ನಾಭಿ ಎಂದರೆ ಹೊಕ್ಕಳು, ಕಮಲ ಎಂದರೆ ತಾವರೆ ನಾಭಿ ಕಮಲ್ ಎಂಬ ಹೆಸರಿಗೆ ತಾರ್ಕಿಕವಾಗಿ ಯಾವುದೇ ಅರ್ಥವಿಲ್ಲ. ಆದರೆ ಆಧ್ಯಾತ್ಮಿಕವಾಗಿ ಇದು ಬ್ರಹ್ಮನ ಹುಟ್ಟನ್ನು ಸಾರುತ್ತವೆ. ಪುರಾಣಗಳ ಪ್ರಕಾರ ಬ್ರಹ್ಮನು ವಿಷ್ಣುವಿನ ನಾಭಿಯಲ್ಲಿ ಬೆಳೆಯುವ ಕಮಲದಿಂದ ಜನಿಸಿದನಂತೆ.
ಕುರುಕ್ಷೇತ್ರದಲ್ಲಿರುವ ನಾಭಿ ಕಮಲವು ಬ್ರಹ್ಮನ ಹುಟ್ಟನ್ನು ಸ್ಮರಿಸುವ ಸಲುವಾಗಿ ಸ್ಥಾಪನೆಗೊಂಡಿದೆ. ಹಾಗಾಗಿಯೇ ಈ ದೇವಾಲಯದಲ್ಲಿ ಈ ಇಬ್ಬರು ದೇವರುಗಳ ಮೂರ್ತಿಯನ್ನು ನಾವು ನೋಡಬಹುದು. ಅಷ್ಟೇನು ದೊಡ್ಡ ಮಂದಿರವಲ್ಲದಿದ್ದರು, ಬ್ರಹ್ಮನಿಗಾಗಿ ಸಮರ್ಪಿಸಲಾಗಿರುವ ಕೆಲವೇ ಕೆಲವು ದೇವಾಲಯಗಳಲ್ಲಿ ಇದು ಸಹ ಒಂದು.
ನರ್ಕತರಿ ಹಳ್ಳಿಗೆ ಸಮೀಪದಲ್ಲಿ ನೆಲೆಗೊಂಡಿರುವ ಈ ದೇವಾಲಯವು ಭಾರತದ ಎಲ್ಲಾ ಪ್ರಾಚೀನ ದೇವಾಲಯಗಳಂತೆಯೆ ಕಲ್ಯಾಣಿಯನ್ನು ಹೊಂದಿದೆ. ನಂಬಿಕೆಗಳ ಪ್ರಕಾರ ಶಯಶಯ್ಯೆಯಲ್ಲಿ ಮಲಗಿದ್ದ ಭೀಷ್ಮನ ಬಾಯಾರಿಕೆಯನ್ನು ತಣಿಸಲು ಅರ್ಜುನ ಬಾಣ ಬಿಟ್ಟು ಸೃಷ್ಟಿಸಿದ ನೀರಿನ ಚಿಲುಮೆಯಿಂದ ಈ ಕಲ್ಯಾಣಿಗೆ ನೀರು ಬರುತ್ತದೆಯಂತೆ.
ನಾಭಿ ಕಮಲ್ ದೇವಾಲಯವು ಪೆಹೊವಾ - ಕುರುಕ್ಷೇತ್ರ ರಸ್ತೆಯಲ್ಲಿ ಥಾನೇಶ್ವರದಿಂದ ಕೇವಲ ಒಂದೂವರೆ ಕಿ.ಮೀ ದೂರದಲ್ಲಿ ನೆಲೆಗೊಂಡಿದೆ.