ದಕ್ಷಿಣ ಭಾರತದ ತೆಲಂಗಾಣ ರಾಜ್ಯದಲ್ಲಿ ಬರುವ ಒಂದು ನಗರ ಖಮ್ಮಂ. ಇದೇ ಪಟ್ಟಣ ಖಮ್ಮಂ ಜಿಲ್ಲೆಯ ಕೇಂದ್ರ ಸ್ಥಳವೂ ಆಗಿದೆ. ಇದರ ವ್ಯಾಪ್ತಿಗೆ ಇತ್ತೀಚೆಗೆ ಸುತ್ತಲಿನ 14 ಹಳ್ಳಿಗಳ ಸೇರ್ಪಡೆಯಾಗಿದ್ದು, ಈ ಮೂಲಕ ಇದೊಂದು ನಗರಪಾಲಿಕೆಯಾಗಿ ಕಾರ್ಯನಿರ್ವಹಿಸುತ್ತಿದೆ. ತೆಲಂಗಾಣದ ರಾಜಧಾನಿ ಹೈದ್ರಾಬ್ನಿಂದ ಪೂರ್ವ ದಿಕ್ಕಿನಲ್ಲಿ ಈ ಪಟ್ಟಣ ಇದ್ದು ಅಲ್ಲಿಂದ 193 ಕಿಮೀ. ದೂರದಲ್ಲಿದೆ. ಪ್ರವಾಸಿಗರ ಪಾಲಿಗೆ ಇದೊಂದು ಅಪರೂಪದ ತಾಣವಾಗಿದ್ದು, ಇಲ್ಲಿಗೆ ತಲುಪಲು ಹೆಚ್ಚು ಶ್ರಮ ಪಡಬೇಕಾಗಿಲ್ಲ.
ಸ್ಥಳೀಯ ಪುರಾಣಗಳ ಪ್ರಕಾರ ಈ ಭಾಗಕ್ಕೆ ಈ ಹೆಸರು ಬರಲು ಕಾರಣ ನರಸಿಂಹಾದ್ರಿ ದೇವಸ್ಥಾನ. ಇದು ಮೊದಲು ಸ್ಥಂಬ ಶಿಖರಿ, ಸ್ಥಂಬಾದ್ರಿ ಅಂತೆಲ್ಲ ಕರೆಸಿಕೊಳ್ಳುತ್ತಿತ್ತು. ನಂತರದ ವರ್ಷಗಳಲ್ಲಿ ಇದು ನರಸಿಂಹಾದ್ರಿ ದೇವಾಲಯ ಅಂತ ಕರೆಸಿಕೊಂಡಿತು. ಹೆಸರೇ ಹೇಳುವಂತೆ ಈ ದೇವಾಲಯ ನರಸಿಂಹ ಸ್ವಾಮಿಗೆ ಮೀಸಲಾಗಿದೆ. ನರಸಿಂಹ ವಿಷ್ಣುವಿನ ನಾಲ್ಕನೇ ಅವತಾರ ಅನ್ನುವುದು ಎಲ್ಲರಿಗೂ ಗೊತ್ತು. ಈ ದೇವಾಲಯ ತ್ರೇತಾಯುಗದಲ್ಲಿ ನಿರ್ಮಾಣಗೊಂಡಿದ್ದು ಎಂದು ಹೇಳಲಾಗುತ್ತದೆ.
ಅಂದರೆ ಈ ದೇವಾಲಯ 1.6 ಮಿಲಿಯನ್ ವರ್ಷ ಹಳೆಯದು ಎನ್ನಲಾಗುತ್ತದೆ. ದೇವಾಲಯವು ಒಂದು ದೊಡ್ಡ ಗುಡ್ಡದ ಮೇಲೆ ನೆಲೆಸಿದೆ. ಇದರ ಕೆಳಗೆ ಬೃಹತ್ ಬಂಡೆ ಇದ್ದು ದೇವಾಲಯಕ್ಕೆ ಕಂಬವಾಗಿ ಇದು ನಿಂತಿದೆ. ಕಂಬ ಅನ್ನುವ ಹೆಸರಿನಿಂದಲೇ ಈ ಊರಿಗೆ 'ಖಮ್ಮಂ' ಅನ್ನುವ ಹೆಸರು ಬಂದಿದೆ ಎಂದು ಹೇಳಲಾಗುತ್ತದೆ. ಇಲ್ಲಿ ಈ ಹಿಂದೆ ಊರಿಗೆ 'ಕಂಬಂ ಮೆಟ್ಟು' ಅನ್ನಲಾಗುತ್ತಿತ್ತು. ಮುಂದೆ ಇದೇ ಬಳಕೆಯಲ್ಲಿ ಬದಲಾಗುತ್ತಾ ಹೋಗಿ 'ಕಮ್ಮಮ್ಮೆಟ್' ಆಗಿ ಮತ್ತಷ್ಟು ಕಾಲದ ನಂತರ ಇಂದು ಬಳಸಲಾಗುತ್ತಿರುವ 'ಖಮ್ಮಂ' ಎಂದಾಗಿದೆ.
