’ಹಸಿರು ವಿಶ್ವದ ಅವಿಭಾಜ್ಯ ಬಣ್ಣ, ನೀರು ವಿಶ್ವದ ಸಮೃದ್ಧಿಯ ಸಂಕೇತ. ಇವುಗಳನ್ನು ಅನುಭವಿಸಿದ ನಾನೇ ಧನ್ಯ’ ಮನುಷ್ಯ ಅದೆಷ್ಟೇ ಪ್ರಕೃತಿಯನ್ನು ಹಾಳುಗೆಡುವುತ್ತಿದ್ದರೂ ಸ್ವಚ್ಚಂಧ ಸರೋವರ ಸಿರಿಯ ರೂಪದಲ್ಲಿ ನಮಗೆ ನೈಸರ್ಗಿಕ ಸೌಂದರ್ಯವನ್ನು ಸವಿಯುವ ಭಾಗ್ಯ ಇನ್ನೂ ಉಳಿದಿದೆ! ಏಕೆಂದರೆ ಇಂದು ನೀರಿನ ಮೂಲಗಳಾದ ಹಲವಾರು ಕೆರೆ ತೊರೆಗಳು ಇರುವ ಜಾಗದಲ್ಲಿ ಇಲ್ಲೇನಿತ್ತು ಎಂದು ಕೇಳುವ ಪರಿಸ್ಥಿತಿಗೆ ಬಂದು ತಲುಪಿದ್ದೇವೆ. ಆದರೆ ಸೊಬಗಿನಿಂದ ತನಗೆ ತಾನೇ ನಾಚಿ ನಿತಂತೆ ಕಾಣುವ ಕೆಲವು ಪ್ರಕೃತಿ ವಿಸ್ಮಯಗಳನ್ನು ಅದ್ಭುತಗಳನ್ನು ನೋಡಿದರೆ ನಾವು ವಸುಂಧರೆಯನ್ನು ಹಾಳುಮಾಡುತ್ತಲೇ ಇಲ್ಲ ಎಂದು ಭಾಸವಾಗಿಬಿಡುತ್ತದೆ. ಇಂತಹ ಸ್ಥಳಗಳಿಗೆ ನೀವೆಷ್ಟು ಬಾರಿ ಭೇಟಿ ನೀಡಿದ್ದೀರಿ?
ಭಾರತ ಪ್ರವಾಸಿ ತಾಣಗಳ ತವರೂರು. ಇಲ್ಲಿನ ಯಾವುದೇ ರಾಜ್ಯಕ್ಕೆ ಭೇಟಿಕೊಟ್ಟರೂ ಅಲ್ಲಿ ಅಚ್ಚರಿ ಮೂಡಿಸುವಂತಹ ಹತ್ತಾರು ವೈಚಿತ್ರ್ಯಗಳನ್ನು ತನ್ನ ಒಡಲಲ್ಲಿ ಅಡಗಿಸಿಕೊಂಡಿರುವ ಪ್ರದೇಶಗಳನ್ನು ಕಾಣಬಹುದು. ಒಂದೊಂದು ರಾಜ್ಯವೂ ವಿಶೇಷ. ಒಂದೊಂದು ಜಾಗವೂ ವಿಶಿಷ್ಟ. ಇಂತಹ ಸ್ಥಳಗಳಿಗೆ ಭೇಟಿಕೊಟ್ಟು ಅಲ್ಲಿನ ಸೌಂದರ್ಯವನ್ನು ಸವಿದವರಿಗೆ ಮಾತ್ರ ಗೊತ್ತು ಅಲ್ಲಿನ ಮಹತ್ವ. ಇಂತಿಪ್ಪ ಸ್ಥಳಗಳಿಗೇ ನೀವೂ ಒಮ್ಮೆ ಹೋಗಲು ನಿರ್ಧರಿಸಿದಿರಿ ತಾನೆ?