ಕೇಪ್ ಕಾಮೊರಿನ್ ಎಂದೇ ಹೆಸರುವಾಸಿಯಾದ ಕನ್ಯಾಕುಮಾರಿ ಭಾರತದ ತಮಿಳುನಾಡಿನಲ್ಲಿದೆ. ಭಾರತದ ದಕ್ಷಿಣದ ತುತ್ತ ತುದಿಯಲ್ಲಿ ಕನ್ಯಾಕುಮಾರಿ ಇದೆ. ಕನ್ಯಾಕುಮಾರಿಯು ಹಿಂದೂ ಮಹಾಸಾಗರ, ಬಂಗಾಳ ಕೊಲ್ಲಿ ಮತ್ತು ಅರಬ್ಭಿ ಸಮುದ್ರ ಸೇರುವ ಸ್ಥಳದಲ್ಲಿ ಇದೆ. ಇದರ ವಾಯುವ್ಯ ಮತ್ತು ಪಶ್ಚಿಮ ಭಾಗದಲ್ಲಿ ಕೇರಳ ರಾಜ್ಯವಿದ್ದು, ತಿರುನೆಲ್ವೇಲಿ ಜಿಲ್ಲೆಯು ಇದರ ಉತ್ತರ ಮತ್ತು ಪೂರ್ವ ಭಾಗದಲ್ಲಿ ಬರುತ್ತದೆ. ಕೇರಳದ ರಾಜಧಾನಿ ತಿರುವನಂತಪುರಮ್ ಕನ್ಯಾಕುಮಾರಿಯಿಂದ 85 ಕಿ.ಮೀ ದೂರದಲ್ಲಿದೆ. ಕನ್ಯಕುಮಾರಿಯು ಹುಣ್ಣಿಮೆಯ ದಿನ ಕಣ್ಣು ಕೋರೈಸುವ ಸೂರ್ಯೋದಯ ಮತ್ತು ಸೂರ್ಯಾಸ್ತಕ್ಕೆ ಹೆಸರುವಾಸಿಯಾಗಿದೆ.
ದೇವಸ್ಥಾನ ಮತ್ತು ಬೀಚ್ ಗಳು : ಕನ್ಯಾಕುಮಾರಿ ಮತ್ತು ಹತ್ತಿರದ ಪ್ರವಾಸಿ ಕೇಂದ್ರಗಳು
ಸೃಜನಶೀಲ ಮನಸ್ಸು ಹೊಂದಿರದ ಜನರಿಗೆ ಬಹುಶಃ ಇಲ್ಲಿನ ಕಲೆ ಮತ್ತು ಸಂಸ್ಕೃತಿಯಲ್ಲಿ ಹೆಚ್ಚು ಆಸಕ್ತಿ ಇರಲಾರದು. ಆದರೂ ಕನ್ಯಾಕುಮಾರಿಯಲ್ಲಿರುವ ದೇವಸ್ಥಾನಗಳು, ಬೀಚ್ಗಳು ಸಾಕಷ್ಟು ಯಾತ್ರಾರ್ಥಿಗಳನ್ನು ಮತ್ತು ಮೋಜಿಗೊಸ್ಕರ ಪ್ರಯಾಣಿಸುವ ಪ್ರವಾಸಿಗರನ್ನು ಆಕರ್ಷಿಸುತ್ತದೆ. ವಿವೇಕಾನಂದ ಬಂಡೆ, ವತ್ತಕೊಟ್ಟೈ ಕೋಟೆ, ಪದ್ಮನಾಭಪುರ ಅರಮನೆ, ತಿರುವಳ್ಳುವರ್ ಪ್ರತಿಮೆ, ಉದಯಗಿರಿ ಕೋಟೆ, ಗಾಂಧಿ ಮ್ಯೂಸಿಯಂ ಇವು ಈ ನಗರದ ಮುಖ್ಯ ಆಕರ್ಷಣೆಗಳಾಗಿವೆ.
ಈ ನಗರದ ಪವಿತ್ರ ಸ್ಥಳಗಳಾದ ಕನ್ಯಾಕುಮಾರಿ ದೇವಸ್ಥಾನ, ಚಿತರಾಲ್ ಬೆಟ್ಟ ದೇವಸ್ಥಾನ ಮತ್ತು ಜೈನ ಸ್ಮಾರಕಗಳು, ನಾಗರಾಜ ದೇವಸ್ಥಾನ, ಸುಬ್ರಮಣ್ಯ ದೇವಸ್ಥಾನ ಮತ್ತು ತಿರುವನ್ದಿಕರೈ ಗುಹಾಂತರ ದೇವಸ್ಥಾನಗಳು ಪ್ರಸಿದ್ಧಿ ಹೊಂದಿವೆ.
