಿಸಿದ್ದಾನೆ. ಆಗ ಜನರು ಗಂಗಾ, ಸಿಂಧು ಮತ್ತು ಥಾನೇಶ್ವರಗಳಲ್ಲಿ ಪವಿತ್ರ ಸ್ನಾನ ಮಾಡುತ್ತಿದ್ದರು ಎಂದು ಆತ ತಿಳಿಸಿದ್ದಾನೆ. ಇತಿಹಾಸಕಾರರು ಪ್ರಸ್ತುತ ಇದನ್ನು ಸಿಂಧೂ ನಾಗರೀಕತೆಯ ಜೊತೆಗೆ ತಳುಕು ಹಾಕಿ ವಿಶ್ಲೇಷಣೆ ಮಾಡಿದ್ದಾರೆ. ಇದರ ಜೊತೆಗೆ ಇತಿಹಾಸಕಾರೌ ಇಂದು ಹರಿಯುತ್ತಿರುವ ಘಗ್ಗರ್ ನದಿಯು ಅಂದಿನ ವೇದಗಳ ಕಾಲದ ಸರಸ್ವತಿ ನದಿಯಾಗಿರಬಹುದಾ ಎಂದು ಸಹ ಯೋಚಿಸುತ್ತಿದ್ದಾರೆ.