ಸಾಮಾನ್ಯವಾಗಿ ಟೀ ಎಸ್ಟೇಟ್/ಚಹ ತೋಟಗಳಂತಹ ಸುಂದರ ಸ್ಥಳಗಳನ್ನು ನಾವು ಚಿತ್ರಗಳಲ್ಲಷ್ಟೇ ವೀಕ್ಷಿಸುತ್ತೇವೆ ಅಥವಾ ಆ ಸ್ಥಳ ಎಲ್ಲಿದೆ ಎಂಬುದು ತಿಳಿದಿದ್ದರೂ ಅಲ್ಲಿಗೆ ಹೋಗಲು ನಮಗೆ ಆಗಿರುವುದಿಲ್ಲ ಅಲ್ಲವೇ? ಅದರೆ ಇಂತಹ ಸೌಂದರ್ಯದ ಗಣಿಯಂತಹ ಸ್ಥಳಕ್ಕೇನಾದರೂ ನಿಮಗೆ ನಿಮ್ಮ ರಜಾ ದಿನಗಳನ್ನು ಕಳೆಯಲು ಹೋಗಬೇಕೆಂದಿದ್ದರೆ ಅದಕ್ಕೆ ಅತ್ಯಂತ ಪ್ರಶಸ್ತವಾದ ಸ್ಥಳ ಉತ್ತರಖಂಡದ ಕೌಸಾನಿ ಬೆಟ್ಟದ ಪಟ್ಟಣ!
ಅದರಲ್ಲೂ ನಗರದ ಜೀವನ ಸಾಕೆನಿಸಿದವರಿಗೆ ತುಸು ವಿಶ್ರಾಂತಿ ಬೇಕೆಂದರೆ ಕೌಸಾನಿಯ ಆಶ್ರಮಗಳು ನಿಮಗೆ ಸಮಾಧಾನವನ್ನು ನೀಡಬಲ್ಲವು. ಕೌಸಾನಿ, ಉತ್ತರಖಂಡ್ ರಾಜ್ಯದಲ್ಲಿ ನೆಲೆಗೊಂಡಿರುವ ಒಂದು ಚಿತ್ರಸದೃಶ ಬೆಟ್ಟದ ಪಟ್ಟಣ. ಇದು ಸಮುದ್ರ ಮಟ್ಟದಿಂದ 6075 ಅಡಿ ಎತ್ತರದಲ್ಲಿದೆ. ಬೃಹತ್ ಹಿಮಾಲಯ ಜೊತೆಗೆ, ನಂದಕೋಟ್, ತ್ರಿಶೂಲ್ ಮತ್ತು ನಾಡ ದೇವಿ ಎಂಬ ಪರ್ವತಗಳು ಇಲ್ಲಿಂದ ಸುಲಭವಾಗಿ ಗೋಚರಿಸುತ್ತವೆ. ಈ ಬೆಟ್ಟದ ಪಟ್ಟಣ ದಟ್ಟವಾದ ಪೈನ್ ಮರಗಳ ನಡುವೆ ನೆಲೆಸಿದೆ ಮತ್ತು ಸೋಮೇಶ್ವರ, ಗರೂರ್ ಮತ್ತು ಬೈಜ್ನಾಥ್ ಕತ್ಯೂರಿ ಮೊದಲಾದ ಸುಂದರ ಕಣಿವೆಗಳನ್ನೂ ಸಹ ಇಲ್ಲಿ ಕಾಣಬಹುದು.
ಹಿಂದಿನ ಕಾಲದಲ್ಲಿ, ಈ ಪಟ್ಟಣವನ್ನು ವಲ್ನಾ ಎನ್ನಲಾಗುತ್ತಿತ್ತು ಮತ್ತು ಅಲ್ಮೊರಾ ಜಿಲ್ಲೆಯ ಭಾಗವಾಗಿತ್ತು. ಆ ಸಮಯದಲ್ಲಿ, ಜಿಲ್ಲೆಯು ಕತ್ಯೂರಿ ರಾಜ ಬೈಚಲದೇವನ ಆಡಳಿತದಲ್ಲಿತ್ತು. ನಂತರ, ರಾಜನು ಶ್ರೀ ಚಂದ್ ತಿವಾರಿ ಎಂಬ ಗುಜರಾತಿ ಬ್ರಾಹ್ಮಣನಿಗೆ, ಈ ಭೂಮಿಯ ಬಹುಬಾಗವನ್ನು ನೀಡಿದ. ಈ ಸ್ಥಳದ ವೈಭವದಿಂದ ಆಕರ್ಷಿತರಾದ ಭಾರತದ ಸ್ವಾತಂತ್ರ್ಯ ಹೋರಾಟಗಾರ ಮಹಾತ್ಮಾ ಗಾಂಧಿ 'ಭಾರತದ ಸ್ವಿಜರ್ಲ್ಯಾಂಡ್' ಎಂದು ಈ ಬೆಟ್ಟದ ಪಟ್ಟಣವನ್ನು ಕರೆದರು. ಪ್ರಸ್ತುತ, ಕೌಸಾನಿಗೆ ಪ್ರತಿವರ್ಷ ಪ್ರಪಂಚದಾದ್ಯಂತ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದು, ಒಂದು ಜನಪ್ರಿಯ ಪ್ರವಾಸಿ ತಾಣವಾಗಿದೆ.