ಕುಟುಂಬ ಮತ್ತು ಸ್ನೇಹಿತರೊಂದಿಗೆ ಮೋಜಿಗೊಸ್ಕರ ಬರುವ ಪ್ರವಾಸಿಗರಿಗೆ ಕನ್ಯಾಕುಮಾರಿಯಲ್ಲಿರುವ ಬೀಚ್ ಗಳು ಹೆಚ್ಚು ಆಕರ್ಷಣೀಯ ಸ್ಥಳಗಳಾಗಿವೆ. ಸಂಗುತುರಾಯ್ ಬೀಚ್, ತೆಂಗಪತ್ತಿನಮ್ ಬೀಚ್, ಸೋಥಾವಿಲೈ ಬೀಚ್ ಇವುಗಳು ಹತ್ತಿರದಲ್ಲಿರುವ ಬೀಚ್ ಗಳಾಗಿವೆ.
ಕೇಪ್ ಕೊಮೊರಿನ್ ಇತಿಹಾಸ
ಕನ್ಯಾಕುಮಾರಿಯು ಕೇವಲ ಧರ್ಮ ಮತ್ತು ಕಲೆಗಳ ಬೀಡು ಮಾತ್ರವಲ್ಲ ವಾಣಿಜ್ಯ ಮತ್ತು ವ್ಯಾಪಾರಗಳಿಗೂ ಕೂಡ ಕೆಲವು ವರ್ಷಗಳಿಂದ ಜನಪ್ರಿಯಗೊಂಡಿದೆ. ಕನ್ಯಾಕುಮಾರಿಯನ್ನು ವಿವಿಧ ವಂಶಗಳಾದ ಚೋಳ, ಚೇರ, ಪಾಂಡ್ಯ ಮತ್ತು ನಾಯಕರು ಆಳಿದ್ದಾರೆ. ಇಲ್ಲಿನ ದೇವಸ್ಥಾನಗಳಲ್ಲಿ ಈ ವಂಶಸ್ಥರ ಕಲೆ ಮತ್ತು ನಾಗರೀಕತೆಯ ಕುರುಹುಗಳನ್ನು ಇಂದಿಗೂ ಕಾಣಬಹುದು.
ನಂತರ ಈ ಪಟ್ಟಣವು ವೇನಾಡ್ ಸಾಮ್ರಾಜ್ಯದ ಆಡಳಿತಕ್ಕೆ ಒಳಪಟ್ಟಿತು ಹಾಗು ಪದ್ಮನಾಭಾಪುರ ರಾಜಧಾನಿಯಾಗಿತ್ತು. 1729 ರಿಂದ 1758 ರ ವರೆಗೆ ಆಳಿದ ವೇನಾಡ್ ಸಾಮ್ರಾಜ್ಯದ ರಾಜ ಅಣಿಳಂ ತಿರುನಾಳ್ ಮಾರ್ತಾಂಡ ವರ್ಮನು ಅಂದು ಸ್ಥಾಪಿಸಿದ ತಿರುವಾಂಕೂರ್, ದಕ್ಷಿಣ ತಿರುವಾಂಕೂರ್ ಎಂದು ಪ್ರಸಿದ್ಧಿ ಪಡೆದಿತ್ತು. ಇಂದು ಇದು ಕನ್ಯಾಕುಮಾರಿಯಲ್ಲಿ ಬರುತ್ತದೆ.
ಪರವಾರ ರಾಜರ ಆಳ್ವಿಕೆಯ ನಂತರ, ಈ ನಗರ ತಿರುವಂಕೂರ್ ಚಕ್ರವರ್ತಿಗಳ ಆಡಳಿತದಲ್ಲಿ 1947ರ ವರೆಗೆ ಬ್ರಿಟೀಷರ ಸಂಪೂರ್ಣ ಹಿಡಿತದಲ್ಲಿತ್ತು. 1947 ರಲ್ಲಿ ಭಾರತ ಸ್ವತಂತ್ರವಾದ ನಂತರ ತಿರುವಂಕೂರವನ್ನು ಸ್ವಯಂ ಆಡಳಿತ ಭಾರತೀಯ ಒಕ್ಕೂಟದ ಒಂದು ಭಾಗವಾಯಿತು.
ಜನ ಮತ್ತು ಸಂಸ್ಕೃತಿ
ಕನ್ಯಾಕುಮಾರಿಯು ಅದರ ಕೆಲೆ, ಸಂಸ್ಕೃತಿ, ಆರ್ಥಿಕತೆ ಮತ್ತು ಇತಿಹಾಸಕ್ಕೆ ಸಾವಿರಾರು ವರ್ಷಗಳಿಂದ ಹೆಸರುವಾಸಿಯಾಗಿದೆ. ಈ ನಗರ ಹಿಂದೂ, ಮುಸ್ಲಿಂ, ಕ್ರೈಸ್ತ ಧರ್ಮದವರನ್ನು ಒಳಗೊಂಡಿದ್ದು ಎಲ್ಲ ಧರ್ಮದವರ ಮಿಶ್ರ ಸಂಸ್ಕೃತಿಯನ್ನು ಇಲ್ಲಿ ಕಾಣಬಹುದು. ಕಳೆದ ಕೆಲವು ಶತಮಾನಗಳಿಂದ ತನ್ನ ಸಾಂಸ್ಕೃತಿಕ ಪರಂಪರೆಯ ಮೂಲಕ ಕನ್ಯಾಕುಮಾರಿಯು ಸಾವಿರಾರು ಯಾತ್ರಾರ್ಥಿಗಳನ್ನು ಸೆಳೆಯುತ್ತಿದೆ. ಇಲ್ಲಿನ ಸುಂದರ ಚರ್ಚ್ ಗಳು, ದೇವಸ್ಥಾನಗಳು, ಧಾರ್ಮಿಕ ಸ್ಮಾರಕಗಳು ಪ್ರವಾಸಿಗರ ಗಮನ ಸೆಳೆಯುತ್ತಿದೆ. ಇಲ್ಲಿನ ಕಲೆ, ರಚನೆ, ಪಾಕಪದ್ಧತಿಗಳಲ್ಲಿ ಮಿಶ್ರ ಸಂಸ್ಕೃತಿಯನ್ನು ಕಾಣಬಹುದು. ಕನ್ಯಾಕುಮಾರಿಯ ಸಾಂಪ್ರದಾಯಿಕ ನೃತ್ಯ ಕಥಕ್ಕಳಿ. ಚಿತ್ರ ಪೂರ್ಣಿಮ, ನವರಾತ್ರಿ ಮತ್ತು ಕ್ಯಾಥೊಲಿಕ್ ಚರ್ಚ್ ನ ವಾರ್ಷಿಕ ಹಬ್ಬಗಳು ಇಲ್ಲಿ ನಡೆಯುವ ಮುಖ್ಯ ಆಚರಣೆಗಳಾಗಿವೆ.
ಕನ್ಯಾಕುಮಾರಿಯಲ್ಲಿ ಶಾಪಿಂಗ್
ಯಾವುದೆ ಪ್ರವಾಸಿಗನಿಗಾಗಲಿ ಎಲ್ಲೆ ಹೋದರೂ ಶಾಪಿಂಗ್ ಒಂದು ಅವಿಭಾಜ್ಯ ಅಂಗವಿದ್ದಂತೆಯೆ. ಆದರೆ ಸಿಕ್ಕಾಪಟ್ಟೆ ಶಾಪಿಂಗ್ ಮಾಡುವ ಹವ್ಯಾಸವುಳ್ಳ ಪ್ರವಾಸಿಗರಿಗೆ ಕನ್ಯಾಕುಮಾರಿ ಅಷ್ಟೊಂದು ಸೂಕ್ತ ಸ್ಥಳವಲ್ಲ. ಆದರೂ ಕೂಡ, ಅಷ್ಟೊಂದು ಸುಲಭವಾಗಿ ಮರೆಯಲಾಗದಂತಹ ಉತ್ತಮ ಕಾಣಿಕೆ ಅಥವಾ ವಸ್ತುಗಳನ್ನು ನಿಮ್ಮ ಪ್ರೀತಿಪಾತ್ರರಿಗೆ ಕೊಡಲು ಇಲ್ಲಿ ಖರೀದಿಸಬಹುದು. ವಿವಿಧ ರೀತಿಯ ಕಪ್ಪೆಚಿಪ್ಪುಗಳು ಅವುಗಳ ಪದಕಗಳು ಮತ್ತು ಅಲ್ಲಿಯ ಸ್ಥಳೀಯರು ಮಾಡಿದ ಕರಕುಶಲ ವಸ್ತುಗಳನ್ನು ಇಲ್ಲಿ ಕೊಂಡುಕೊಳ್ಳಬಹುದು. ಈ ಕರಕುಶಲ ವಸ್ತುಗಳನ್ನು ಮರ, ಬತ್ತ, ಬಿದಿರಿನಿಂದ ತಯಾರಿಸಲಾಗಿದ್ದು ಇವುಗಳನ್ನು ಗೃಹಾಲಂಕಾರಕ್ಕೊ, ನೆಂಟರಿಗೊ ಅಥವಾ ಸ್ನೇಹಿತರಿಗೊ ನೀಡಲು ತೆಗೆದುಕೊಳ್ಳಬಹುದು.