ಇಂತಹ ಹಲವಾರು ಅತ್ಯಾಕರ್ಷಕ ತಾಣಗಳು ದಕ್ಷಿಣ ಭಾರತದಲ್ಲೂ ಇವೆ. ಕೇರಳ ಪ್ರವಾಸೋದ್ಯಮಕ್ಕೆ ಆದ್ಯತೆ ಕೊಡುವ ರಾಜ್ಯಗಳಲ್ಲಿ ಮುಂದಿದೆ. ಭಾರತದ ದಕ್ಷಿಣ ಭಾಗದಲ್ಲಿ ಕೇರಳ ರಾಜ್ಯವಿದೆ. ಕರಾವಳಿ ತೀರಗಳನ್ನೊಳಗೊಂಡ ಕೇರಳ ರಾಜ್ಯವು ಅತ್ಯಂತ ಪ್ರಶಾಂತವಾದ ಸಮೃದ್ಧ ನೈಸರ್ಗಿಕ ಪರಿಸರವನ್ನು ಹೊಂದಿರುವ ಪ್ರದೇಶ. ಇಲ್ಲಿ ಹಲವಾದು ಪುರಾತನ ಧಾರ್ಮಿಕ ಪರಂಪರೆಯನ್ನು ಹೇಳುವಂತಹ ಕಟ್ಟಡಗಳು, ದೇವಾಲಯಗಳು, ಗುಹೆ ಹಾಗೂ ಎಲ್ಲದಕ್ಕಿಂತ ಹೆಚ್ಚಾಗಿ ಜನರನ್ನು ಕೈ ಬೀಸಿ ಕರೆಯುವ ತೆಂಗು ಕಂಗುಗಳಿಂದ ಕಂಗೊಳಿಸುವ ಪ್ರಶಾಂತವಾದ ಕಡಲ ತೀರಗಳು ಇರುವುದನ್ನು ಕಾಣಬಹುದು. ಆದ್ದರಿಂದಲೇ ಕೇರಳವನ್ನು ‘God’s own country’ (ದೇವರುಗಳ/ದೇವತೆಗಳ ನಾಡು) ಎಂದೇ ಕರೆಯಲಾಗುತ್ತದೆ. ಆಧುನಿಕತೆಯ ನೆರಳು ಹೆಚ್ಚಾಗಿ ಪ್ರಭಾವ ಬೀರದ ಅನೇಕ ಹಳ್ಳಿಗಳು ಈಗಲೂ ಪ್ರವಾಸಿಗರ ಕಣ್ಮನ ತಣಿಸುತ್ತವೆ. ಕೇರಳದಲ್ಲಿರುವ ಪ್ರತಿಯೊಂದು ಸ್ಥಳವೂ ಅನೇಕಾನೇಕ ಚರಿತ್ರೆಗಳನ್ನು, ಕುತೂಹಲಗಳನ್ನು ತನ್ನಲ್ಲಿ ಅಡಗಿಸಿಕೊಂಡಿದೆ. ಇಲ್ಲಿನ ಧಾರ್ಮಿಕ ಕಟ್ಟಡಗಳಿಂದ ಹಿಡಿದು ಬೋಟಿಂಗ್ ವರೆಗೆ ಎಲ್ಲವೂ ಹೊಸ ಅನುಭವವನ್ನು ಕೊಡುತ್ತವೆ. ಮತ್ತೆ ಮತ್ತೆ ಬರಬೇಕೆನಿಸುವಷ್ಟು ರೋಮಾಂಚನಕಾರಿಯಾಗಿರುತ್ತವೆ.
ಕೇರಳ ರಾಜ್ಯಕ್ಕೆ ಎಲ್ಲದಕ್ಕಿಂತ ಹೆಚ್ಚಾಗಿ ಪ್ರವಾಸಿಗರು ಬರುವುದೇ ಇಲ್ಲಿನ ಕಡಲ ತೀರಗಳನ್ನು ನೋಡಲು. ಕುಟುಂಬ ಸಮೇತರಾಗಿ ಹೋದರೆ ಕೌಟುಂಬಿಕ ಸಂತೋಷವನ್ನು, ಹೊಸದಾಗಿ ಮದುವೆಯಾದ ದಂಪತಿಗಳಿಗೆ ಬೆಚ್ಚನೆಯ ಅನುಭವವನ್ನು, ಸ್ನೇಹಿತರಿಗೆ ಮಸ್ತಿ ಮೋಜು ಮಾಡಲು ಅನುಕೂಲಕ ವಾತಾವರಣವನ್ನು ಹೊಂದಿರುವುದು ಕೊವಲಂ ಕಡಲ ತೀರಗಳು ಮಾತ್ರ! ಎಂದರೆ ತಪ್ಪಾಗಲಾರದು.
