ಮಹಾಭಾರತ ಮಹಾಕಾವ್ಯದಲ್ಲಿ ಪೆಹೊವಾವನ್ನು "ಪೃತುದಕ" ಎಂದು ಕರೆಯಲಾಗಿದೆ. ಇದೇ ಸ್ಥಳದಲ್ಲಿ ರಾಜ ಪೃಥು ತಮ್ಮ ತಂದೆಯ ನಿಧನದ ನಂತರ ಅವರ ಆತ್ಮಕ್ಕೆ ಮುಕ್ತಿ ಸಿಗಲೆಂದು ಪ್ರಾರ್ಥಿಸಿದರಂತೆ. ಹಾಗಾಗಿ ಈ ಸ್ಥಳದಲ್ಲಿ ತಮ್ಮ ಪಿತೃಗಳಿಗೆ ಪಿಂಡ ಪ್ರಧಾನ ಮಾಡಲು ಹಲವಾರು ಜನರು ಆಗಮಿಸುತ್ತಿರುತ್ತಾರೆ. ಪೆಹೊವಾವು ಥಾನೇಶ್ವರದಿಂದ 27 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ.
ಈ ಸ್ಥಳವು ಕ್ರಿ.ಶ.882 ರಿಂದ ಅಸ್ತಿತ್ವದಲ್ಲಿದೆ ಎಂದು ತಿಳಿದು ಬಂದಿದೆ. ಆದರೆ ಇತಿಹಾಸವು ಇದು ಸುಮಾರು 895 ರಿಂದ ಅಸ್ತಿತ್ವದಲ್ಲಿದೆ ಎಂದು ತಿಳಿಸುತ್ತದೆ. ಪುರಾಣದ ಪ್ರಕಾರ ಪೃಥುವಿನ ತಂದೆ ತಮ್ಮ ಕಡೆಯ ದಿನಗಳನ್ನು ಸರಸ್ವತಿ ಪೃಥುದಕ್ನಲ್ಲಿ ಕಳೆದರು ಮತ್ತು ಇಲ್ಲೇ ನಿಧನ ಹೊಂದಿದರು ಅದಕ್ಕೆ ಪೃಥುವು ತಮ್ಮ ತಂದೆಯ ಆತ್ಮಕ್ಕಾಗಿ ಇಲ್ಲಿ ಪ್ರಾರ್ಥಿಸಿದರು.
ಪೃಥು ಮಹಾರಾಜನು ಇಲ್ಲಿನ ನದಿ ದಂಡೆಯಲ್ಲಿ ಹಲವಾರು ದಿನಗಳನ್ನು ಉಪವಾಸದಿಂದ ಕಳೆದು ದೇವಾನುದೇವತೆಗಳಿಗೆ ಹಲವಾರು ಸೇವಾ ಕಾರ್ಯಗಳನ್ನು ನೆರವೇರಿಸಿದನಂತೆ. ಆತ ಉಪವಾಸ ಮಾಡಿದ ಸ್ಥಳವನ್ನು ಪೃತುದಕ ತೀರ್ಥ ಎಂದು ಕರೆಯಲಾಗುತ್ತದೆ. ಇಲ್ಲಿ ರಾಜನ ಹೆಸರಿನಲ್ಲಿ ಹಲವಾರು ಘಾಟ್ ಮತ್ತು ದೇವಾಲಯಗಳನ್ನು ನಾವು ಕಾಣಬಹುದು. ಕಾರ್ತಿಕೇಯ ದೇವಾಲಯವು ಇಲ್ಲಿನ ಪ್ರಸಿದ್ಧ ದೇವಾಲಯವಾಗಿದೆ.
ದಂತಕತೆಗಳ ಪ್ರಕಾರ ಕಾರ್ತಿಕೇಯನು ಇಡೀ ವಿಶ್ವವನ್ನು ಸುತ್ತಾಡಿಕೊಂಡು ತನ್ನ ತಂದೆ ತಾಯಿಯರಾದ ಶಿವ- ಪಾರ್ವತಿಯರ ಬಳಿಗೆ ಹೋಗುವಾಗ ತನ್ನ ಚರ್ಮವನ್ನು ಇಲ್ಲಿ ಮಾ ಪಾರ್ವತಿಗಾಗಿ ಬಿಟ್ಟು ಬಿಟ್ಟನಂತೆ. ಆ ಸ್ಥಳದಲ್ಲಿ ಎರಡು ಬಂಡೆಗಲ್ಲುಗಳನ್ನು ಬಳಸಿ ಒಂದು ದೇವಾಲಯವನ್ನು ಇಲ್ಲಿ ನಿರ್ಮಿಸಲಾಗಿದೆ. ಇಲ್ಲಿ ದೇವರಿಗಾಗಿ ಸದಾ ನಂದಾದೀಪವನ್ನು ಹಚ್ಚುವ ಪರಿಪಾಠವಿದೆ.
ಮಹಾಭಾರತದ ಯುದ್ಧದ ಸಂದರ್ಭದಲ್ಲಿ ಶ್ರೀ ಕೃಷ್ಣನು ಯುಧಿಷ್ಠಿರನಿಗೆ ಯುದ್ಧದಲ್ಲಿ ಮಡಿದ 18,00,000 ಜನರ ಆತ್ಮಕ್ಕೆ ಶಾಂತಿ ದೊರೆಯಲಿ ಎಂದು ಇಲ್ಲಿಯೇ ಎರಡು ದೀಪಗಳನ್ನು ಹಚ್ಚುವಂತೆ ತಿಳಿಸಿದಂತೆ. ಈ ದೇವಾಲಯ ನಿರ್ಮಾಣಗೊಂಡ ಕಾಲವು ನಿಖರವಾಗಿ ತಿಳಿದು ಬಂದಿಲ್ಲವಾದರು, 4500 ವರ್ಷ ಹಳೆಯದಿರಬಹುದು ಎಂಬ ನಂಬಿಕೆ ಇಲ್ಲಿದೆ.
ಮತ್ತೊಂದು ಕುತೂಹಲಕಾರಿ ವಿಚಾರವೇನೆಂದರೆ ಪೆಹೊವಾದಲ್ಲಿ ಮಹಾಭಾರತ ಕಾಲದಿಂದಲೂ ವಂಶವೃಕ್ಷ ಅಥವಾ ಕುಟುಂಬ ಸದಸ್ಯರ ಮಾಹಿತಿಯನ್ನು ಬರೆದಿಡುವ ಪರಿಪಾಠ ಬೆಳೆದುಬಂದಿದೆ. ಆದರೆ ಇವುಗಳಲ್ಲಿ ಹಲವು ದಾಖಲೆಗಳನ್ನು ಮುಸ್ಲಿಂ ಆಡಳಿತಗಾರರು ನಾಶ ಮಾಡಿದ್ದಾರೆ.