ಅತ್ತೂರ್ ಗ್ರಾಮದಲ್ಲಿ ರೋಗ ನಿವಾರಕ ಎಂದೇ ಪ್ರಸಿದ್ಧಿ ಹೊಂದಿರುವ ಕ್ರಿ.ಶ. 1759ರಲ್ಲಿ ನಿರ್ಮಿಸಲಾದ ಸಂತ ಲಾರೆನ್ಸ್ ಚರ್ಚ್ ಇದೆ. ಟಿಪ್ಪು ಸುಲ್ತಾನ ಈ ಚರ್ಚ್ ನಾಶಗೊಳಿಸಿದ ಐತಿಹ್ಯವಿದೆ. ಟಿಪ್ಪು ಸುಲ್ತಾನ್ ಆಳ್ವಿಕೆಯಲ್ಲಿ ದಾಳಿಗೊಳಗಾದ 3ನೇ ಚರ್ಚ್ ಇದಾಗಿದೆ. ಕಾರ್ಕಳದ ನಕ್ರೆ ಎಂಬ ಪ್ರದೇಶದಲ್ಲಿ ನಿರ್ಮಿಸಲಾದ ಎರಡನೇ ಚರ್ಚ್ ಹಳೆಯದಾಗುತ್ತಿದ್ದಂತೆ ಸಂತ ಲಾರೆನ್ಸ್ ಮೂರ್ತಿಯನ್ನು ಸ್ಥಳಾಂತರಿಸಲು ಪರ್ಶಿಯನ್ನರು ನಿರ್ಧರಿಸಿ, ಅತ್ತೂರ್ ಗ್ರಾಮದಲ್ಲಿರುವ ಪುಷ್ಕರಣಿ ಬಳಿ ಲಾರೆನ್ಸ್ ಪುತ್ಥಳಿಯನ್ನು ಇರಿಸಿ ಗ್ರಾಮದಲ್ಲಿ ಚರ್ಚ್ ಕಟ್ಟಲು ನಿರ್ಧರಿಸಿದರು. ಈಗ ಪ್ರವಾಸಿಗರ ಕಣ್ಮನ ಸೆಳೆಯುತ್ತಿರುವ ಚರ್ಚ್ ಮತ್ತು ಮೂರ್ತಿ ನೋಡಬಹುದು.ಪ್ರಕೃತಿಯ ಸುಂದರ ಮಡಿಲಲ್ಲಿ ಇರುವ ಲಾರೆನ್ಸ್ ಚರ್ಚ್ ಕ್ರಿಸ್ತ್ರರ ಹಬ್ಬದ ಸಂದರ್ಭದಲ್ಲಿ ಪ್ರತಿವರ್ಷ ಅಪಾರ ಸಂಖ್ಯೆಯ ಭಕ್ತಾದಿಗಳು ಭೇಟಿ ನೀಡುವರು. ಎಲ್ಲ ಧರ್ಮೀಯರು ಭಕ್ತಿಭಾವದಿಂದ ನಡೆದುಕೊಳ್ಳುವ ಈ ಲಾರೆನ್ಸ್ ಚರ್ಚನ್ನು 1997ರಲ್ಲಿ ನವೀಕರಿಸಿ 100 ಅಡಿ ಎತ್ತರದ ಗೋಪುರವನ್ನು ಕಟ್ಟಲಾಗಿದೆ. ಲಾರೆನ್ಸ್ ಚರ್ಚ್ ನೊಂದಿಗೆ, ತಾಮ್ರ ಲೇಪಿತ ಗರ್ಭಗುಡಿ ಹೊಂದಿರುವ ಇಲ್ಲಿನ ಮಹಾಗಣಪತಿ ದೇವಸ್ಥಾನ ಮತ್ತು ವಿಷ್ಣು ದೇವಾಲಯಕ್ಕೂ ಭೇಟಿ ನೀಡಬಹುದು. ಇನ್ನು ಇಲ್ಲಿರುವ ಮಹಾಲಿಂಗೇಶ್ವರ ದೇವಸ್ಥಾನವೂ ವಿಶಿಷ್ಟ ರೀತಿಯಿಂದ ಭಕ್ತರನ್ನು ಆಕರ್ಷಿಸುತ್ತಿರುವುದು ವಿಶಿಷ್ಟ.