ಎಲ್ಲರಿಗೂ ಚಿರಪರಿಚಿತವಿರುವ ಪ್ರಸಿದ್ಧ ಕೋಲವಂ ನದಿಯ ತೀರ, ಕೇರಳದ ರಾಜಧಾನಿಯಾದ ತಿರುವುನಂತಪುರಂ ಬಳಿ ಇದೆ. ದೇಶದ ಯಾವುದೇ ಭಾಗದಿಂದ ತಿರುವನಂತಪುರಂ ಗೆ ತಲುಪುದು ಸುಲಭ. ಏಕೆಂದರೆ ತಿರುವವಂತಪುರಂ ನ ತ್ರಿವೇಂದ್ರಂ ನಲ್ಲಿ ವಿಮಾನ ನಿಲ್ದಾಣ, ಬಸ್ ಟ್ರೈನ್ ಎಲ್ಲಾ ಸೌಲಭ್ಯಗಳಿರುವುದರಿಂದ ಕೊವಲಂ ತಲುಪುದು ಕಷ್ಟದ ಮಾತೆನಲ್ಲ. ಕೊವಲಂ ಬೀಚ್ ಪಟ್ಟಣವು ಅರೇಬಿಯನ್ ಸಮುದ್ರಕ್ಕೆ ಮುಖ ಮಾಡಿ ನಿಂತಿದೆ. ಕೇರಳದ ಮುಖ್ಯ ನಗರ ತಿರುವನಂತಪುರಂ ನಿಂದ ಬಹಳ ಹತ್ತಿರದಲ್ಲಿ ಕೊವಲಂ ನದಿ ತೀರವನ್ನು ಕಾಣಬಹುದು. ನಗರದ ಕೇಂದ್ರ ಭಾಗದಿಂದ ಕೇವಲ 16 ಕೀ.ಮಿ ದೂರದಲ್ಲಿದೆ ಕಣ್ಮನ ತಣಿಸುವ ಅತ್ಯಂತ ಪ್ರಶಾಂತವಾದ ಕೊವಲಂ ಕಡಲ ತೀರ! ಮತ್ತೆ ಮತ್ತೆ ನೋಡಬೇಕೆನ್ನುವ ಸೊಬಗಿನ ತಾಣ.
ಅತ್ಯಂತ ಅರ್ಥವತ್ತಾದ ’ಕೊವಲಂ’ ಎಂಬ ಪದ ಮಲಯಾಳಂ ಭಾಷೆಯಿಂದ ವ್ಯುತ್ಪತ್ತಿ ಯಾಗಿದ್ದು, ಈ ಪದದ ಅರ್ಥ ‘ತೆಂಗಿನ ಕುರುಚಲು ಕಾಡು’ (ಅಧಿಕ ತೆಂಗಿನ ಮರಗಳು ಇಲ್ಲಿ ಬೆಳೆಯುತ್ತವೆ) ಎಂಬುದು. ಈ ಪಟ್ಟಣದಲ್ಲಿ ಸಾಕಷ್ಟು ತೆಂಗಿನ ತೋಪುಗಳು ಇರುವುದರಿಂದ ಈ ಹೆಸರು ಅತ್ಯಂತ ಸೂಕ್ತವೆನಿಸಿದೆ. ’ಭೂಮಿಯ ಮೇಲಿನ ಸ್ವರ್ಗ’ ಎಂದು ಕಾಶ್ಮೀರವನ್ನು ಗುರುತಿಸುವ ಹಾಗೆ ’ದಕ್ಷಿಣದ ಸ್ವರ್ಗ” ಎಂದು ಕೊವಲಂ ಪ್ರದೇಶವನ್ನು ಕರೆಯಲಾಗುತ್ತದೆ. ಅಷ್ಟೂಂದು ಲಾವಣ್ಯವತಿ ಕೊವಲಂ ಕಡಲ ತೀರ!
