ದಾದಾ ದರಬಾರ್ ಬಳಿಯೇ ಖಾಂಡ್ವಾ ಪಟ್ಟಣದ ನೈರುತ್ಯ ಭಾಗದಲ್ಲಿ ಭವಾನಿ ಮಾತೆಯ ಮಂದಿರವಿದೆ. ಇದೇ ಮಂದಿರದ ಆವರಣದಲ್ಲಿ ತುಳಜಾ ಭವಾನಿಯ ಮಂದಿರವೂ ಇದೆ. ಪಾರ್ವತಿ ದೇವಿಯ ಇನ್ನೊಂದು ಅವತಾರವೆಂದೇ ಭವಾನಿಯನ್ನು ಪರಿಗಣಿಸಲಾಗುತ್ತದೆ. ಹಾಗಾಗಿ ಇದನ್ನು ತುಳಜಾ ಭವಾನಿ ಮಾತಾ ಮಂದಿರವೆಂದೂ ಕರೆಯುತ್ತಾರೆ. ಪ್ರತಿ ವರ್ಷ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಇಲ್ಲಿ ಆಗಮಿಸಿ ತಾಯಿಯ ಆಶೀರ್ವಾದಕ್ಕೆ ಪಾತ್ರರಾಗುತ್ತಾರೆ. ಭಾರತದ ದೇವಿ ಮಾತಾ ಮಂದಿರಗಳಲ್ಲಿ ಇದನ್ನು ಅತಿ ಮುಖ್ಯ ಮಾತಾ ಮಂದಿರ ಎಂದು ಪರಿಗಣಿಸುತ್ತಾರೆ. ಈ ಮಂದಿರಕ್ಕೆ ಭೇಟಿ ನೀಡಿದವರು ಎಲ್ಲ ಕಷ್ಟ ಕಾರ್ಪಣ್ಯಗಳಿಂದ ಮುಕ್ತರಾಗುತ್ತಾರೆ ಎಂಬ ನಂಬಿಕೆ ಜನರಲ್ಲಿ ಬಲವಾಗಿದೆ.
ಈ ಪವಿತ್ರ ಮತ್ತು ಪ್ರಾಚೀನ ಸ್ಥಳದೊಂದಿಗೆ ಹಲವು ಪೌರಾಣಿಕ ಕಥೆಗಳು ತಳಕುಹಾಕಿಕೊಂಡಿವೆ. ಶ್ರೀರಾಮನು ತನ್ನ ವನವಾಸ ಅಥವಾ ನಂತರದ ಅವಧಿಯಲ್ಲಿ ಈ ದೇವಿಯನ್ನು ಒಂಬತ್ತು ದಿವಸಗಳ ಕಾಲ ಪೂಜಿಸಿದನು ಎಂಬ ಕಥೆ ಜನಜನಿತವಾಗಿದೆ. ಇದರ ಜ್ಞಾಪಕಾರ್ಥವಾಗಿ ನವರಾತ್ರಿಯ ಸಂದರ್ಭದಲ್ಲಿ ಇಲ್ಲಿ ವಿಶೇಷವಾಗಿ ಜಾತ್ರೆಯನ್ನು ಒಂಬತ್ತು ದಿನಗಳ ಕಾಲ ಹಮ್ಮಿಕೊಂಡಿರುತ್ತಾರೆ.