ಕಪ್ಪೆ ಚಿಪ್ಪಿನಿಂದ ಮಾಡಿದ ಸಣ್ಣ ಸಣ್ಣ ಆಭರಣಗಳು ಮತ್ತು ಬಹು ಬಣ್ಣದ ಕಡಲ ಮರಳುಗಳು ಶಾಪಿಂಗ್ ಗೆ ಸೂಕ್ತವಾಗಿದೆ. ಇಂಡ್ಕೊ ಪ್ರಾಡಕ್ಟ್ಸ್, ತಮಿಳುನಾಡು ಸಹಕಾರ ಮಾರಾಟ ಮಳಿಗೆ, ತಮಿಳುನಾಡು ಕರಕುಶಲ ಮತ್ತು ಪೂಂಪುಗಾರ್ ಇವು ಇಲ್ಲಿನ ಕರಕುಶಲ ವಸ್ತುಗಳು ಮತ್ತು ಜವಳಿ ಕೊಳ್ಳಲು ಇರುವ ಹೆಸರಾಂತ ಮಳಿಗೆಗಳಾಗಿವೆ. ರಸ್ತೆ ಬದಿಗಳಲ್ಲಿ ಮಾರಾಟವಾಗುವ ವಸ್ತುಗಳ ಬೆಲೆಗಳು ಸಮಂಜಸವಾಗಿರುತ್ತವೆ.
ಆಸೆ ಹುಟ್ಟಿಸುವ ರುಚಿಕರ ತಿನಿಸುಗಳು
ಕಡಲ ತಿನಿಸುಗಳು ಕನ್ಯಾಕುಮಾರಿಯಲ್ಲಿ ಪ್ರಖ್ಯಾತಿ. ಈ ತಿನಿಸುಗಳು ಖಾರವಾಗಿರುತ್ತವೆ ಮತ್ತು ತೆಂಗಿನ ಕಾಯಿಯನ್ನು ಸಾಮಾನ್ಯವಾಗಿ ಎಲ್ಲಾ ಆಹಾರಗಳಲ್ಲಿ ಬಳಸುತ್ತಾರೆ. ಇಲ್ಲಿನ ಹೆಚ್ಚಿನ ರೆಸ್ಟೋರೆಂಟ್ ಗಳಲ್ಲಿ ದಕ್ಷಿಣ ಭಾರತೀಯ ತಿನಿಸುಗಳಾದ ವಡೆ, ಇಡ್ಲಿ, ದೋಸೆ, ಉತ್ತಪ್ಪಗಳನ್ನು ತಯಾರಿಸಲಾಗುತ್ತದೆ. ಚೈನೀಸ್, ರಾಜಸ್ಥಾನಿ, ಗುಜರಾತಿ ಆಹಾರವನ್ನು ತಯಾರಿಸುವ ಕೆಲವು ರೆಸ್ಟೋರೆಂಟ್ ಗಳೂ ಇಲ್ಲಿವೆ.
ಕನ್ಯಾಕುಮಾರಿ ತಲುಪುವ ಮಾರ್ಗ :
ತಿರುವನಂತಪುರಂ ಕನ್ಯಾಕುಮಾರಿಗೆ ಹತ್ತಿರದಲ್ಲಿರುವ ವಿಮಾನ ನಿಲ್ದಾಣವಾಗಿದೆ. ವಿಮಾನ ನಿಲ್ದಾಣದಿಂದ ಟ್ಯಾಕ್ಸಿ, ಬಸ್, ರೈಲುಗಳ ಮೂಲಕ ಕನ್ಯಾಕುಮಾರಿಯನ್ನು ತಲುಪಬಹುದು. ಒಂದೊಮ್ಮೆ ಕನ್ಯಾಕುಮಾರಿಯಲ್ಲಿ ಇಳಿದರೆ ಆಟೋ ಅಥವಾ ಬಸ್ ನ ಮೂಲಕ ಪಟ್ಟಣದಲ್ಲಿ ಸುತ್ತಾಡಬಹುದು.
ಕನ್ಯಾಕುಮಾರಿ ನೋಡಲು ಸೂಕ್ತ ಸಮಯ
ಅಕ್ಟೋಬರ್ ನಿಂದ ಫೆಬ್ರುವರಿ ಅವಧಿಯು ಕನ್ಯಾಕುಮಾರಿಯ ಭೇಟಿಗೆ ಸೂಕ್ತವಾದ ಸಮಯವಾಗಿದೆ. ಈ ಸಂದರ್ಭದಲ್ಲಿ ವಾತಾವರಣ ಆಹ್ಲಾದಕರವಾಗಿರುತ್ತದೆ. ಜೂನ್ ನಿಂದ ಆಗಸ್ಟ್ ವರೆಗಿನ ಸಮಯದಲ್ಲಿ ಈ ಪ್ರದೇಶವು ಹೆಚ್ಚಿನ ಪ್ರಮಾಣದ ಮಳೆಯನ್ನು ಪಡೆಯುವುದರಿಂದ ಭೇಟಿಗೆ ಸೂಕ್ತವಲ್ಲ.