ಕೊವಲಂ ಕಡಲ ತೀರಗಳ ಸಾಂಸ್ಕೃತಿಕ ಪರಂಪರೆ
ರೋಚಕವಾದ ಇತಿಹಾಸವನ್ನು ಹೊಂದಿರುವ ಕೊವಲಂ ಪಟ್ಟಣಕ್ಕೆ, ಇತಿಹಾಸ ಪ್ರೀಯರು, ಉತ್ಸಾಹಿಗಳು, ಪ್ರವಾಸಿಗಳು ದೊಡ್ಡ ಸಂಖ್ಯೆಯಲ್ಲಿ ಧಾವಿಸುತ್ತಾರೆ. ಈ ಸ್ಥಳದಲ್ಲಿ ಸಮಯ ಕಳೆಯುವುದಕ್ಕಾಗಿ ಹಂಬಲಿಸುತ್ತಾರೆ. ಕೇವಲ ದೇಶಿಯದು ಮತ್ರವಲ್ಲದೆ ವಿದೇಶೀಯರೂ ಕೂಡಾ ದೊಡ್ಡ ಸಂಖ್ಯೆಯಲ್ಲಿ ಕಡಲ ತೀರವನ್ನು ನೋಡುವುದಕ್ಕಾಗಿ ಸಂಶೋಧನೆಗಳಿಗಾಯೂ ಬರುತ್ತಾರೆ. ಕೊವಲಂ ಭಾಗದಲ್ಲಿ ತಿರುವಾಂಕೂರಿನ ಮನೆತನಗಳು ಆಡಳಿತ ನಡೆಸುತ್ತಿದ್ದರು ಎಂಬುದನ್ನು ಚರಿತ್ರೆಯ ಪುಟಗಳಲ್ಲಿಯೂ ಕಾಣಬಹುದು. ಅಲ್ಲದೇ ಈ ಪ್ರದೇಶಗಳ ಬಗ್ಗೆ ಅನೇಕಾನೇಕ ಕಥೆಗಳೂ ಕೇಳಿಬರುತ್ತಿವೆ. ಆಸಮಯದಲ್ಲಿ, ತಿರುವಾಂಕೂರಿನ ರಾಜ ಪ್ರತಿನಿಧಿ ಮಹಾರಾಣಿ ಸೇರು ಲಕ್ಷ್ಮೀ ಬಾಯಿ ಆಡಳಿತ ನಡೆಸುತ್ತಿದ್ದು, ತನ್ನ ಅಗತ್ಯಕ್ಕೆ ಬೇಕಾದ ಹಾಗೆ ಬೀಚ್ / ನದಿಯ ತೀರ, ವಿಹಾರ ಧಾಮ / ರೆಸಾಲ್ಟ್ ಗಳನ್ನು ನಿರ್ಮಿಸಿಕೊಂಡಿದ್ದಳು. ಇವೆಲವೂ ನಡೆದಿದ್ದು ಸರಿ ಸುಮಾರು 1920 ರಲ್ಲಿ. ಇದೇ ಮುಂದುವರಿದು ಈಗಲೂ ನದಿ ತೀರ, ವಿಹಾರ ಧಾಮಗಳಿಂದ ಅಲಂಕೃತಗೊಂಡು ’ಪ್ರಶಾಂತ ಕೋಟೆ’ ಎಂದೇ ಕರೆಯಲ್ಪಡುವ ಕೊವಲಂ ಪ್ರವಾಸಿಗರರನ್ನು ಕೈಬೀಸಿ ಕರೆಯುತ್ತಿದೆ.
ಕೊವಲಂ ಕಡಲ ತೀರದ ಇತಿಹಾಸ ಹುಡುಕಿದಷ್ಟು ಆಳವಾಗುತ್ತಾ ಹೊಸ ಹೊಸ ವಿಚಾರಗಳನ್ನು ಹೊರಹಾಕುತ್ತಾ ಹೋಗುತ್ತದೆ. ಇನ್ನೊಂದು ಮಾಹಿತಿಯ ಪ್ರಕಾರ ತಿರುವಾಂಕೂರಿನ ರಾಣಿಯ ಸೋದರಳಿಯ ಕೊವಲಂ ಕಡಲ ತೀರ ಪಟ್ಟಣಕ್ಕೆ ಆಗಾಗ ಭೇಟಿ ನಿಡುತ್ತಿದ್ದವಂತೆ. ಅಲ್ಲದೇ ಇಲ್ಲಿನ್ ಸ್ಥಳೀಯ ಕಲೆ ಮತ್ತು ಕೃತಿ / ಸಂಸ್ಕೃತಿಯನ್ನು ಪೋಷಿಸುತ್ತಿದ್ದ ಎನ್ನಲಾಗುತ್ತದೆ. ಕೊವಲಂ ಹೆಚ್ಚು ಜನಪ್ರಿಯತೆಯನ್ನು ಗಳಿಸಲು, ಅದೊಂದು ಜೀವಂತ ಸೌಂಧರ್ಯವನ್ನು ಹೊಂದಲು ತಿರುವಾಂಕೂರಿಗೆ ಆಗಮಿಸಿದ ಯುರೋಪಿಯನ್ ನಿಂದ ಬಂದ ಜನರು/ ಅತಿಥಿಗಳೇ ಪ್ರಮುಖ ಕಾರಣ ಎಂದರೆ ಅತಿಶಯೋಕ್ತಿಯಲ್ಲ. 1930 ರ ನಂತರ ಕೊವಲಂ ಪಟ್ಟಣ ಕಡಲ ತೀರವಾಗಿ ಯುರೋಪಿಯನ್ ಪ್ರವಾಸಿಗರನ್ನು ಆಕರ್ಷಿಸುತ್ತಾ ತನ್ನ ಜನಪ್ರಿಯತೆಯನ್ನು ಹೆಚ್ಚಿಸಿಕೊಂಡಿತು!
