ಚೆರಮನ ಜುಮಾ ಮಸೀದಿಯು ಕೊಡುಂಗಲ್ಲೂರಿನ ಅತ್ಯಂತ ಪ್ರಸಿದ್ಧ ಧಾರ್ಮಿಕ ಕೇಂದ್ರಗಳಲ್ಲಿ ಒಂದಾಗಿದೆ. ಈ ಮಸೀದಿಯನ್ನು ಕ್ರಿ.ಶ 629 ರಲ್ಲಿ ಮಲಿಕ್ ಬಿನ್ ದೀನರ್ ಎಂಬಾತನು ನಿರ್ಮಿಸಿದನು. ಈ ಮಸೀದಿಯು ಭಾರತದ ಅತ್ಯಂತ ಪ್ರಾಚೀನ ಮಸೀದಿಯೆಂಬ ಕೀರ್ತಿಗೆ ಭಾಜನವಾಗಿದೆ. ಅಲ್ಲದೆ ಪ್ರಪಂಚದ ಎರಡನೆ ಅತ್ಯಂತ ಹಳೆಯ ಮಸೀದಿಯೆಂಬ ಕೀರ್ತಿಯು ಇದಕ್ಕೆ ದಕ್ಕಿದೆ. ಇತಿಹಾಸದ ಪ್ರಕಾರ ಕ್ರಿ.ಶ 1341ರಲ್ಲಿ ಬಂದ ಪ್ರವಾಹವು ಈ ಮಸೀದಿಯನ್ನು ಬಹುತೇಕ ನಾಶಗೊಳಿಸಿತು. ಇಂದು ನಾವು ನೋಡುವ ಚೆರಮನ್ ಜುಮಾ ಮಸೀದಿಯು ಜೀರ್ಣೋದ್ಧಾರವಾಗಿರುವಂತಹುದಾಗಿದೆ.
ಈ ಮಸೀದಿಯ ವಾಸ್ತುಶಿಲ್ಪವು ಗಮನ ಸೆಳೆಯುವಂತಿದೆ. ಇದರ ನಿರ್ಮಾಣದ ಶೈಲಿ ಮತ್ತು ವಿನ್ಯಾಸದಲ್ಲಿ ಹಿಂದೂ ದೇವಾಲಯಗಳ ಮಾದರಿಯನ್ನು ಅನುಸರಿಸಿರುವುದನ್ನು ನಾವು ಕಾಣಬಹುದು. ಈ ಮಸೀದಿಯ ಮಧ್ಯಭಾಗದಲ್ಲಿ ಒಂದು ನಂದಾದೀಪವನ್ನು ಉರಿಸಲಾಗುತ್ತಿದೆ. ಹಬ್ಬಹರಿದಿನಗಳಲ್ಲಿ ಹಲವು ಧರ್ಮದ ಜನರು ಧರ್ಮಬೇಧವಿಲ್ಲದೆ ಇಲ್ಲಿಗೆ ಬಂದು ಇಲ್ಲಿನ ನಂದಾದೀಪಗಳಿಗೆ ಎಣ್ಣೆಯನ್ನು ಸುರಿಯುತ್ತಾರೆ.
ಈ ಮಸೀದಿಯಲ್ಲಿ ಕಂಚಿನ ಎಣ್ಣೆ ದೀಪಗಳನ್ನು ಇಟ್ಟಿದ್ದಾರೆ. ಇವುಗಳು ಈ ಮಸೀದಿಯ ವಾಸ್ತುಶಿಲ್ಪದ ಅಂದವನ್ನು ಹೆಚ್ಚುಗೊಳಿಸಿವೆ. ಇಲ್ಲಿ ಒಂದು ರೋಸ್ ವುಡ್ಡಿನ ಪ್ರವಚನ ಪೀಠವನ್ನು ಇಡಲಾಗಿದ್ದು, ಇದು ತನ್ನ ಅಧ್ಬುತವಾದ ಕೆತ್ತನೆಗಳಿಂದ ಗಮನ ಸೆಳೆಯುತ್ತದೆ. ಇಲ್ಲಿರುವ ಬಿಳಿಯ ಅಮೃತಶಿಲೆಯ ಒಂದು ಗಟ್ಟಿಯನ್ನು ಮೆಕ್ಕಾದಿಂದ ತಂದು ಈ ಮಸೀದಿಯಲ್ಲಿ ಇಡಲಾಗಿದೆ ಎಂದು ನಂಬಲಾಗಿದೆ.
ಚೆರಮನ್ ಜುಮಾ ಮಸೀದಿಯು ಭಾರತದ ಇಸ್ಲಾಂ ಇತಿಹಾಸದಲ್ಲಿ ಒಂದು ಮಹತ್ವಪೂರ್ಣ ಅಂಶವಾಗಿ ಗುರುತಿಸಿಕೊಂಡಿದೆ. ಕೊಡುಂಗನಲ್ಲೂರಿಗೆ ಹೋಗುವ ಪ್ರತಿಯೊಬ್ಬ ಪ್ರವಾಸಿಗನು ಇದನ್ನು ನೋಡಲೆ ಬೇಕು.