ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಕುದುರೆಮುಖವು ಒಂದು ಗುಡ್ಡ ಪ್ರದೇಶವಾಗಿದೆ ಹಾಗೂ ಇದು ಪಶ್ಚಿಮ ಘಟ್ಟದ ಒಂದು ಭಾಗವಾಗಿದೆ. ತನ್ನ ಯಥೇಚ್ಛ ಹುಲ್ಲುಗಾವಲು ಪ್ರದೇಶ ಮತ್ತು ದಟ್ಟ ಅರಣ್ಯದಿಂದಾಗಿ ಜೀವವೈವಿಧ್ಯದ ಪ್ರಮುಖ ಕೇಂದ್ರವಾಗಿದೆ.
ಹಸಿರಿನ ಸಿರಿಯಲ್ಲಿ ತಿರುಗಾಟ
ಪಶ್ಚಿಮಘಟ್ಟದಲ್ಲೇ ಕುದುರೆಮುಖ ರಾಷ್ಟ್ರೀಯ ಪಾರ್ಕ್ ಎರಡನೇ ಅತಿ ದೊಡ್ಡ ಕಾಯ್ದಿಟ್ಟ ಅರಣ್ಯವಾಗಿದೆ. ಇದು ಸುಮಾರು 600 ಚದರ ಕಿ.ಮೀ ವ್ಯಾಪ್ತಿಯನ್ನು ಹೊಂದಿದೆ ಮತ್ತು ಹುಲ್ಲುಗಾವಲು ಪ್ರದೇಶ ಮತ್ತು ದಟ್ಟ ಅರಣ್ಯವನ್ನು ಹೊಂದಿದೆ. ಈ ಪ್ರದೇಶದಲ್ಲಿ ಪ್ರತಿವರ್ಷ ಸುಮಾರು 7000 ಮಿಲಿಮೀಟರು ಮಳೆಯಾಗುತ್ತದೆ. ನೀರನ್ನು ಇಂಗಿಸುವ ಮತ್ತು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯದಿಂದಾಗಿ ಇಲ್ಲಿ ಹಲವು ತೊರೆಗಳು ನಿರ್ಮಾಣಗೊಂಡಿವೆ ಮತ್ತು ತುಂಗಾ, ಭದ್ರಾ ಮತ್ತು ನೇತ್ರಾವತಿ ನದಿಯು ಹುಟ್ಟಿಕೊಂಡಿದೆ.
ತಂಪಾದ ವಾತಾವರಣ ಮತ್ತು ಆಹಾರಗಳ ಪೂರೈಕೆಯಿಂದಾಗಿ ಇಲ್ಲಿ ವಿವಿಧ ಪ್ರಾಣಿ ಪಕ್ಷಿಗಳ ವಾಸಕ್ಕೆ ಅನುಕೂಲವಾಗಿದೆ. ಕಾಡುಕೋಣ, ಜಿಂಕೆ, ಹರಿಣ, ಸಾಂಬಾರ್, ಮಲಬಾರಿನ ದೊಡ್ಡ ಅಳಿಲುಗಳು, ಹಾರುವ ಅಳಿಲುಗಳು, ಮಂಗಗಳು, ಕೋತಿಗಳು, ಮುಳ್ಳುಹಂದಿ, ಹಂದಿಗಳು ಮತ್ತು ಮುಂಗುಸಿಗಳು ಇವೆ. ಈ ಪ್ರದೇಶದ ಅರಣ್ಯದಲ್ಲಿ ಹುಲಿ, ಚಿರತೆ, ಗುಳ್ಳೆನರಿ ಮತ್ತು ಸೀಳುನಾಯಿಗಳು ಕೂಡಾ ಇವೆ.
ಕುದುರೆಮುಖ ಪ್ರವಾಸಿಗರಿಗೆ ಯಾಕೆ ಇಷ್ಟವಾಗುತ್ತದೆ?
ಕುದುರೆಮುಖದ ಸುತ್ತಮುತ್ತ ಹಲವು ಆಕರ್ಷಕ ಪ್ರವಾಸಿ ತಾಣಗಳಿವೆ. ಇವುಗಳಲ್ಲಿ ಲಕ್ಯಾ ಡ್ಯಾಮ್, ರಾಧಾಕೃಷ್ಣ ದೇವಸ್ಥಾನ, ಗಂಗಾಮೂಲ ಬೆಟ್ಟ ಮತ್ತು ಹನುಮಾನ್ ಗುಂಡಿ ಜಲಪಾತಗಳು, ಇಲ್ಲಿ ನೀರು ಸುಮಾರು 100 ಅಡಿ ಮೇಲಿನಿಂದ ಕೆಳಗೆ ಕಲ್ಲಿನ ಮೇಲೆ ಬೀಳುತ್ತದೆ. ಕುದುರೆಮುಖಕ್ಕೆ ನೀವು ಭೇಟಿ ನೀಡಿದರೆ ಈ ಪ್ರದೇಶವು ಪಿಕ್ನಿಕ್ಗೆ ಅತ್ಯುತ್ತಮ ಸ್ಥಳ.
