ಕರೌಲಿಯು ರಾಜಸ್ಥಾನ ರಾಜ್ಯದ ಒಂದು ಜಿಲ್ಲೆಯಾಗಿದ್ದು, ಜೈಪುರ್ ನಿಂದ 160 ಕಿ.ಮೀ ದೂರದಲ್ಲಿದೆ. ಇದು 5530 ಚ.ಕಿ.ಮೀ ವಿಸ್ತೀರ್ಣದಲ್ಲಿ ಹರಡಿದೆ. ಇಲ್ಲಿನ ಪ್ರಸಿದ್ಧ ಸ್ಥಳೀಯ ದೇವತೆಯಾದ ಕಲ್ಯಾಣ್ ಜಿ ಯ ಗೌರವಾರ್ಥವಾಗಿ ಇದಕ್ಕೆ ಮೊದಲು ಕಲ್ಯಾಣಪುರಿ ಎಂಬ ಹೆಸರನ್ನಿಡಲಾಗಿತ್ತು. 300 ದೇವಸ್ಥಾನಗಳ ಉಪಸ್ಥಿತಿಯು ಕರೌಲಿಯನ್ನು ರಾಜಸ್ಥಾನದಲ್ಲಿನ ಪಾವಿತ್ರ್ಯತೆಯ ಸ್ಥಳಗಳಲ್ಲಿ ಒಂದನ್ನಾಗಿ ಮಾಡಿದೆ.
ಮಧ್ಯಯುಗದಲ್ಲಿ ಶತ್ರುಗಳ ಆಕ್ರಮಣದ ಆತಂಕವು ಸದಾ ಇರುತ್ತಿದ್ದುದರಿಂದ, ಈ ಜಿಲ್ಲೆಯನ್ನು ಒಂದು ಕೋಟೆಯ ರೂಪದಲ್ಲೆ ಕಟ್ಟಲಾಗಿದೆ. ಈ ಜಿಲ್ಲೆಯಲ್ಲಿನ, ಇನ್ನು ಭದ್ರವಾಗಿ ನಿಂತಿರುವ ಕೆಂಪು ಸ್ಯಾಂಡ್ ಸ್ಟೋನ್ ನಿಂದ ನಿರ್ಮಿಸಲ್ಪಟ್ಟ ಗೋಡೆಯು ಅಲ್ಲಲ್ಲಿ ಶಿಥಿಲಗೊಂಡಿರುವುದನ್ನು ಕಾಣಬಹುದಾಗಿದೆ. ಈ ಗೋಡೆಗೆ 6 ಪ್ರವೇಶ ದ್ವಾರಗಳಿದ್ದು, ಅಲ್ಲಲ್ಲಿರುವ ಕೊತ್ತಲುಗಳು ಇದನ್ನು ಮತ್ತಷ್ಟು ಭದ್ರವಾಗಿರಲು ಸಹಾಯಕವಾಗಿವೆ.
ಸಮುದ್ರ ಮಟ್ಟದಿಂದ 902 ಅಡಿ ಎತ್ತರದಲ್ಲಿರುವ ಕರೌಲಿಯು, ಸುತ್ತಲು ಪರ್ವತ ಹಾಗು ಕಂದಕಗಳಿಂದ ಆವೃತ್ತವಾಗಿದೆ. ಅತಿ ಉದ್ದವಾದ ಶಿಖರವು 1400 ಅಡಿ ಎತ್ತರವನ್ನು ಹೊಂದಿದೆ. ದಂತಕಥೆಗಳ ಪ್ರಕಾರ, ಈ ರಾಜಸಂಸ್ಥಾನವನ್ನು ಭಗವಾನ್ ಕೃಷ್ಣನ 88 ನೇ ತಲೆಮಾರಿನ ರಾಜನಾದ ಬಿಜೈ ಪಾಲ ಜಾದೊನ್ 995 ರಲ್ಲಿ ನಿರ್ಮಿಸಿದ್ದು, ಅಧಿಕೃತವಾಗಿ ಕರೌಲಿಯನ್ನು ಯದುವಂಶದ ರಜಪೂತ ದೊರೆಯಾದ ರಾಜಾ ಅರ್ಜುನ್ ಪಾಲನು ಕ್ರಿ.ಶ.1348 ರಲ್ಲಿ ಸ್ಥಾಪಿಸಿದ.
