ನೈಸರ್ಗಿಕ ಸೌಂದರ್ಯಕ್ಕೆ ಹೆಸರುವಾಸಿಯಾದ ತೈಪರಂಬ ಎಂಬ ಪುರಸಭಾ ಪ್ರದೇಶ ಕಣ್ಣೂರಿನಿಂದ ಸುಮಾರು 21 ಕಿ.ಮೀ.ದೂರದಲ್ಲಿದೆ. ಇಡೀ ಪ್ರದೇಶವನ್ನು ಹಾವಿನಂತೆ ಸುತ್ತಿಕೊಂಡಿರುವ ಬೆಟ್ಟಗಳ ಸಾಲುಗಳು ಹಾಗೂ ವಿಶಾಲವಾದ ಮೈದಾನ ಪ್ರವಾಸಿಗರ ಅತ್ಯಂತ ಆಕರ್ಷಕ ತಾಣವಾಗಿದೆ. ಕುಪ್ಪಂ ಹಾಗೂ ವಾಲಪಟ್ಟನಂ ಎಂಬ ಎರಡು ನದಿಗಳು ಇಲ್ಲಿ ಹರಿಯುತ್ತಿರುವುದರಿಂದ ಈ ಪ್ರದೇಶ ಫಲವತ್ತಾಗಿದೆ.
ಪರಸಿನಿಕಡವು ಪ್ರದೇಶದಲ್ಲಿರುವ ಕುಟ್ಟಿಯೇರಿ ಹಾಗೂ ಮುತ್ತಪ್ಪನ್ ದೇವಸ್ಥಾನಗಳು ತೈಪರಂಬದ ಪ್ರಮುಖ ಆಕರ್ಷಣೆಯಾಗಿದೆ. ಪ್ರತೀ ವರ್ಷ ಮುತ್ತಪ್ಪನ್ ದೇವಸ್ಥಾನಕ್ಕೆ ಬರುವ ಪ್ರವಾಸಿಗರು ಹೆಚ್ಚಾಗುತ್ತಿದ್ದಾರೆ. ಈ ಪಟ್ಟಣದಲ್ಲಿ ಕೃಷಿ ವಿಜ್ಙಾನ ಕೇಂದ್ರ, ಮೆಣಸು ಸಂಶೋಧನಾ ಕೇಂದ್ರ ಹಾಗೂ ಪೆರಿಯಾರಂ ಮೆಡಿಕಲ್ ಕಾಲೇಜ್ ಅಲ್ಲದೆ ಅನೇಕ ಶಿಕ್ಷಣ ಸಂಸ್ಥೆಗಳಿದ್ದು ಇದೊಂದು ಹೆಸರಾಂತ ವಿದ್ಯಾ ಕೇಂದ್ರವೂ ಆಗಿದೆ.
ತೈಪರಂಬದಲ್ಲಿ ಅನೇಕ ಧಾರ್ಮಿಕ ಕೇಂದ್ರಗಳಿದ್ದು ಕೇರಳಾ ರಾಜ್ಯದ ಅನೇಕ ಭಾಗಗಳಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಶಿವನ ದೇವಾಲಯವಾದ ಶ್ರೀ ರಾಜರಾಜೇಶ್ವರಿ ದೇವಸ್ಥಾನ, ಕೃಷ್ಣನನ್ನು ಆರಾಧಿಸುವ ತ್ರಿಚಂಬರಂ ದೇವಸ್ಥಾನ, ಈ ಪ್ರದೇಶದ ಪ್ರಮುಖ ಧಾರ್ಮಿಕ ಸ್ಥಳಗಳಾಗಿವೆ. ಈ ದೇವಸ್ಥಾನಗಳಲ್ಲಿ ನಡೆಯುವ ಉತ್ಸವಗಳಿಂದಾಗಿ ತೈಪರಂಬ ಸದಾ ಪ್ರವಾಸಿಗರಿಂದ ಕೂಡಿರುತ್ತದೆ.