1930 ರಲ್ಲಿಯೇ ಕೊವಲಂ ಜನಪ್ರಿಯತೆಯನ್ನು ಗಳಿಸಿದ್ದರೂ ಅದು ವಿಶ್ವ ಮಟ್ಟದಲ್ಲಿ ಪ್ರಾಮುಖ್ಯತೆಯನ್ನು ಕಂಡಿದ್ದು ಹಿಪ್ಪಿಗಳ ಆಗಮನದ ನಂತರವಷ್ಟೇ. ಸುಮಾರು 1970 ರ ಹೊತ್ತಿಗೆ ಕೊವಲಂ ಪ್ರದೇಶವನ್ನು ತಮ್ಮ ಚಟುವಟಿಕೆ ಕೇಂದ್ರವನ್ನಾಗಿ ಮಾಡಿಕೊಳ್ಳಲು ಹಿಪ್ಪಿಗಳು ನಿರ್ಧರಿಸಿದರು. ಆರಂಭದಲ್ಲಿ ಶ್ರೀಲಂಕಾದ ಸಿಲೋನ್ ಮಾರ್ಗವಾಗಿ ಸಾಕಷ್ಟು ಸಂಖ್ಯೆಯಲ್ಲಿ ಹಿಪ್ಪಿಗಳು ಕೊವಲಂ ಪಟ್ಟಣಕ್ಕೆ ಬಂದರು. ಇದಾದ ನಂತರ ಕೆಲವೇ ಸಮಯದಲ್ಲಿ ಕೇವಲ ಸಣ್ಣ ಮೀನುಗಾರಿಕಾ ಪ್ರದೇಶವಾಗಿದ್ದ ಕೊವಲಂ ಪಟ್ಟಣ ಪ್ರವಾಸಿ ತಾಣವಾಗಿ ಗುರುತಿಸಲ್ಪಟ್ಟಿತು. ಆಗಿನಿಂದ ಈಗಿನವರೆಗೂ ಪ್ರತೀ ವರ್ಷ ಅಥವಾ ಪರ್ಯಾಯ ವರ್ಷಗಳಲ್ಲಿ ಅಪಾರ ಪ್ರಮಾಣದಲ್ಲಿ ಯುರೋಪಿಯನ್, ಇಸ್ರೇಲ್ ಹಾಗೂ ಇತರ ಮೂಲಗಳಿಂದ ಪ್ರವಾಸಿಗರು ಕೊವಲಂ ಕಡಲ ಕಿನಾರೆಯ ಅಂದವನ್ನು ಸವಿಯಲು ಬರುತ್ತಾರೆ!
