ಕುಮಾರಧಾರಾ ನದಿಯ ದಂಡೆಯಲ್ಲಿರುವ ಸುಬ್ರಹ್ಮಣ್ಯ ಊರಿನ ಪ್ರಮುಖ ಆಕರ್ಷಣೆಯಾದ ಸುಬ್ರಹ್ಮಣ್ಯ ದೇವಾಲಯವನ್ನು ತಪ್ಪದೆ ನೋಡಬೇಕು. ಈ ದೇವಾಲಯವು ನದಿಗಳಿಂದ, ಪರ್ವತಗಳಿಂದ, ಕಾಡುಗಳಿಂದ ಮತ್ತು ಮುಖ್ಯವಾಗಿ ಕುಮಾರ ಪರ್ವತ ಬೆಟ್ಟದಿಂದ ಸುತ್ತುವರೆದಿದೆ. ಈ ದೇವಾಲಯವು ಶಿವನ ದ್ವಿತೀಯ ಪುತ್ರನಾದ ಸುಬ್ರಹ್ಮಣ್ಯ ಸ್ವಾಮಿಯ( ಕಾರ್ತಿಕೇಯ ಎಂದು ಸಹ ಕರೆಯಲಾಗುತ್ತದೆ) ಮತ್ತು ಸರ್ಪಗಳ ರಾಜನಾದ ವಾಸುಕಿಯ ಆವಾಸ ಸ್ಥಾನವೆಂದು ಪರಿಗಣಿಸಲ್ಪಟ್ಟಿದೆ.ಶ್ರೀ ಸುಬ್ರಹ್ಮಣ್ಯ ದೇವಾಲಯದ ಹೊರ ಮತ್ತು ಒಳ ಆವರಣಗಳು ಗರ್ಭಗುಡಿಗೆ ಪ್ರವೇಶ ಕಲ್ಪಿಸುತ್ತವೆ. ಅಲ್ಲಿ ವಾಸುಕಿಯ ಸಹಿತ ಸ್ವಾಮಿಯ ಮೂರ್ತಿಯನ್ನು ಪ್ರತಿಷ್ಟಾಪಿಸಲಾಗಿದೆ. ಪ್ರವಾಸಿಗರು ಇಲ್ಲಿ ಹಿಂದು ಪುರಾಣದ ಮತ್ತೊಂದು ಪ್ರಮುಖ ನಾಗನಾದ ಆದಿಶೇಷನ ಮೂರ್ತಿಯನ್ನು ಸಹ ಕಾಣಬಹುದು. ಯಾತ್ರಾರ್ಥಿಗಳು ಪ್ರವೇಶ ದ್ವಾರ ಮತ್ತು ಗರ್ಭಗುಡಿಯ ಮಧ್ಯೆ ಗರುಡಗಂಬವನ್ನು ನೋಡಬಹುದು. ಇದು ಬೆಳ್ಳಿಯ ಹೊದಿಕೆಯಿಂದ ಮುಚ್ಚಲ್ಪಟ್ಟಿದೆ. ಸ್ಥಳೀಯರ ಪ್ರಕಾರ ಈ ಕಂಬದ ಒಳಗೆ ವಾಸುಕಿ ಇದ್ದು, ಈ ಸ್ತಂಭ ಯಾತ್ರಾರ್ಥಿಗಳನ್ನು ವಾಸುಕಿಯ ವಿಷದಿಂದ ರಕ್ಷಿಸುವ ಸಲುವಾಗಿ ನಿರ್ಮಿಸಲಾಗಿದೆಯಂತೆ.ಈ ಪವಿತ್ರ ದೇವಾಲಯವು “ಸರ್ಪ ದೋಷ” ನಿವಾರಣೆಗಾಗಿ ಕೈಗೊಳ್ಳುವ ಪೂಜಾ ಕೈಂಕರ್ಯಗಳಿಗಾಗಿ ಹೆಸರುವಾಸಿಯಾಗಿದೆ. ’ದಿಪೂಯಂ’ ಉತ್ಸವದ ಸಂಜೆಯಂದು ದೇವಾಲಯವು ಯಾತ್ರಾರ್ಥಿಗಳಿಂದ ತುಂಬಿ ತುಳುಕುತ್ತಿರುತ್ತದೆ. ಇವುಗಳ ಜೊತೆಗೆ ದೇವಾಲಯದಲ್ಲಿ ಸರ್ಪ ದೋಷ ನಿವಾರಣ ಪೂಜೆಗಳಾದ ಆಶ್ಲೇಷ ಬಲಿ ಪೂಜೆ ಮತ್ತು ಸರ್ಪ ಸಂಸ್ಕಾರಗಳನ್ನು ಸಹಾ ನೆರವೇರಿಸಲಾಗುತ್ತದೆ.