ಖಮ್ಮಂ ಪಟ್ಟಣವು ಅತ್ಯಂತ ಸುಂದರನಗರವಾಗಿದ್ದು, ಮುನ್ನೇರು ನದಿ ದಡದಲ್ಲಿ ಹರಡಿಕೊಂಡಿದೆ. ಈ ನದಿ ಕೃಷ್ಣಾ ನದಿಯ ಉಪನದಿ ಎಂಬುದು ವಿಶೇಷ. ಆಂಧ್ರ ಪ್ರದೇಶದ ಐತಿಹಾಸಿಕ ಮಹತ್ವವನ್ನು ಸಾರುವ ಪ್ರಮುಖ ತಾಣವಾಗಿ ಖಮ್ಮಂ ಪ್ರಸಿದ್ಧಿ ಹೊಂದಿದೆ. ಇಲ್ಲಿನ ಪ್ರಸಿದ್ಧ ಕೋಟೆ ನಗರಕ್ಕೆ ಮಾತ್ರವಲ್ಲ ತೆಲಂಗಾಣ ರಾಜ್ಯದ ಹಿರಿಮೆಯನ್ನೂ ಎತ್ತಿ ಹಿಡಿದಿದೆ. ಕೋಟೆಯು ಅತ್ಯಂತ ಎತ್ತರ ಪ್ರದೇಶದಲ್ಲಿ ನಿರ್ಮಾಣಗೊಂಡಿದ್ದು, ಗುಡ್ಡದ ಮೇಲೆ ಅತ್ಯಂತ ಸುಸಜ್ಜಿತವಾಗಿ ತಲೆ ಎತ್ತಿದೆ. ಸದೃಢ ಹಾಗೂ ಗಟ್ಟಿಮುಟ್ಟಾದ ನಿರ್ಮಾಣದ ಮಿಶ್ರಣ ವಾಸ್ತುಶಿಲ್ಪವನ್ನು ಇದು ಒಳಗೊಂಡಿದೆ. ಈ ಅಂಶ ಗಮನಿಸಿದಾಗ ಈ ಕೋಟೆಯನ್ನು ಕಟ್ಟಿದವರು ಒಬ್ಬರಲ್ಲ. ಇಲ್ಲಿ ಆಳ್ವಿಕೆ ನಡೆಸಿದ ಪ್ರತಿಯೊಬ್ಬರೂ, ಪ್ರತಿಯೊಂದ ಭಾಗದವರು ಇದನ್ನು ವಿವಿಧ ಸಂದರ್ಭಗಳಲ್ಲಿ ನಿರ್ಮಿಸಿದ್ದಾರೆ ಎನ್ನುವ ಮಾಹಿತಿ ಸಿಗುತ್ತದೆ.
ಖಮ್ಮಂ ಐತಿಹಾಸಿಕ ತಾಣ ಮಾತ್ರವಲ್ಲ ವಾಣಿಜ್ಯ ಹಾಗೂ ಸಾಮಾಜಿಕ ಚಟುವಟಿಕೆಯ ತಾಣವೂ ಆಗಿ ಈ ಹಿಂದೆ ಜನಪ್ರಿಯವಾಗಿತ್ತು. ಇದು ತಾಲೂಕಾಗಿದ್ದ ಸಂದರ್ಭದಲ್ಲಿ ಅನೇಕ ರಾಜರುಗಳು ಇದನ್ನಾಳಿದ್ದರು. ಅನೇಕ ಅರಸರ ಅಡಿ ಇದು ಆಳ್ವಿಕೆಗೆ ಒಳಪಟ್ಟಿತ್ತು. ಈ ಪ್ರದೇಶದ ಇತಿಹಾಸದಲ್ಲಿ ಅವರೆಲ್ಲರ ಛಾಪು ಮೂಡಿದೆ. ತಮ್ಮದೇ ಆದ ಕೊಡುಗೆಯನ್ನು ಅವರು ನೀಡಿ ಹೋಗಿದ್ದಾರೆ. ಅವೆಲ್ಲವೂ ಇಲ್ಲಿ ತೆರೆದ ಕಣ್ಣಿಗೆ ಕಾಣಸಿಗುತ್ತದೆ. ಕಲೆ ಹಾಗೂ ವಾಸ್ತುಶಿಲ್ಪ ಪ್ರಗತಿ ಇವರಿಂದ ಇಲ್ಲಿ ದೊಡ್ಡ ಪ್ರಮಾಣದಲ್ಲಿ ಆಗಿದೆ.