ಬೆಟ್ಟ-ಪರ್ವತಗಳ ಸುಂದರತೆಯ ಹೊರತಾಗಿ, ಈ ಸ್ಥಳವು ತನ್ನ ಆಶ್ರಮಗಳು, ದೇವಾಲಯಗಳು ಮತ್ತು ಚಹಾ ಎಸ್ಟೇಟ್ ಗಳಿಗೂ ಹೆಸರುವಾಸಿಯಾಗಿದೆ. ಇಲ್ಲಿನ ಜನಪ್ರಿಯ ಆಶ್ರಮಗಳಲ್ಲಿ ಒಂದು, ಮಹಾತ್ಮ ಗಾಂಧಿ ಕೆಲವು ದಿನಗಳ ಕಾಲ ಇದ್ದ ಸ್ಥಳದಲ್ಲಿ ನಿರ್ಮಿಸಲಾದ ಅನಶಕ್ತಿ ಆಶ್ರಮ. ವಸತಿ ಮತ್ತು ಅಡಿಗೆ ಸೌಲಭ್ಯಗಳನ್ನು ಕೂಡ ಒದಗಿಸುವ ಇದು, ಈಗ ಒಂದು ಅಧ್ಯಯನ ಮತ್ತು ಸಂಶೋಧನಾ ಕೇಂದ್ರವಾಗಿದೆ. ಮತ್ತೊಂದು ಪ್ರಖ್ಯಾತ ಆಶ್ರಮ, ಸರಲಾ ಆಶ್ರಮ ಎಂದೂ ಕರೆಯಲ್ಪಡುವ ಲಕ್ಷ್ಮಿ ಆಶ್ರಮ. ಈ ಆಶ್ರಮವು 1948 ರಲ್ಲಿ ಮಹಾತ್ಮಾ ಗಾಂಧಿಯವರ ಅನುಯಾಯಿ, ಕ್ಯಾಥರೀನ್ ಹಿಲ್ಮನ್ ಅವರಿಂದ ಸ್ಥಾಪಿತವಾಗಿದೆ.
ಪಿನ್ನಥ್ ದೇವಾಲಯ, ಶಿವ ದೇವಾಲಯ, ರುದ್ರಹರಿ ಮಹಾದೇವ ದೇವಾಲಯ, ಕೋಟ್ ಭ್ರಮರಿ ದೇವಸ್ಥಾನ ಮತ್ತು ಬೈಜ್ನಾಥ್ ದೇವಾಲಯಗಳು ಕೌಸಾನಿಯ ಜನಪ್ರಿಯ ಧಾರ್ಮಿಕ ತಾಣಗಳಲ್ಲಿ ಕೆಲವು. ಪಿನ್ನಥ್ ದೇವಸ್ಥಾನದಲ್ಲಿ ಹಿಂದೂ ದೇವತೆ ಬೈರೋನ್ ದೇವತೆಯನ್ನು ಪೂಜಿಸಲಾಗುತ್ತದೆ. ಇದು ಸಮುದ್ರ ಮಟ್ಟದಿಂದ 2750 ಮೀಟರ್ ಎತ್ತರದಲ್ಲಿ ಇದೆ. ಕೌಸಾನಿಯಲ್ಲಿರುವ ಶಿವ ದೇವಾಲಯ ಕೌಸಾನಿಯಿಂದ 11 ಕಿ. ಮೀ ದೂರದಲ್ಲಿರುವ ಸೋಮೇಶ್ವರ ಪಟ್ಟಣದಲ್ಲಿ ಇದೆ. ಈ ದೇವಾಲಯವು ಹಿಂದೂ ದೇವ ಶಿವನನ್ನು ಪೂಜಿಸುವ ಮಹಾ ಸ್ಥಳ. ಚಂದ ವಂಶದ ಸ್ಥಾಪಕ ರಾಜ ಸೋಮ್ ಚಂದ್ ಈ ದೇವಾಲಯವನ್ನು ನಿರ್ಮಿಸಿದನು.