ಕಡಲ ತೀರಗಳ ನಗರ - ಕೊವಲಂ
ಕೊವಲಂ ಪಟ್ಟಣದ ಅಗಾಧ ಪ್ರಮಾಣದ ಪ್ರಾಕೃತಿಕ ಸೌಂದರ್ಯ ನೆಲೆಸಿರುವುದು / ಅಡಗಿರುವುದು ಕಡಲ ತೀರದಲ್ಲೆ. ಬಿಸಿಯಾದ ಮರಳಿನ ಮೇಲೆ ಸಮುದ್ರದಿಂದ ಮೇಲೆಳುವ ಬೃಹತ್ ಅಲೆಗಳನ್ನು ನೋಡುವುದೇ ಒಂದು ಖುಷಿ. ಹಾಗೂ ಜೀವನದಲ್ಲಿ ಒಮ್ಮೆಯಾದರೂ ಈ ಅನುಭವಗಳನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಲೇ ಬೇಕು. ಏಕೆಂದರೆ ನದಿ ತೀರದಲ್ಲಿನ ಅಮೋಘತೆಯನ್ನು ಸ್ವತಃ ಅನುಭವಿಸಿಯೇ ನೋಡಬೇಕು. ಪ್ರಕೃತಿದತ್ತವಾಗಿ ಪಡೆದುಕೊಂಡಿರುವ ಇಂತಹ ಸುಂದರ ಸ್ಥಳಗಳ ಬಗ್ಗೆ ಕವಿಗೂ ವರ್ಣಿಸುವುದು ಕಷ್ಟವೆನಿಸಬಹುದೇನೋ? ಒಂದು ವಸ್ತುವಿನ ’ಸೌಂದರ್ಯ ಅದೇ ಶಾಶ್ವತವಾದ ಸಂತೋಷ’ ಎಂಬ ಪ್ರಸಿದ್ಧ ಮಾತುಗಳಂತೆ ನಮ್ಮ ಮನಸ್ಸಿಗೆ ಶಾಶ್ವತ ಸಂತೋಷ ಸಿಗುವುದು ಕೊವಲಂ ನಂತಹ ನದಿ ತೀರಗಳಿಗೆ ಮೈಮರೆತು ಒಂದಿಷ್ಟು ಹೊತ್ತು ಕಳೆದಾಗಲೇ! ಹಚ್ಚಹಸಿರಿನ ವಾತಾವರಣ ಹಾಗೂ ಅದರ ಜೊತೆಗೆ ಪ್ರಶಾಂತವಾದ ಸ್ವಚ್ಚಂಧ ನೀಲ ಆಕಾಶ ಇವುಗಳ ಸಂಯೋಜಿತ ಸೊಬಗನ್ನು ಸ್ವತಃ ಅನುಭವಿಸುವುದನ್ನು ಬಿಟ್ಟು ಮತ್ತೇನು ಬೇಕು ನಮ್ಮ ಹೃದಯ, ಮನಸ್ಸು ಸದಾ ಸಂತೋಷದಿಂದಿರಲು? ನಿಶ್ಚಿಂತರಾಗಿರಲು?
’ಕಡಲುಗಳ ನಗರ’ ಕೊವಲಂ ನಲ್ಲಿ ಪ್ರಮುಖವಾಗಿ 3 ಬೀಚ್ / ಕಡಲ ತೀರಗಳಿವೆ. ಅವುಗಳೆಂದರೆ ಲೈಟ್ ಹೌಸ್ ಬೀಚ್, ಹವಾಹ್ ಬೀಚ್ ಹಾಗೂ ಸಮುದ್ರ ಬೀಚ್.
ಜಗತ್ತಿನ ಸಕಲ ಸೌಂದರ್ಯವನ್ನೂ ತನ್ನೊಳಗೆ ಅಡಗಿಸಿಕೊಂಡಿರುವಂತೆ ಭಾಸವಾಗುವ ಈ ಕಡಲ ತೀರಗಳಿಗೆ ಮುಂಜಾನೆಯ ಹೊತ್ತು ಸೂರ್ಯೋದಯವನ್ನು ನೋಡಲು ಹಾಗೂ ಮುಸ್ಸಂಜೆ ಸೂರ್ಯಾಸ್ತವನ್ನು ನೋಡಲು ಹೋಗುವುದು ಪ್ರಶಸ್ತವಾದ ಸಮಯ. ಕೊವಲಂ ಪಟ್ಟಣದಲ್ಲಿದುವ ಕಡಲ ತೀರಗಳ ಪ್ರಮುಖ ಆಕರ್ಷಣೆ ಹಾಗೂ ವಿಶಿಷ್ಟತೆಯೆಂದರೆ ಇಲ್ಲಿನ ತೀರ ಪ್ರದೇಶಗಳಲ್ಲಿರುವ ಮರಳಿನ ಬಣ್ಣ ಸಾಮಾನ್ಯ ಕಡಲ ತೀರಗಳಿಗಿಂತ ವಿಭಿನ್ನವಾಗಿದೆ. ಇಲ್ಲಿನ ಮರಳು ಕೊಂಚ ಕಪ್ಪು ವರ್ಣವನ್ನು ಹೊಂದಿದೆ. ಈ ಮರಳಿನಲ್ಲಿ ಮೊನಾಜೈಟ್ ಹಾಗೂ ಕಬ್ಬಿಣ ಮತ್ತು ಟೈಟೇನಿಯಂ ಮಿಶ್ರಣವಾದ ಇಲ್ಮನೈಟ್ ಗಳು ಕರಗಿರುವುದರಿಂದ ಇಲ್ಲಿನ ಮರಳು ಕಪ್ಪು ಬಣ್ಣವನ್ನು ಹೊಂದಿದೆ ಎನ್ನಲಾಗಿದೆ.