ಅಲ್ಲದೆ ಈ ಪಟ್ಟಣ ಮತೀಯ ಬಾಂಧವ್ಯದಲ್ಲೂ ಒಂದು ಹೆಜ್ಜೆ ಮುಂದಿದೆ. ಇಲ್ಲಿ ನಾನಾ ಭಾಗದ ಜನ ತಮ್ಮದೇ ಆದ ವಿಭಿನ್ನ ಸಂಸ್ಕೃತಿ ಆಚರಿಸುತ್ತಾ ಜೀವಿಸುತ್ತಿದ್ದಾರೆ. ಈ ಮೂಲಕವೂ ಖಮ್ಮಂ ತನ್ನ ವಿಶೇಷ ಹಾಗೂ ವಿಭಿನ್ನತೆಯನ್ನು ವ್ಯಕ್ತಪಡಿಸುತ್ತದೆ. ಇದೆ ಕಾರಣಕ್ಕೆ ಭಿನ್ನವಾಗಿ ತನ್ನನ್ನು ತಾನು ಗುರುತಿಸಿಕೊಂಡಿದೆ ಕೂಡ. ಇವೆಲ್ಲವುಗಳ ಜತೆ ಖಮ್ಮಂ ಸಾಕಷ್ಟು ದೇವಾಲಯ ಹಾಗೂ ಮಸೀದಿಗಳನ್ನು ಹೊಂದಿದೆ. ಸಾಮರಸ್ಯದ ಸಂಕೇತವೆಂಬಂತೆ ಅನೇಕ ಕಡೆ ಒಂದರ ಪಕ್ಕ ಒಂದು ದೇವಾಲಯ ಹಾಗೂ ಮಸೀದಿಗಳು ನಿರ್ಮಾಣಗೊಂಡಿವೆ.
ಖಮ್ಮಂನ ಪ್ರವಾಸಿ ತಾಣಗಳು
ಇದೊಂದು ಪ್ರಮುಖ ಪ್ರವಾಸಿ ಕೇಂದ್ರ. ಲಕ್ಷಾಂತರ ಮಂದಿಯನ್ನು ಇದು ತನ್ನ ಸಹಜ ಸೌಂದರ್ಯದಿಂದ ಸೆಳೆಯುತ್ತದೆ. ದೇಶದ ಮೂಲೆ ಮೂಲೆಯಿಂದ ಇಲ್ಲಿಗೆ ಪ್ರವಾಸಿಗರು ವರ್ಷವಿಡೀ ಆಗಮಿಸುತ್ತಾರೆ. ಖಮ್ಮಂನ ಸುತ್ತ ಓಡಾಡಲು ಸಾಕಷ್ಟು ಪ್ರವಾಸಿ ತಾಣಗಳಿವೆ. ಇದರಲ್ಲಿ ಅತ್ಯಂತ ಆಕರ್ಷಣೀಯ ತಾಣವೆಂದರೆ ಖಮ್ಮಂ ಕೋಟೆ. ಇದರೊಂದಿಗೆ ಜಮ್ಮಲಾಪುರಂ ದೇವಸ್ಥಾನ, ಖಮ್ಮಮ್ಮ ಲಕ್ಷ್ಮಿ ನರಸಿಂಹ ದೇವಸ್ಥಾನ ಇಲ್ಲಿದೆ. ಪ್ರಮುಖ ಪ್ರವಾಸಿ ಆಕರ್ಷಣೆಗಳೆಂದರೆ ಪಾಲಾರ್ ಕೆರೆ, ಪಾಪಿ ಕೊಂಡಲು ಬೆಟ್ಟಗಳು, ವಾಯಾರ್ ಕೆರೆ ಮುಖ್ಯವಾದವು.
ಖಮ್ಮಂಗೆ ಭೇಟಿ ನೀಡಲು ಚಳಿಗಾಲ ಉತ್ತಮ ಸಮಯ. ಈ ಸಂದರ್ಭದಲ್ಲಿ ವಾತಾವರಣವೂ ಆರಾಮದಾಯಕವಾಗಿರುತ್ತದೆ. ವರ್ಷವಿಡೀ ಸ್ಥಿತ್ಯಂತರಗೊಳ್ಳುವ ವಾತಾವರಣ ಇಲ್ಲಿನದು. ಚಳಿಗಾಲದಲ್ಲಿ ವಾತಾವರಣ ಪ್ರಶಾಂತವಾಗಿದ್ದು, ತಂಪಾಗಿರುತ್ತದೆ. ಉಳಿದ ಕಾಲದಲ್ಲಿ ವಿಪರೀತ ಸೆಖೆ ಇರುವುದರಿಂದ ಪ್ರವಾಸಿಗರಿಗೆ ಚಳಿಗಾಲವೆ ಸೂಕ್ತ ಸಮಯ. ಬೇಸಿಗೆಯಲ್ಲಿ ಸೆಖೆ ವಿಪರೀತ ಇರುವುದರಿಂದ ಪ್ರವಾಸಕ್ಕೆ ಬರುವುದು ಒಳ್ಳೆಯದಲ್ಲ.
