ಮಾಧವನ್ ನಾಯರ್ ಫೌಂಡೇಶನ್ ಎಂದೂ ಕರೆಯಲ್ಪಡುವ ಕೇರಳದ ಐತಿಹಾಸಿಕ ವಸ್ತು ಸಂಗ್ರಹಾಲಯ ನೀವು ನೋಡಲೇಬೇಕಾದ ಸ್ಥಳಗಳಲ್ಲಿ ಒಂದಾಗಿದೆ. ಕೇರಳದ ಸಮೃದ್ಧ ಇತಿಹಾಸವನ್ನು ಸಾರುವ ಚಿತ್ರಗಳು, ಶಾಸನಗಳು, ಭಿತ್ತಿ ಚಿತ್ರಗಳು ಇಲ್ಲಿದ್ದು, ನಿಮಗೆ ಇತಿಹಾಸದ ಸ್ಪಷ್ಟ ಚಿತ್ರಣವನ್ನು ಒದಗಿಸುತ್ತದೆ. ಕೊಚ್ಚಿ ಹೃದಯ ಭಾಗದಿಂದ ಕೇವಲ 10 ಕಿಲೋಮೀಟರುಗಳಷ್ಟು ದೂರದಲ್ಲಿ ಈ ವಸ್ತು ಸಂಗ್ರಹಾಲಯವಿದ್ದು, ಸುಲಭವಾಗಿ ತಲುಪಬಹುದಾಗಿದೆ. ವಸ್ತು ಸಂಗ್ರಹಾಲಯದ ದಾರಿಯಲ್ಲಿ ಆಳೆತ್ತರದ ಪರಶುರಾಮನ ಪ್ರತಿಮೆಯನ್ನು ನಿಲ್ಲಿಸಲಾಗಿದೆ. ಇದು ಭಗವಾನ್ ವಿಷ್ಣುವಿನ ಆರನೇ ಅವತಾರ ಎಂದು ನಂಬಲಾಗಿದೆ. ಇಲ್ಲೆ ಪಕ್ಕದಲ್ಲಿರುವ ಅರೇಬಿಯನ್ ಸಮುದ್ರದಲ್ಲಿ ಪರಶುರಾಮ ತನ್ನ ಕೊಡಲಿಯನ್ನು ಎಸೆದಿದ್ದರಿಂದ ಕೇರಳ ರಾಜ್ಯದ ಉದಯವಾಯಿತು ಎಂಬ ದಂತಕಥೆಗಳೂ ಚಾಲ್ತಿಯಲ್ಲಿವೆ. ಕೇರಳ ರಾಜ್ಯ ಸ್ಥಾಪನೆಯಾದಾಗಿನಿಂದ ಇಲ್ಲಿನ ವರೆಗಿನ ಸುಮಾರು 2000 ವರ್ಷಗಳ ದಾಖಲೆಗಳು ಇಲ್ಲಿವೆ. ಈ ಕುರಿತಾದ ಸಾಕ್ಷ್ಯಚಿತ್ರವೊಂದನ್ನು ತಯಾರಿಸಲಾಗಿದ್ದು, ಒಂದು ತಾಸಿನ ಅವಧಿಯಲ್ಲಿ ಇಲ್ಲಿ ಪ್ರವಾಸಿಗರಿಗೆ ಪ್ರದರ್ಶನ ಮಾಡಿಸಲಾಗುತ್ತದೆ. ವಿದ್ಯಾರ್ಥಿಗಳಿಗೆ, ಇತಿಹಾಸ ತಜ್ಞರಿಗೆ ಅಧ್ಯಯನಕ್ಕೆ ಇಲ್ಲಿ ವಿಫುಲವಾದ ಅವಕಾಶವಿದೆ.