ಈ ಮುರೂ ಕಡಲ ತೀರಗಳು ಒಂದಕ್ಕೊಂದು ಹೊಂದಿಕೊಂಡಂತೆ ಇವೆ. ಹಾಗೂ ಸುಮಾರು 17 ಕೀ.ಮಿ ಕರಾವಳಿ ಪ್ರದೇಶವನ್ನು ವ್ಯಾಪಿಸಿವೆ. ಬೃಹತ್ ಬಂಡೆಗಳು ಈ ಮೂರು ಕಡಲುಗಳನ್ನು ಬೇರ್ಪಡಿಸಿವೆ. ಇಲ್ಲಿನ ಬಂಡೆಗಳಲ್ಲಿ ಪಾಚಿಗಳು ಬೆಳೆದಿರುತ್ತಿದ್ದು ಬಹಳಷ್ಟು ಜಾರುತ್ತವೆ ಆದ್ದರಿಂದ ಒಂದು ಬಂಡೆಯಿಂದ ಇನ್ನೊಂದಕ್ಕೆ ಜಿಗಿಯುವಾಗ ಬಹಳ ಎಚ್ಚರಿಕೆಯಿಂದಿರಬೇಕು. ಏಕೆಂದರೆ ಕಡಲಿನ ಕೆಲವೆಡೆ ಹೆಚ್ಚು ಸುಳಿಗಳು ಇರುವುದರಿಂದ ಬಿದ್ದರೆ ದುರಂತಗಳು ಸಂಭವಿಸಬಹುದು. ಈ ಮೂರು ಬೀಚ್ ಗಳು ಬೇರೆ ಬೇರೆ ವೈಶಿಷ್ಟ್ಯಗಳನ್ನು ಹೊಂದಿದ್ದು ನೀವು ಭೇಟಿ ನೀಡುವಾಗ ಮುರೂ ಕಡಲ ತೀರಕ್ಕೆ ಹೋಗಲು ಅನುಮತಿಯನ್ನು ಪಡೆದುಕೊಳ್ಳಬೇಕು.
ಕೊವಲಂ ಈ ಮೂರು ಬೀಚ್ ಗಳಲ್ಲಿ ಲೈಟ್ ಹೌಸ್ ಬೀಚ್ ದೊಡ್ಡದಾದ ಬೀಚ್ ಆಗಿದೆ. ಈ ಬೀಚ್ ಗೆ ಲೈಟ್ ಹೌಸ್ ಎಂಬ ಹೆಸರು ಬರಲು ಕಾರಣವೆನೆಂದರೆ, ಇದು ಕುರುಂಕಲ್ (Kurumkal) ಪರ್ವತದ 35 ಮೀಟರ್ ಎತ್ತರದಲ್ಲಿದ್ದು ಸಮುದ್ರದ ಸಕಲ ಸೌಂದರ್ಯವನ್ನು ಲೈಟ್ ಹೌಸ್ ಮೇಲೆ ನಿಂತೇ ನೋಡಬಹುದು. ಹವಾಯಿ ಬೀಚ್ ಎರಡನೇ ದೊಡ್ಡ ಬೀಚ್ ಆಗಿದೆ. ಈ ಬೀಚ್ ನಲ್ಲಿ ತುಂಡು ಬಟ್ಟೆಯಲ್ಲಿ ಸನ್ ಬಾತ್(ಸೂರ್ಯ ಸ್ನಾನ) ಮಾಡುವವರನ್ನು ಕಾಣಬಹುದು. ಅದರಲ್ಲೂ ಯೂರೋಪಿಯನ್ ಮಹಿಳೆಯರು ಬಟ್ಟೆಯಿಲ್ಲದೆ ಬೀಚ್ ಬದಿಯಲ್ಲಿ ಸನ್ ಬಾತ್ ತೆಗೆದುಕೊಳ್ಳುತ್ತಾ ಇರುತ್ತಾರೆ. ಇವುಗಳಲ್ಲಿ ಮೂರನೇ ಬೀಚ್ ಸಮುದ್ರ ಬೀಚ್. ಇದು ಕರಾವಳಿ ತೀರದ ಉತ್ತರ ಭಾಗದಲ್ಲಿದೆ. ಈ ಕಿನಾರೆಯ ಹೆಸರು ಇಲ್ಲಿನ ಸ್ಥಳೀಯ ಹೆಸರಾಗಿದ್ದು ಮೊದಲು ಇಲ್ಲಿಗೆ ಆಗಮಿಸಿದವರು ಈ ಹೆಸರನ್ನು ಕೊಟ್ಟಿದ್ದಾರೆಂದು ನಂಬಲಾಗಿದೆ. ಆದರೆ ಈ ಬೀಚ್ ನಲ್ಲಿ ಉಳಿದೆರಡು ಬೀಚ್ ನಲ್ಲಿ ಕಂಡುಬರುವಂತೆ ಹೆಚ್ಚಿನ ಚಟುಚಟಿಕೆಗಳು ಕಂಡು ಬರುವುದಿಲ್ಲ. ಹೊರಗಿನವರ ಚಟುವಟಿಕೆಗಳು ಹೆಚ್ಚು ಕಂಡು ಬರುವುದಿಲ್ಲವಾದ್ದರಿಂದ ಸ್ಥಳೀಯ ಮೀನುಗಾರರು ಮೀನು ಹಿಡಿಯಲು ಈ ಕಡೆಗೆ ಬರುತ್ತಾರೆ.
ಈ ಮೂರು ಬೀಚ್ ಗಳನ್ನು ಹೊರತುಪಡಿಸಿದರೆ ಕೋವಲಮ್ ಕರಾವಳಿ ತೀರದಲ್ಲಿ ಮತ್ತೊಂದು ಬೀಚ್ ಕೂಡ ಕಂಡು ಬರುತ್ತದೆ.ಅದರ ಹೆಸರು ಅಶೋಕ ಬೀಚ್. ಈ ಬೀಚ್ ನಲ್ಲಿ ಸಮುದ್ರ ಬೀಚ್ ನಂತೆ ಹೊರಗಿನವರ ಓಡಾಟ ಇರುವುದಿಲ್ಲ. . ಈ ಭಾಗಕ್ಕೆ ಸ್ವಲ್ಪ ಏಕಾಂತ ಬೇಕೆನ್ನುವ, ಹೊಸದಾಗಿ ಮದುವೆಯಾದ ದಂಪತಿಗಳು, ಪ್ರೇಮಿಗಳು ಬರುತ್ತಾರಷ್ಟೆ. ಉಳಿದಂತೆ ಇತರ ಪ್ರವಾಸಿಗರು ಲೈಟ್ ಹೌಸ್ ಗಳಿಗೆ ಭೇಟಿಯಿತ್ತಷ್ಟು ಸಂಖ್ಯೆಯಲ್ಲಿ ಇಲ್ಲಿಗೆ ಆಗಮಿಸುವುದಿಲ್ಲ. ಸಣ್ಣ ಸಮುದ್ರ ಅಲೆಗಳನ್ನು ಹೊರತುಪಡಿಸಿದರೆ ಇಲ್ಲಿ ಅಂತಹ ಅಮೋಘತೆಗಳೇನು ಇಲ್ಲ. ಆದ್ದರಿಂದ ಪ್ರವಾಸಿಗರು ಈ ಕಡೆ ಸುಳಿಯುವುದು ಸ್ವಲ್ಪ ಕಡಿಮೆಯೆ. ಸೆಪ್ಟಂಬರ್ ನಿಂದ ಮೇ ವರೆಗೆ ಕಡಲ ತೀರಗಳಿಗೆ ಪೆಅವಾಸಿಗಳು ಬರುವ ಸಂಖ್ಯೆ ತುಸು ಜಾಸ್ತಿಯೇ ಎನ್ನಬಹುದು. ಇನ್ನುಳಿದಂತೆ ಮಾನ್ಸೂನ್ ಮತ್ತಿತರ ಕಾರಣಗಳಿಂದಾಗಿ ಬೇರೆ ಸಮಯ ಪ್ರವಾಸಕ್ಕೆ ಪ್ರಶಸ್ತವಾದ ಸಮಯವಲ್ಲ.