ಒ.ಪಿ ಜಿಂದಾಲ್ ಪಾರ್ಕ್ ಮತ್ತು ಸಂಗೀತ ಕಾರಂಜಿಯನ್ನು ಕುರುಕ್ಷೇತ್ರ ಲೋಕಸಭಾ ಕ್ಷೇತ್ರದ ಸದಸ್ಯ ಹಾಗು ಕೈಗಾರಿಕೋದ್ಯಮಿ ಮತ್ತು ಸ್ವತಃ ಜಿಂದಾಲ್ರವರ ಮಗನಾದ ನವೀನ್ ಜಿಂದಾಲ್ರವರು ನಿರ್ಮಿಸಿದರು. ಇದನ್ನು ಅವರು ತಮ್ಮ ಪೂಜ್ಯ ತಂದೆಯವರ ಸ್ಮರಣೆಗಾಗಿ ನಿರ್ಮಿಸಿದರು. ಇವರು 2005 ಮಾರ್ಚ್ 31ರಂದು ಮರಣ ಹೊಂದುವ ಮೊದಲು ಹರಿಯಾಣ ರಾಜ್ಯದ ವಿದ್ಯುಚ್ಛಕ್ತಿ ಇಲಾಖೆಯ ಮಂತ್ರಿಯಾಗಿದ್ದರು.
ಈ ಉದ್ಯಾನವನವು ಸುಮಾರು 14 ಎಕರೆ ಪ್ರದೇಶದಲ್ಲಿ ವಿಸ್ತರಿಸಿದ್ದು, ಉತ್ತರ ಭಾರತದಲ್ಲಿಯೇ ಅತ್ಯಂತ ದೊಡ್ಡದಾದ ಸಂಗೀತ ಕಾರಂಜಿಯನ್ನು ಹೊಂದಿದೆ. ಇಲ್ಲಿ ನಾಲ್ಕು ಅಡಿ ಎತ್ತರದ ಒ.ಪಿ ಜಿಂದಾಲರ ಮೂರ್ತಿಯನ್ನು ನಾವು ನೋಡಬಹುದು. ಈ ಉದ್ಯಾನವನವು ಎಲ್ಲಾ ವಯೋಮಾನದವರಿಗು ಹಿಡಿಸುವ ಹಲವಾರು ಮನೋರಂಜನಾತ್ಮಕ ಸೌಲಭ್ಯಗಳನ್ನು ತನ್ನಲ್ಲಿ ಒಳಗೊಂಡಿದೆ.
ಇಲ್ಲಿ ಪುಟಾಣಿಗಳಿಗಾಗಿ ಹಲವಾರು ಬಣ್ಣ ಬಣ್ಣದ ಉಯ್ಯಾಲೆಗಳನ್ನು ಹಾಕಲಾಗಿದೆ. ಇನ್ನುಳಿದಂತೆ ಇದು ಹಿರಿಯರ ಧ್ಯಾನ ಕೇಂದ್ರವಾಗಿ ಸಹ ಕಾರ್ಯ ನಿರ್ವಹಿಸುತ್ತದೆ. ವಾಯು ವಿಹಾರ ಮಾಡಲು, ವ್ಯಾಯಾಮ ಮಾಡಲು ಮತ್ತು ಕುಟುಂಬದ ಜೊತೆಗೆ ಕಾಲ ಕಳೆಯಲು ಬರುವವರಿಗೆ ಇದು ಹೇಳಿ ಮಾಡಿಸಿದ ತಾಣವಾಗಿದೆ.