ಕುದುರೆಮುಖವು ತನ್ನ ವಿಶಾಲ ಅರಣ್ಯ ಪ್ರದೇಶದಲ್ಲಿ ಚಾರಣಿಗರಿಗೆ ಸಾಕಷ್ಟು ಅವಕಾಶಗಳನ್ನು ಕಲ್ಪಿಸಿಕೊಟ್ಟಿದೆ. ಇಲ್ಲಿ ಚಾರಣ ಮಾಡುವುದಕ್ಕೆ ನೀವು ಅರಣ್ಯ ಇಲಾಖೆಯಿಂದ ಪರವಾನಗಿ ತೆಗೆದುಕೊಳ್ಳಬೇಕು. ಆದರೆ ನಿಮ್ಮ ಕಷ್ಟಕ್ಕೆ ಇಲ್ಲಿ ಪ್ರತಿಫಲ ಸಿಗುತ್ತದೆ..! ಕುದುರೆಮುಖದ ಸುತ್ತಮುತ್ತ ನಡೆಯುವ ಬಹುತೇಕ ಟ್ರೆಕ್ಕಿಂಗ್ಗಳು ಲೋಬೋ ಪ್ರದೇಶದಿಂದ ಆರಂಭವಾಗುತ್ತದೆ. ಅರಣ್ಯದ ಮಧ್ಯದಲ್ಲಿ ಈ ಪ್ರದೇಶವು ಕುದುರೆಮುಖ ಬೆಟ್ಟದ ಆರಂಭ. ಈ ಪ್ರದೇಶವು ಸಿಮೋನ್ ಲೋಬೋ ಎಂಬುವವರಿಗೆ ಸೇರಿದ್ದು. ಆದರೆ ಇವರಿಂದ ಸಾಕಷ್ಟು ಜನರಿಗೆ ಈ ಜಾಗ ಕೈಬದಲಾಗಿದೆಯಾದರೂ ಹೆಸರು ಮಾತ್ರ ಹಾಗೇ ಉಳಿದುಕೊಂಡಿದೆ. ನೀವು ಕಲ್ಲು ಬಂಡೆಗಳು, ನೀರ ತೊರೆಗಳನ್ನು ದಾಟಿ ಅರಣ್ಯದಲ್ಲಿ ಮುಂದೆ ಸಾಗಬೇಕಾಗುತ್ತದೆ.
ಇಲ್ಲಿನ ಪರಿಸರಕ್ಕೆ ಬಾಹ್ಯ ಶಕ್ತಿಗಳಿಂದ ದಾಳಿ ನಡೆದರೂ ಇಂದಿಗೂ ಕೂಡಾ ಇಲ್ಲಿನ ನಿಸರ್ಗ ಸೌಂದರ್ಯವನ್ನು ಕುದುರೆಮುಖ ಪ್ರದೇಶವು ಕಾಯ್ದುಕೊಂಡು ಬಂದಿದೆ. ಹೀಗಾಗಿ ಇಂದಿಗೂ ಉತ್ತಮ ಪ್ರೇಕ್ಷಣೀಯ ಸ್ಥಳವಾಗಿದೆ. ಒಂದು ಸುಂದರ ರಜಾದಿನಗಳನ್ನು ಕಳೆಯಲು ಉತ್ತಮ ಸ್ಥಳ ಮತ್ತು ಸಾಹಸಿ ಪ್ರವಾಸಕ್ಕೆ ಕೂಡಾ ಉತ್ತಮ ಸ್ಥಳ. ಸಾಹಸವನ್ನು ನೀವು ಇಷ್ಟಪಡುತ್ತೀರಿ ಅಂತಾದರೆ ಇದಕ್ಕಿಂತ ಉತ್ತಮ ಸ್ಥಳ ಮತ್ತೊಂದಿಲ್ಲ.
ಇಲ್ಲಿನ ಯಾವುದೇ ಚಟುವಟಿಕೆಗೂ ಕೂಡಾ ನೀವು ಪೂರ್ವ ಪರವಾನಗಿ ಪಡೆದುಕೊಳ್ಳಲೇಬೇಕು. ಇಲ್ಲಿನ ಸಾಹಸಿ ಟ್ರಿಪ್ ಪ್ರವಾಸಿಗರ ಉತ್ಸಾಹವನ್ನು ಹೆಚ್ಚಿಸಲಿದೆ ಮತ್ತು ದೇವಸ್ಥಾನಗಳನ್ನು ಭೇಟಿ ಮಾಡುವ ಅವಕಾಶ ಕೂಡಾ ಇಲ್ಲಿ ಲಭ್ಯವಾಗಲಿದೆ.