ಕರೌಲಿಯು ತನ್ನ ಮಸುಕಾದ ಕೆಂಪು ಕಲ್ಲಿನ ವಾಸ್ತುಶಿಲ್ಪ ಕಲೆಗೆ ಹೆಸರುವಾಸಿಯಾಗಿದ್ದು, ಸಿಟಿ ಪ್ಯಾಲೇಸ್, ತಿಮಾನಗರ್ ಕೋಟೆ, ಕೈಲಾದೇವಿ ದೇವಸ್ಥಾನ, ಮದನ ಮೋಹನ್ ಜಿ ದೇವಸ್ಥಾನ, ಮಹಾವೀರ್ ಜೈನ ಮಂದಿರ ಮುಂತಾದ ಅನೇಕ ಅದ್ಭುತ ಸ್ಮಾರಕಗಳನ್ನು ಹೊಂದಿದೆ. ಸಿಟಿ ಪ್ಯಾಲೇಸ್ ವು ಈ ಪ್ರದೇಶದ ಭವ್ಯವಾದ ಪರಂಪರೆಗೆ ಸಾಕ್ಷಿಯಾಗಿದೆ.
ಜಾತ್ರೆಗಳು ಮತ್ತು ಉತ್ಸವಗಳು
ಹಿಂದು ತಿಂಗಳಾದ ಚೈತ್ರ ಮಾಸ (ಮಾರ್ಚ್-ಎಪ್ರಿಲ್) ದಲ್ಲಿ, ಇಲ್ಲಿನ ಕೈಲಾ ದೇವಿ ದೇವಸ್ಥಾನದಲ್ಲಿ, ಪ್ರತಿ ಹದಿನೈದು ದಿನಗಳಿಗೊಮ್ಮೆ ಜಾತ್ರೆಗಳನ್ನು ಆಚರಿಸಲಾಗುತ್ತದೆ. ಇದು ಇಡಿ ಉತ್ತರ ಭಾರತದಲ್ಲೆ ಹೆಸರುವಾಸಿಯಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಮಧ್ಯ ಪ್ರದೇಶ, ಉತ್ತರ ಪ್ರದೇಶ, ಪಂಜಾಬ್, ದೆಹಲಿ ಮತ್ತು ಹರಿಯಾಣಾಗಳಿಂದ ಜನರು ಈ ಉತ್ಸವದಲ್ಲಿ ಪಾಲ್ಗೊಳ್ಳಲು ಬರುತ್ತಾರೆ.
ಕರೌಲಿಯ ಬಹುತೇಕ ಜನರು ಕರಕುಶಲ ವಸ್ತುಗಳ ತಯಾರಕರಾಗಿದ್ದಾರೆ. ಈ ವಸ್ತುಗಳು ಪ್ರವಾಸಿಗರಲ್ಲಿ ಹೆಸರುವಾಸಿಯಾಗಿವೆ.
ಕರೌಲಿಗೆ ತಲುಪುವ ಬಗೆ
ಜೈಪುರ್ ನ ಸಂಗನೇರ್ ವಾಯು ನಿಲ್ದಾಣ ಮತ್ತು ಗಂಗಾಪುರಿನ ರೈಲು ನಿಲ್ದಾಣ ಕರೌಲಿಗೆ ಹತ್ತಿರದ ನಿಲ್ದಾಣಗಳಾಗಿವೆ. ಇದಲ್ಲದೆ ಉತ್ತಮ ಎನ್ನಬಹುದಾದಂತಹ ರಸ್ತೆ ಜಾಲವು ಕರೌಲಿಗೆ ತಲುಪಲು ಸಹಾಯಕವಾಗಿವೆ. ಸೆಪ್ಟಂಬರ್ ಮತ್ತು ಮಾರ್ಚ್ ನಡುವಿನ ಅವಧಿಯು ಕರೌಲಿಗೆ ಭೇಟಿ ನೀಡಲು ಉತ್ತಮ ಕಾಲವಾಗಿದೆ.