ಈ ಭಾಗದವರ ಅನುಭವದ ಪ್ರಕಾರ ಮಳೆಗಾಲ ಸಾಮಾನ್ಯವಾಗಿರುತ್ತದೆ. ಹೀಗಾಗಿ ಮಳೆಗಾಲದಲ್ಲಿ ತಾಪಮಾನದಲ್ಲಿ ಕೊಂಚ ಇಳಿಕೆ ಆಗುತ್ತದೆ. ಈ ಸಂದರ್ಭದಲ್ಲಿ ತೇವಾಂಶ ಪ್ರಮಾಣ ವಾತಾವರಣದಲ್ಲಿ ಹೆಚ್ಚಿರುತ್ತದೆ. ಈ ಸಂದರ್ಭವನ್ನು ಬಳಸಬಹುದು ಆದರೆ ಸೂಕ್ತ ಮುನ್ನೆಚ್ಚರಿಕೆ ಅಗತ್ಯ.
ರಾಜ್ಯದ ಇತರೆ ಭಾಗದಿಂದ ಖಮ್ಮಂಗೆ ಉತ್ತಮ ಸಂಪರ್ಕ ಸೌಲಭ್ಯವಿದೆ. ರೈಲು ಹಾಗೂ ರಸ್ತೆ ಮಾರ್ಗದಲ್ಲಿ ಬರುವುದಾದರೆ ರಾಷ್ಟ್ರದ ಇತರೆ ಭಾಗದಿಂದಲೂ ಉತ್ತಮ ಸಂಪರ್ಕ ಈ ಪಟ್ಟಣಕ್ಕಿದೆ. ಖಮ್ಮಂನಲ್ಲಿ ವಿಮಾನ ನಿಲ್ದಾಣವಿಲ್ಲ. ಇದಕ್ಕೆ ಸಮೀಪದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹೈದ್ರಾಬಾದ್. ರೈಲು ಹಾಗೂ ರಸ್ತೆ ಸೌಲಭ್ಯ ಉತ್ತಮವಾಗಿರುವುದರಿಂದ ವಿಮಾನ ನಿಲ್ದಾಣವಿಲ್ಲ ಎಂಬ ಕೊರತೆ ದೂರಾಗಿದೆ.
ಎರಡು ರಾಷ್ಟ್ರೀಯ ಹೆದ್ದಾರಿಗಳು ಈ ಪಟ್ಟಣದ ಮೂಲಕ ಹಾದು ಹೋಗಿದ್ದು, ರಸ್ತೆ ಸಂಪರ್ಕವನ್ನು ಉತ್ತಮವಾಗಿಸಿದೆ. ಈ ಮೂಲಕ ಪ್ರವಾಸಿಗರು ರಸ್ತೆ ಮಾರ್ಗ ಬಳಸಿ ಆರಾಮವಾಗಿ ಹಾಗೂ ಸುಲಭವಾಗಿ ಇಲ್ಲಿಗೆ ತಲುಪಬಹುದಾಗಿದೆ. ಖಮ್ಮಂ ಹಾಗೂ ಇತರೆ ನಗರದ ನಡುವೆ ಸಂಪರ್ಕಕ್ಕಾಗಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಸಾಕಷ್ಟು ಬಸ್ ಓಡಿಸುತ್ತಿದೆ. ದೇಶದ ಎಲ್ಲಾ ಭಾಗಕ್ಕೂ ರೈಲು ಸಂಪರ್ಕ ಇಲ್ಲಿಗೆ ಉತ್ತಮವಾಗಿದೆ. ಹೈದ್ರಾಬಾದ್- ವಿಶಾಖಪಟ್ಟಣಂ ಮಾರ್ಗವಾಗಿ ತೆರಳುವ ಮಾರ್ಗದಲ್ಲಿ ಖಮ್ಮಂ ರೈಲು ನಿಲ್ದಾಣ ಇರುವುದರಿಂದ ಇದು ಸಾಧ್ಯವಾಗಿದೆ.