ಕೊಚ್ಚಿಯ ಥಿರಿಕ್ಕಾರ ಎಂಬ ಸಣ್ಣ ಹಳ್ಳಿಯಲ್ಲಿ ವಾಮನಮೂರ್ತಿ ದೇವಸ್ಥಾನ ಇದೆ. ಇದು ಥಿರಿಕ್ಕಾರ ದೇವಸ್ಥಾನ ಎಂದೇ ಜನಪ್ರಿಯವಾಗಿದೆ. ಎರ್ನಾಕುಲಂನಿಂದ ಕೇವಲ 10 ಕಿಲೋ ಮೀಟರ್ ದೂರದಲ್ಲಿ ಈ ದೇವಸ್ಥಾನವಿದೆ. ಇಲ್ಲಿನ ಮುಖ್ಯ ದೇವರು ವಾಮನನ್ನು ವಿಷ್ಣುವಿನ ಅವತಾರವೆಂದು ನಂಬಲಾಗುತ್ತಿದ್ದು, ಓಣಂ ಹಬ್ಬ ಇಲ್ಲಿ ಪ್ರಮುಖವಾಗಿ ಆಚರಿಸಲ್ಪಡುತ್ತದೆ. ಇದೇ ಸ್ಥಳದಲ್ಲಿ ವಾಮನ ಬಲಿ ಚಕ್ರವರ್ತಿಯ ನೆತ್ತಿಯ ಮೇಲೆ ಕಾಲೂರಿ ಪಾತಾಳಕ್ಕೆ ತಳ್ಳಿದ ಎಂಬ ಕತೆಯೂ ಸ್ಥಳಪುರಾಣದಲ್ಲಿ ಲಭ್ಯವಿದೆ. ಇದೇ ನೆನಪಿಗೆ ಓಣಂ ಅನ್ನು ವಿಜೃಂಬಣೆಯಿಂದ ಆಚರಿಸಲಾಗುತ್ತದೆ. ಓಣಂ ಹಬ್ಬದಂದು ಚರ್ಕವರ್ತಿ ಮಹಾಬಲಿಯು ತನ್ನೆಲ್ಲಾ ಪ್ರಜೆಗಳನ್ನು ಭೇಟಿಯಾಗುತ್ತಾನೆಂಬ ನಂಬಿಕೆಯೂ ಇಲ್ಲಿನ ಜನರಲ್ಲಿ ಇದೆ. ಈ ಎಲ್ಲ ಕಾರಣಗಳಿಂದ ಓಣಂ ಹಬ್ಬವನ್ನು 10 ದಿನಗಳ ಕಾಲ ಅತ್ಯಂತ ಸಡಗರದಿಂದ ಆಚರಿಸಲಾಗುತ್ತದೆ. ಲಕ್ಷಾಂತರ ಭಕ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ.