ಇಲ್ಲಿನ 42 ಅಡಿ ಎತ್ತರದ ಬಾಹುಬಲಿಯ ಏಕಶಿಲಾ ಪ್ರತಿಮೆ ಕಾರ್ಕಳದ ಅತೀ ಪ್ರಮುಖ ಆಕರ್ಷಣೆ. ಈ ಏಕಶಿಲೆಯ ಪ್ರತಿಮೆಯು ಕರ್ನಾಟಕದ ಎರಡನೇ ದೊಡ್ಡ ಪ್ರತಿಮೆಯೆಂದು ಪ್ರಸಿದ್ಧಿಯಾಗಿದೆ. (ಮೊದಲನೇಯದು 55.77 ಅಡಿ ಎತ್ತರದ ಶ್ರವಣಬೆಳಗೊಳದ ಗೊಮ್ಮಟೇಶ್ವರ ಮೂರ್ತಿ). ಈ ಪ್ರತಿಮೆಯನ್ನು ಕ್ರಿ.ಶ. 1432ರ ಸುಮಾರಿಗೆ ಪಾಂಡ್ಯ ರಾಜವಂಶದ ದೊರೆ ವೀರಪಾಂಡ್ಯ ಭೈರವ ರಾಜ ಬಾಹುಬಲಿಯ ಸ್ಮರಣೆಗಾಗಿ ನಿರ್ಮಿಸಿದ ಎನ್ನಲಾಗಿದೆ. ಧಾರ್ಮಿಕ ಹಿನ್ನೆಲೆಯಲ್ಲಿ ಬಾಹುಬಲಿ ಒಬ್ಬ ರಾಜಕುಮಾರನಾಗಿದ್ದು, ಜೀವನದ ಲೌಕಿಕ ತೃಪ್ತಿ ತ್ಯಜಿಸಿ ತನ್ನ ಜೀವನದ 12 ವರ್ಷಗಳನ್ನು ಧ್ಯಾನದಲ್ಲಿ ಕಳೆದು ವಿಶಿಷ್ಟ ದೈವಶಕ್ತಿ ಪಡೆದನು ಎಂಬ ಪ್ರತೀತಿಯಿದೆ.ಪ್ರತಿ ಹನ್ನೆರಡು ವರ್ಷಕ್ಕೊಮ್ಮೆ ಬಾಹುಬಲಿ ಪ್ರತಿಮೆಗೆ ಮಹಾಸ್ತಕಾಭಿಷೇಕವನ್ನು ನೇರವೇರಿಸಲಾಗುತ್ತದೆ. ವಿಶ್ವದೆಲ್ಲೆಡೆಯಿರುವ ಅಪಾರ ಜೈನ್ ಭಕ್ತರು ಹಾಗೂ ವಿವಿಧ ಧರ್ಮೀಯರು ಈ ಸಂದರ್ಭದಲ್ಲಿ ಪಾಲ್ಗೊಳ್ಳುವರು. ನೀರು, ಕೇಸರಿ, ಹಾಲು ಮುಂತಾದ ವಿವಿಧ ವಸ್ತುಗಳನ್ನು ಬಾಹುಬಲಿ ಪ್ರತಿಮಗೆ ಮಹಾಮಸ್ತಕಾಭಿಷೇಕ ಮಾಡಲಾಗುತ್ತದೆ.