ಜೊತೆಗೆ, ಕೌಸಾನಿ ಪ್ರಸಿದ್ಧ ಸಮಕಾಲೀನ ಹಿಂದಿ ಕವಿಗಳಾದ, ಸುಮಿತ್ರಾ ನಂದನ್ ಪಂತ್ ಅವರ ಜನ್ಮಸ್ಥಳ. ಇಲ್ಲಿರುವ ಸುಮಿತ್ರಾ ನಂದನ್ ಪಂತ್ ಗ್ಯಾಲರಿ ಎಂಬ ವಸ್ತು ಸಂಗ್ರಹಾಲಯವನ್ನು ಇವರಿಗೆ ಸಮರ್ಪಿಸಲಾಗಿದೆ. ಈ ಮ್ಯೂಸಿಯಂ, ಇವರ ಕವಿತೆಗಳ ಹಸ್ತಪ್ರತಿಗಳು ಮತ್ತು ಇತರೆ ಸಾಹಿತ್ಯ ಕೃತಿಗಳ ಕರಡುಗಳು ಹಾಗೆಯೇ ಅವರು ಗಳಿಸಿದ ಪ್ರಶಸ್ತಿಗಳನ್ನು ಒಳಗೊಂಡಿದೆ. ಅವರ ಜನ್ಮ ವಾರ್ಷಿಕೋತ್ಸವವನ್ನು ವಸ್ತುಸಂಗ್ರಹಾಲಯದಲ್ಲಿ ಆಚರಿಸಲಾಗುತ್ತದೆ ಮತ್ತು ಒಂದು ಸಭೆಯನ್ನು ಅವರ ಗೌರವಾರ್ಥವಾಗಿ ಇಲ್ಲಿ ಪ್ರತಿವರ್ಷ ಆಯೋಜಿಸಲಾಗುತ್ತದೆ.
ಕೌಸಾನಿಗೆ ಭೇಟಿ ನೀಡುವ ಸಾಹಸ ಉತ್ಸಾಹಿಗಳು ಚಾರಣ ಮಾಡುವಿಕೆ ಮತ್ತು ರಾಕ್ ಕ್ಲೈಂಬಿಂಗ್ (ಬಂಡೆ ಹತ್ತುವುದು) ಮೊದಲಾದ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬಹುದು. ದೇಶದ ಅತ್ಯುತ್ತಮ ಚಾರಣ ಮಾರ್ಗಗಳಲ್ಲಿ ಕೆಲವನ್ನು ಇಲ್ಲಿಯೇ ಕಾಣಬಹುದು. ಅವುಗಳಲ್ಲಿ ಕೆಲವು ಜನಪ್ರಿಯವಾದವುಗಳೆಂದರೆ, ಸುಂದರ್ ಧುಂಗಾ ಟ್ರೆಕ್ (ಚಾರಣ ಮಾರ್ಗ), ಪಿಂಡಾರಿ ಹಿಮನದಿ ಟ್ರೆಕ್ ಮತ್ತು ಮಿಲಾಮ್ ಹಿಮನದಿ ಟ್ರೆಕ್ ಮೊದಲಾದವುಗಳು. ಅಲ್ಲದೆ, ಈ ಪ್ರದೇಶವು 'ಉತ್ತರಾಯಣಿ' ಎಂದು ಕರೆಯಲಾಗುವ ಹಿಂದೂ ಹಬ್ಬ 'ಮಕರ ಸಂಕ್ರಾಂತಿ' ಆಚರಿಸುವಲ್ಲಿ ಹೆಸರುವಾಸಿಯಾಗಿದೆ.
ಕೌಸಾನಿಗೆ ದೇಶದ ವಿವಿಧ ಭಾಗಗಳಿಂದ ಸುಲಭವಾಗಿ ವಿಮಾನ, ರೈಲು ಮತ್ತು ರಸ್ತೆ ಸಾರಿಗೆ ಮೂಲಕ ಪ್ರವೇಶಿಸಬಹುದು. ಉದ್ದೇಶಿತ ಸ್ಥಳಕ್ಕೆ ಹತ್ತಿರವಾದ ವಾಯುನೆಲೆ ಎಂದರೆ ಪಂತನಗರ್ ವಿಮಾನ ನಿಲ್ದಾಣ. ಇದು ವಿಮಾನದ ಮೂಲಕ ಭಾರತದ ಇತರ ನಗರಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಕಥ್ಗೋಡಂ ರೈಲು ನಿಲ್ದಾಣ ಕೌಸಾನಿಗೆ ಹತ್ತಿರದ ರೈಲ್ವೆ ನಿಲ್ದಾಣವಾಗಿದ್ದು, ಹೌರಾ ಮತ್ತು ಲಕ್ನೋ ಸೇರಿದಂತೆ ಭಾರತದ ಪ್ರಮುಖ ಸ್ಥಳಗಳಿಗೆ ರೈಲಿನ ಸಂಪರ್ಕವನ್ನು ಕಲ್ಪಿಸುತ್ತದೆ. ಕೌಸಾನಿ ಬಸ್ ನಿಲ್ದಾಣದಿಂದ ವಿವಿಧ ಸ್ಥಳಗಳಿಗೆ ಸಾರ್ವಜನಿಕ ಮತ್ತು ಖಾಸಗಿ ಬಸ್ಸುಗಳ ಸಂಪರ್ಕವಿದೆ.
ಪ್ರಯಾಣಿಕರು ಆಹ್ಲಾದಕರ ಹಮಾನವಿರುವ ಏಪ್ರಿಲ್ ಮತ್ತು ಜೂನ್ ನಡುವೆ ಕೌಸಾನಿಗೆ ಭೇಟಿ ನೀಡುವುದು ಉತ್ತಮ.